ಮೈಸೂರು: ‘ಯುನಿವರ್ಸಲ್ ಹೆಲ್ತ್ ಕವರೇಜ್’ (ಯುಎಚ್ಸಿ) ಎಂಬ ನೂತನ ಯೋಜನೆಯನ್ನು ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದ ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ.
ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಯುಎಚ್ಸಿ ಯೋಜನೆ ಜಾರಿ ಬಗ್ಗೆ ಈಚೆಗೆ ಚರ್ಚಿಸಿದ್ದರು. ಇದರ ಫಲವಾಗಿ, ಯುಎಚ್ಸಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಅಗತ್ಯ ಏರ್ಪಾಡು ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸರ್ಕಾರ ಸೂಚಿಸಿದೆ.
ಏನಿದು ಯೋಜನೆ?: ಸಾರ್ವತ್ರಿಕ ಆರೋಗ್ಯ ರಕ್ಷಣೆ (ಯುಎಚ್ಸಿ) ಯೋಜನೆಯ ಉದ್ದೇಶ ಪ್ರತಿ ಯೊಬ್ಬರಿಗೂ ಅಗತ್ಯವಾದ ಆರೋಗ್ಯ ಸೇವೆ ಒದಗಿಸುವುದು. ವೈದ್ಯಕೀಯ ವೆಚ್ಚವನ್ನು ಕಡಿತಗೊಳಿಸಿ ಮೂಲಭೂತ ಮತ್ತು ಸುಧಾರಿತ ಆರೋಗ್ಯ ಸೇವೆಗಳನ್ನು ಪೂರೈಸುವ ಉದ್ದೇಶ ಹೊಂದಿದೆ. ಈಗಾಗಲೇ ಜಾರಿ ಯಲ್ಲಿರುವ ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಸೌಲಭ್ಯ ಗಳಿಂದ ವಂಚಿತರಾಗಿರುವವ ರನ್ನು ಗುರುತಿಸಿ ಯುಎಚ್ಸಿ ಯೋಜನೆಗೆ ನೋಂದಣಿ ಮಾಡಿಸಲಾಗುತ್ತದೆ. ನಂತರ ಫಲಾನು ಭವಿಗಳಿಗೆ ಆರೋಗ್ಯ ಮಾಹಿತಿ ಒಳಗೊಂಡಿರುವ ‘ನ್ಯಾಷನಲ್ ಹೆಲ್ತ್ ಎನ್ಟೈಟಲ್ಮೆಂಟ್ ಕಾರ್ಡ್’ (ಎನ್ಎಚ್ಇಸಿ) ನೀಡಲಾಗುತ್ತದೆ.
ಈ ಕಾರ್ಡ್ ತೋರಿಸಿ ಫಲಾನುಭ ವಿಗಳು ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆಯಬಹುದಾಗಿದೆ. ಕಡುಬಡವರಿಗೆ ಉಚಿತವಾಗಿ ಹಾಗೂ ಉಳಿದವರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಕಲ್ಪಿಸಲಾಗುತ್ತದೆ. ದುಬಾರಿ ಔಷಧ ಮತ್ತು ಚಿಕಿತ್ಸೆ ಸಾಧ್ಯವಾಗದೆ ಸಾವು-ನೋವುಗಳಿಗೆ ತುತ್ತಾಗುತ್ತಿದ್ದ ಹಿಂದುಳಿದ ಮತ್ತು ಬಡವರ್ಗದ ಜನತೆಗೆ ಈ ಯೋಜನೆ ವರದಾನ ವಾಗಲಿದೆ ಎನ್ನುತ್ತಾರೆ ವೈದ್ಯರು.
ಮೂಲಸೌಕರ್ಯ ಹೊಂದಿರುವ ಮೈಸೂರು ಜಿಲ್ಲೆ ಮತ್ತು ಅಭಿವೃದ್ಧಿ ವಂಚಿತ ರಾಯಚೂರು ಜಿಲ್ಲೆಯಲ್ಲಿ ಯುಎಚ್ಸಿ ಯೋಜನೆ ಜಾರಿಗೊಳಿ ಸುವ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸೆ. 25ರಂದು ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆ ಯಲಾಗಿದೆ. ಸಭೆಯಲ್ಲಿ ಯೋಜನೆಯ ಸಂಪೂರ್ಣ ಮಾಹಿತಿ, ಫಲಾನು ಭವಿಗಳನ್ನು ಗುರುತಿಸುವುದು, ಯೋಜ ನೆಯ ರೂಪುರೇಷೆ ಸೇರಿದಂತೆ ವಿಸ್ತೃತ ಚರ್ಚೆ ನಡೆಯಲಿದೆ.
ನಂತರದ ವಾರದಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಭೆ ನಡೆಸಿ ಕಾರ್ಯ ಯೋಜನೆ ರೂಪಿಸ ಲಾಗುತ್ತದೆ. ಈ ಎರಡೂ ಜಿಲ್ಲೆಗಳಲ್ಲಿ ಯೋಜನೆಯ ಫಲ ಶ್ರುತಿ ಗಮನಿಸಿ, ಹಂತ ಹಂತ ವಾಗಿ ದೇಶದಾದ್ಯಂತ ವಿಸ್ತರಿಸಲಾಗುತ್ತದೆ. ಜಿಲ್ಲಾಡಳಿತ, ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ, ಮಹಿಳಾ ಸಂಘಗಳು ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಸೇರಿದಂತೆ ಮುಂತಾದವರ ಸಹ ಕಾರದೊಂದಿಗೆ ಯೋಜನೆ ಅನುಷ್ಠಾನ ಗೊಳಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್ಒ) ರೂಪಿಸಿ ರುವ ಈ ಯೋಜನೆಗೆ ಕೇಂದ್ರ ಸರ್ಕಾರ ಹಣಕಾಸು ನೆರವು ನೀಡಲಿದೆ.
ಮಾದರಿ ಯೋಜನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವ ರೊಂದಿಗೆ ಈಚೆಗೆ ಥಾಯ್ಲೆಂಡ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ಯೂನಿವ ರ್ಸಲ್ ಹೆಲ್ತ್ ಕವರೇಜ್’ ಯೋಜನೆ ಬಗ್ಗೆ ಅಧ್ಯಯನ ಮಾಡಿದ್ದೇನೆ. ಈ ಯೋಜನೆ ಪ್ರತಿಯೊಬ್ಬರಿಗೂ ಗುಣ ಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶ ಹೊಂದಿದೆ. ರಾಜ್ಯದಲ್ಲಿ ಕನಿಷ್ಠ 6 ತಿಂಗಳೊಳಗೆ ಜಾರಿಗೊಳ್ಳಲಿರುವ ಈ ಯೋಜನೆ ಇಡೀ ದೇಶಕ್ಕೆ ಮಾದರಿ ಯೋಜನೆಯಾಗಲಿದೆ.
ಎಂ. ಮದನ್ ಗೋಪಾಲ್, ಪ್ರಧಾನ ಕಾರ್ಯದರ್ಶಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.