ಕೋಲಾರ: `ವಿದ್ಯಾರ್ಥಿಗಳ ದಾಖಲಾತಿ ಇಲ್ಲದ ನೆಪದಲ್ಲಿ ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ನಿರ್ಧಾರ ಸರಿಯಲ್ಲ. ಈ ನಿಟ್ಟಿನಲ್ಲಿ ಸರ್ಕಾರ ತನ್ನ ನಿರ್ಧಾರ ಮತ್ತೆ ಪರಿಶೀಲಿಸಬೇಕು~ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾ ಯಣಸ್ವಾಮಿ ಆಗ್ರಹಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಾಧಕ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಶಾಲೆಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕರಿಗೆ 70-80 ಯೋಜನೆ ಅನುಷ್ಠಾನ, ದಾಖಲಾತಿ ನಿರ್ವಹಣೆಯ ಹೊಣೆ ನೀಡು ವುದರಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಅವರು ಸಮರ್ಪಕವಾಗಿ ನಿಭಾಯಿಸಲು ಸಾಧ್ಯ ವಾಗುವುದಿಲ್ಲ. ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮೊದಲ ಸ್ಥಾನ: ಸಚಿವ ಆರ್.ವರ್ತೂರು ಪ್ರಕಾಶ್ ಮಾತನಾಡಿ, ಮಕ್ಕಳಲ್ಲಿ ಸ್ವಯಂ ಪ್ರೇರಿತ ಓದುವ ಆಸಕ್ತಿ ಬೆಳೆಸುವ ಮೂಲಕ ಎಸ್ಸೆಸ್ಸಲ್ಸಿ ಫಲಿತಾಂಶದಲ್ಲಿಜಿಲ್ಲೆಯನ್ನು ಮೊದಲನೇ ಸ್ಥಾನಕ್ಕೇರಿಸಲು ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್, ಶೇ.84.46 ಫಲಿತಾಂಶ ದೊಂದಿಗೆ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ 8 ನೇ ಸ್ಥಾನಕ್ಕೇರಲು ಶಿಕ್ಷಕರ, ಅಧಿಕಾರಿಗಳ, ಪೋಷಕರ ಸಹಕಾರ ಎಲ್ಲವೂ ಇದೆ ಎಂದರು.
ಈ ಬಾರಿ 43 ಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿದ್ದು, ಈ ಶಾಲೆಗಳ ಮುಖ್ಯಶಿಕ್ಷಕರು, ವಿವಿಧ ವಿಷಯಗಳಲ್ಲಿ ಶೇ.100 ಸಾಧನೆ ತೋರಿರುವ ವಿಷಯ ಶಿಕ್ಷಕರು 485 ಮಂದಿ, ಸಾಧನೆ ತೋರಿದ 13 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಸಿಇಒ ಎನ್.ಶಾಂತಪ್ಪ, ಜಿ.ಪಂ. ಉಪಾಧ್ಯಕ್ಷ ಜಿ. ಸೋಮಶೇಖರ, ಅಕ್ಷರ ದಾಸೋಹ ಅಧಿಕಾರಿ ಕೆ.ಎಸ್.ನಾಗರಾಜಗೌಡ, ಶಿಕ್ಷಣಾ ಧಿಕಾರಿ ಗಳಾದ ಸುಬ್ರಹ್ಮಣ್ಯಂ, ಶ್ರೀನಿವಾಸಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಲಿಂಗಯ್ಯ, ಪದ್ಮನಾಭ್, ಕೃಷ್ಣಮೂರ್ತಿ, ವಿಕ್ಟರ್, ರಾಮಕಷ್ಣಾರೆಡ್ಡಿ ಇದ್ದರು. ಮುನಿರಾಜು ತಂಡದ ನಾಡಗೀತೆ ಪ್ರಸ್ತುತ ಪಡಿಸಿದರು.
ಇಲಾಖೆ ಉಪನಿರ್ದೇಶಕ ಗೋವಿಂದಯ್ಯ ಸ್ವಾಗತಿಸಿದರು. ಸಿ.ಆರ್.ಅಶೋಕ್ ನಿರೂಪಿಸಿದರು. ವಂದಿಸಿದರು.
ರಂಗಮಂದಿರದಲ್ಲಿ ಕುರ್ಚಿಗಳೂ ಭರ್ತಿ ಯಾದ ಹಿನ್ನೆಲೆಯಲ್ಲಿ ಶಿಕ್ಷಕರು ರಂಗಮಂದಿರ ಒಳ ಆವರಣದ ಪಡಸಾಲೆಯಲ್ಲಿ ಕುಳಿತು ಪಾಲ್ಗೊಂಡರು. ಮುಖ್ಯದ್ವಾರದಲ್ಲಿ ಕುಳಿತ ಶಿಕ್ಷಕರಿಗೆ ದೂರದರ್ಶನ ವೀಕ್ಷಣೆ ಸೌಲಭ್ಯವನ್ನು ಒದಗಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.