ಶನಿವಾರಸಂತೆ: ಸಮೀಪದ ಹೆಮ್ಮನೆ ಗ್ರಾಮದಲ್ಲಿ ಸರ್ವಧರ್ಮ ಸಮನ್ವಯ ಸಾರುವ ಸಂಕೇತವಾಗಿ ವೀರಗಣಪತಿ ಸೇವಾ ಸಮಿತಿಯು 14 ವರ್ಷಗಳಿಂದ ಪ್ರತಿವರ್ಷ ಗೌರಿ- ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದೆ.
ಗ್ರಾಮದಲ್ಲಿ 54 ಕುಟುಂಬಗಳಿದ್ದು, ಹಿಂದೂ-–ಮುಸ್ಲಿಂ– -ಕ್ರೈಸ್ತ ಧರ್ಮದ ಸದಸ್ಯರು ಒಂದಾಗಿ ವೀರಗಣಪತಿ ಸೇವಾ ಸಮಿತಿ ಸ್ಥಾಪನೆ ಮಾಡಿಕೊಂಡಿದ್ದಾರೆ. ಸಮಿತಿಯಲ್ಲಿ 20 ಮಂದಿ ಸದಸ್ಯರಿದ್ದು ಪ್ರತಿವರ್ಷ ಗೌರಿ-ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಈ ವೇಳೆ ಪ್ರತಿದಿನ ಸಂಜೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟ ಹಾಗೂ ಶ್ರೀರಾಮ ಭಜನೆ ಮಂಡಳಿಯಿಂದ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುತ್ತಿದೆ. ಸ್ಪರ್ಧಾ ಕಾರ್ಯಕ್ರಮ ಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ.
ಸಮಿತಿಯಲ್ಲಿ ಸರ್ವಧರ್ಮಗಳಿಗೂ ಪ್ರಾತಿನಿಧ್ಯವಿದೆ.15 ದಿನಗಳ ಕಾಲ ನಡೆವ ಗಣೇಶೋತ್ಸವದಲ್ಲಿ ಪ್ರತಿದಿನ ನಡೆಯುವ ಪೂಜಾ ಕಾರ್ಯಕ್ರಮಗಳಲ್ಲಿ ಹಲವಾರು ಜನರು ಪಾಲ್ಗೊಳ್ಳುತ್ತಾರೆ. ಪ್ರತಿನಿತ್ಯ ಪ್ರತಿಮನೆಯಿಂದ ವಿಶೇಷ ಪೂಜೆ ಮಾಡಲಾಗುತ್ತದೆ.
ಪೂಜಾಕಾರ್ಯಕ್ಕೆ ರೂ.1 ಲಕ್ಷ ವೆಚ್ಚ ಮಾಡಲಾಗುತ್ತಿದ್ದು, ಸಮಿತಿ ಸದಸ್ಯರೇ ಸ್ವಯಂ ಸೇವಕರಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.
ಸಮಿತಿಯ ಅಧ್ಯಕ್ಷರಾಗಿ ಸಮೀರ್, ಉಪಾಧ್ಯಕ್ಷರಾಗಿ ಬಸವರಾಜ್, ಕಾರ್ಯದರ್ಶಿಯಾಗಿ ಹೊನ್ನಪ್ಪ ಹಾಗೂ ಹಿಂದೂ-, ಮುಸ್ಲಿಂ-, ಕ್ರೈಸ್ತ ಧರ್ಮಗಳ 10 ನಿರ್ದೇಶಕರು ಇದ್ದಾರೆ.