ರಿಪ್ಪನ್ಪೇಟೆ: ಕಳೆದ 12 ವರ್ಷಗಳಿಂದ ನಾಲ್ಕು ಸರ್ಕಾರ ಅಧಿಕಾರಕ್ಕೆ ಬಂದರೂ, ಪಟ್ಟಣದ ಸರ್ಕಾರಿ ಹೆರಿಗೆ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರ ಬಳಕೆಗೆ ಲಭ್ಯವಿಲ್ಲದಂತಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೃದಯ ಭಾಗದಲ್ಲಿರುವ ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಏಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, 75ಕ್ಕೂ ಹೆಚ್ಚು ಮಜಿರೆ ಹಳ್ಳಿಗಳು ಸೇರ್ಪಡೆಗೊಂಡಿವೆ.
ಇದನ್ನು ಮನಗಂಡು ಗ್ರಾಮೀಣ ಜನರ ಅನುಕೂಲಕ್ಕಾಗಿ ಈ ಹಿಂದೆ 2001ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಸಂಸತ್ ಸದಸ್ಯ ಸಂದರ್ಭದಲ್ಲಿ ಸಾರ್ವಜನಿಕರ ರೂ. 1ಲಕ್ಷ ವಂತಿಕೆ ಸಂಗ್ರಹದೊಂದಿಗೆ ರೂ. 10 ಲಕ್ಷ ವೆಚ್ಚದ ಸರ್ಕಾರದ ಅನುದಾನದಲ್ಲಿ 10 ಹಾಸಿಗೆಗಳ ಹೆರಿಗೆ ಆಸ್ಪತ್ರೆಗೆ ಕಾಮಗಾರಿಗೆ ಚಾಲನೆ ನೀಡಿ, ಶಂಕುಸ್ಥಾಪನೆಯನ್ನೂ ನೆರವೇರಿಸಿದರು.
ಗುಣಮಟ್ಟ ಕಾಯ್ದುಕೊಳ್ಳದ ಗುತ್ತಿಗೆದಾರನ ಕಾಮಗಾರಿಯಲ್ಲಿನ ವಿಳಂಬದಿಂದಾಗಿ ಕಟ್ಟಡ ನಿರ್ಮಾಣದ ವೆಚ್ಚ ಸುಮಾರು ರೂ.30 ಲಕ್ಷಕ್ಕೆ ತಲುಪಿದರೂ ಇನ್ನು ಅಪೂರ್ಣವಾಗಿದೆ. ತೇಪೆ ಹಚ್ಚುತ್ತಲೇ ಸಾಗುತ್ತಿದೆ.
ಕುಂಟುತ್ತಾ ಸಾಗಿದ ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಅಂದಿನಿಂದಲೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ, ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ, ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಹಾಗೂ ಹಲವರು ಪ್ರತಿಭಟನೆ, ಧರಣಿ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಇದೀಗ ಕಳಪೆ ಕಾಮಗಾರಿಯಿಂದ ಶಿಥಿಲಗೊಂಡು ಸೋರುವ ಕಟ್ಟಡಕ್ಕೆ ಹೊಸ ಸೀರೆಯಂತೆ ಮೆಲ್ಛಾವಣಿಯ ಹೊದಿಕೆ ಹಾಕಿ, ತರಾತುರಿಯಲ್ಲಿ ಅಪೂರ್ಣ ಕಾಮಗಾರಿಯ ಕಟ್ಟಡಕ್ಕೆ ಸುಣ್ಣ- ಬಣ್ಣ ಲೇಪಿಸಲಾಗಿದೆ. ಆದರೆ, ಹಳೆ ಸಾಮಾಗ್ರಿಗಳು, ತುಕ್ಕುಹಿಡಿದ ಕಬ್ಬಿಣದ ಮಂಚಗಳು ಹಾಗೂ ಹರಕಲು ಹಾಸಿಗೆಗಳು ಮಾತ್ರ ಎಂದಿನಂತೆ ಬಿದ್ದಿವೆ.