ಸುಬ್ರಹ್ಮಣ್ಯ: ಭಾರತ ಟೆಸ್ಟ್ ತಂಡದ ಅನುಭವಿ ಆಟಗಾರ ವಿ.ವಿ.ಎಸ್. ಲಕ್ಷ್ಮಣ್, ಪತ್ನಿ ಶೈಲಜಾ ಅವರೊಂದಿಗೆ ಗುರುವಾರ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿದರು.
ದೇವರ ದರ್ಶನ ಪಡೆದ ಅವರು ಬಳಿಕ ಶ್ರೀಆದಿ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ಸರ್ಪಸಂಸ್ಕಾರ ಪೂಜೆ ನಡೆಸಿದರು. ಶುಕ್ರವಾರ ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇವೆ ಸಲ್ಲಿಸುವರು. ಪೂಜೆಯ ವೈದಿಕ ವಿಧಿವಿಧಾನಗಳನ್ನು ಕ್ಷೇತ್ರ ಪುರೋಹಿತ ಸರ್ವೇಶ್ವರ್ ಭಟ್ ಕೇಕುಣ್ಣಾಯ ನೆರವೇರಿಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಸರ್ಪಸಂಸ್ಕಾರ ಸೇವೆ ಸಲ್ಲಿಸುತ್ತಿರುವ ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲಿ ಲಕ್ಷ್ಮಣ್ ಮೂರನೆಯವರು.ಈ ಹಿಂದೆ ಸಚಿನ್ ತೆಂಡೂಲ್ಕರ್, ರಾಬಿನ್ ಉತ್ತಪ್ಪ ಕ್ಷೇತ್ರಕ್ಕೆ ಆಗಮಿಸಿ ಸೇವೆ ಸಲ್ಲಿಸಿದ್ದರು. ಮಧ್ಯಮ ಕ್ರಮಾಂಕದ ಆಟಗಾರ ರಾಹುಲ್ ದ್ರಾವಿಡ್, ಮಾಜಿ ಬೌಲರ್ ವೆಂಕಟೇಶಪ್ರಸಾದ್ ಕುಟುಂಬ ಕ್ಷೇತ್ರಕ್ಕೆ ಭೇಟಿ ನೀಡಿತ್ತು.