ವೈಟ್ಫೀಲ್ಡ್: ಅವ್ಯವಸ್ಥೆ ಕಾರಣದಿಂದ ತಮಿಳುನಾಡು-ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಸರ್ಜಾಪುರ ರಸ್ತೆಯಲ್ಲಿ ಮಳೆ ಬಂದಾಗ ವಾಹನ ಸವಾರರಿಗೆ ನರಕ ಯಾತನೆ ಅನುಭವಿಸುತ್ತಾರೆ.
ನಿತ್ಯ ಸಾವಿರಾರು ವಾಹನಗಳು ಈ ರಸ್ತೆ ಮೂಲಕ ದೊಮ್ಮಸಂದ್ರ-ಹೊಸಕೋಟೆ ಮತ್ತು ರಾಷ್ಟ್ರೀಯ ಹೆದ್ದಾರಿ-7ಕ್ಕೆ ಸಂಪರ್ಕ ಕಲ್ಪಿಸುವ ದೊಮ್ಮಸಂದ್ರ-ಚಂದಾಪುರ ರಸ್ತೆಗಳಲ್ಲಿ ಸಂಚಾರ ನಡೆಸುತ್ತವೆ. ಉತ್ತಮ ಡಾಂಬರು ರಸ್ತೆ ಇದ್ದರೂ ಸಂಚಾರದಲ್ಲಿ ವ್ಯತ್ಯಯ ಆಗುತ್ತಿದೆ. ಕಿರಿದಾದ ರಸ್ತೆಗಳಲ್ಲಿ ಭಾರಿ ವಾಹನಗಳ ಓಡಾಟದಿಂದ ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.
`ಈ ರಸ್ತೆಗಳು ಲೋಕೋಪಯೋಗಿ ಇಲಾಖೆಯ ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ಉಪವಿಭಾಗದ ವ್ಯಾಪ್ತಿಗೆ ಬರುತ್ತಿದ್ದು, ರಸ್ತೆಯ ಇಕ್ಕೆಲಗಳ ಕಾಲುವೆಗಳನ್ನು ದುರಸ್ತಿ ಮಾಡದಿರುವುದು ನೀರು ನಿಲ್ಲಲು ಕಾರಣ' ಎನ್ನುತ್ತಾರೆ ದೊಮ್ಮಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಧನರಾಜ್. ಈ ಕಾಲುವೆಗಳ ದುರಸ್ತಿಗಾಗಿ ಪ್ರತಿ ಕಿ.ಮೀ.ಗೆ 30 ಸಾವಿರದಂತೆ ಪ್ರತಿ ವರ್ಷ ಮಾಡಲಾಗುತ್ತಿದೆ. ಆದರೆ, ಸಂಬಂಧಪಟ್ಟ ಎಂಜಿನಿಯರ್ಗಳು ಸರಿಯಾಗಿ ಕಾಮಗಾರಿ ಮಾಡಿಸುತ್ತಿಲ್ಲ.
ದೊಮ್ಮಸಂದ್ರ ಮತ್ತು ಸರ್ಜಾಪುರ ಸಮೀಪ ಅನೇಕ ಶಾಲೆಗಳಿದ್ದು, ನೂರಾರು ಶಾಲಾ ವಾಹನಗಳು ಈ ಮಾರ್ಗಗಳಿಂದ ಓಡಾಡುತ್ತಿವೆ. ದೊಮ್ಮಸಂದ್ರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲ. ಹೀಗಾಗಿ ಇಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ದೂರಿದರು.
ಈ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ, ಕಾಲುವೆಗಳ ದುರಸ್ತಿ, ಉದ್ದೇಶಿತ ಸರ್ಜಾಪುರ-ಬೆಂಗಳೂರು ರಸ್ತೆ ವಿಸ್ತರಣೆ ನಡೆಸಿದರೆ ಸಮಸ್ಯೆ ನಿವಾರಣೆ ಆಗಲಿದೆ' ಎಂದು ಬಿಜೆಪಿ ಮುಖಂಡ ರಾಜೇಶ್ ಸಲಹೆ ನೀಡಿದರು.
ಪೊಲೀಸರ ನಿರ್ಲಕ್ಷ್ಯ
ಸರ್ಜಾಪುರ ರಸ್ತೆ ಸಂಚಾರದಟ್ಟಣೆ ಸಮಸ್ಯೆಗೆ ರಸ್ತೆ ಬದಿ ತಲೆ ಎತ್ತಿರುವ ಅನಧಿಕೃತ ವಾಣಿಜ್ಯ ಮಳಿಗೆ ಮತ್ತು ಖಾಸಗಿ ವಾಹನಗಳ ನಿಲುಗಡೆ ಕಾರಣ. ಇವುಗಳ ತೆರವು ಮಾಡುವಂತೆ ನೋಟಿಸ್ ನೀಡಿದ್ದರೂ ಮಾಲೀಕರು ಗಮನ ಹರಿಸಿಲ್ಲ. ಪೊಲೀಸರು ತೆರವು ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ರಸ್ತೆ ವಿಸ್ತರಣೆ ಕಾರ್ಯ ವಿಳಂಬ ಆಗಲಿದ್ದು, ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
-ಶ್ರೀಕಾಂತ್, ಕಿರಿಯ ಸಹಾಯಕ ಎಂಜಿನಿಯರ್, ಆನೇಕಲ್ ಉಪವಿಭಾಗ, ಲೋಕೋಪಯೋಗಿ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.