ಮದ್ದೂರು: ಸಮೀಪದ ಆಲೂರು ಸರ್ಕಾರಿ ಪ್ರೌಢಶಾಲೆಗೆ ಸೋಮವಾರ ಭೇಟಿ ನೀಡಿದ ಸಂಸದೆ ರಮ್ಯಾ ಅವರು ಶಾಲೆಯಲ್ಲಿ ದೊರಕುತ್ತಿರುವ ಸವಲತ್ತುಗಳ ಬಗೆಗೆ ಮಕ್ಕಳೊಂದಿಗೆ ಚರ್ಚೆ ನಡೆಸಿದರು.
ಶಾಲೆಯಲ್ಲಿ ದೊರಕುತ್ತಿರುವ ಬಿಸಿಯೂಟ ನಿರ್ವಹಣೆ, ಪಠ್ಯಪುಸ್ತಕ ಹಾಗೂ ಸಮವಸ್ತ್ರ ಸಕಾಲಕ್ಕೆ ವಿತರಣೆಯಾಗಿರುವ ಬಗೆಗೆ ಖಾತರಿಪಡಿಸಿಕೊಂಡ ಅವರು, 8ನೇ ತರಗತಿ ಮಕ್ಕಳಿಗೆ ಇನ್ನೂ ಬೈಸಿಕಲ್ ವಿತರಣೆಯಾಗದಿರುವ ಬಗೆಗೆ ಮಕ್ಕಳಿಂದ ಮಾಹಿತಿ ಸ್ವೀಕರಿಸಿದರು. ಇತ್ತೀಚೆಗೆ ಮಳೆ ಗಾಳಿಗೆ ಶಾಲೆಯ ಶೌಚಾಲಯದ ಮೇಲ್ಛಾವಣಿ ಹಾರಿ ಹೋಗಿರುವುದನ್ನು ವೀಕ್ಷಿಸಿದ ಅವರು, ಲಭ್ಯವಿರುವ ಅನುದಾನದಲ್ಲಿ ಕೂಡಲೇ ಶೌಚಾಲಯ ದುರಸ್ತಿಗೆ ಮುಂದಾಗಬೇಕೆಂದು ಮುಖ್ಯಶಿಕ್ಷಕರಿಗೆ ಸೂಚಿಸಿದರು.
ಶಾಲೆಗೆ ಅಗತ್ಯಬೇಕಿರುವ ಕಾಂಪೌಂಡ್ ನಿರ್ಮಾಣ ಸೇರಿದಂತೆ ಶಾಲಾ ಕಟ್ಟಡದ ಮೇಲ್ಛಾವಣಿಗೆ ಚುರಕಿ ಗಾರೆ ಅಳವಡಿಸುವ ಕುರಿತು ಮನವಿ ಸ್ವೀಕರಿಸಿ ಶೀಘ್ರದಲ್ಲಿಯೇ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು. ಅಹವಾಲು ಸ್ವೀಕಾರ: ಬಳಿಕ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿದ ಅವರು, ಆಲೂರು ಏತನೀರಾವರಿ ಯೋಜನೆಯ ಪುನಶ್ಚೇತನ, ಬೀರೇಶ್ವರ ಸಮುದಾಯ ಭವನದ ದುರಸ್ತಿ ಸೇರಿದಂತೆ ಮಂಚಮ್ಮ ಹಾಗೂ ಆಲೂರುಮ್ಮ ದೇಗುಲಗಳ ಪುನಶ್ಚೇತನಗೊಳಿಸುವ ಸಂಬಂಧ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದರು.
ನಂತರ ಅಲ್ಲಿಂದ ತೈಲೂರು, ಕೆ. ಹೊನ್ನಲಗೆರೆ, ಕೆ. ಬೆಳ್ಳೂರು, ಕೂಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಜನರಿಂದ ಅಲ್ಲಿನ ಸ್ಥಳೀಯ ಸಮಸ್ಯೆಗಳ ಬಗೆಗೆ ಮನವಿ ಸ್ವೀಕರಿಸಿದರು. ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಕೆಪಿಸಿಸಿ ಸದಸ್ಯ ಎಸ್. ಗುರುಚರಣ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ. ಸಂದರ್ಶ, ಕಾಂಗ್ರೆಸ್ ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಸೌಭಾಗ್ಯ ಮಹದೇವು, ಆಲೂರು ಎ. ದಿನೇಶ್, ಪಿ. ಸುರೇಶ್, ಎ.ಆರ್. ನಾಗೇಂದ್ರ, ಎ.ಎಲ್. ಆನಂದ್, ಎ.ಎನ್. ನಂಜುಂಡಯ್ಯ ಸೇರಿದಂತೆ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.