ಲಖನೌ (ಪಿಟಿಐ): ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಪ್ರಸ್ತಾವಿತ ಭಾರತ ಭೇಟಿಯ ವಿವಾದದ ಕಾವು ದಿನೇ ದಿನೇ ಏರುತ್ತಿರುವುದರ ನಡುವೆಯೇ, ದಾರುಲ್ ಉಲೂಮ್ ಫರಂಗಿಮಹಲ್ ಎಂಬ ಮತ್ತೊಂದು ಇಸ್ಲಾಂ ಧಾರ್ಮಿಕ ಪಂಗಡವು ರಶ್ದಿ ಭೇಟಿಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗಳನ್ನು ಸಮರ್ಥಿಸಿ ಫತ್ವಾ ಹೊರಡಿಸಿದೆ.
`ಕಾನೂನನ್ನು ಉಲ್ಲಂಘಿಸದೇ ಯಾವ ಯಾವ ಮಾರ್ಗಗಳಲ್ಲಿ ಸಾಧ್ಯವೋ ಆ ಮಾರ್ಗಗಳಲ್ಲಿ ಪ್ರವಾದಿ ಅವರ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದವರ ಭಾರತ ಭೇಟಿಯನ್ನು ಎಲ್ಲಾ ಮುಸ್ಲಿಮರು ವಿರೋಧಿಸಬೇಕು.
ಕೋಟ್ಯಂತರ ಮುಸ್ಲಿಮರು ವಾಸಿಸುತ್ತಿರುವ ಈ ರಾಷ್ಟ್ರಕ್ಕೆ ಅವರ ಕಾಲು ಸ್ಪರ್ಶಿಸಲು ಅವಕಾಶ ನೀಡಬಾರದು~ ಎಂದು ಪಂಗಡದ ಮೌಲಾನಾ ಖಾಲಿದ್ ರಶೀದ್ ಫರಂಗಿಮಹಲ್ ಹೇಳಿದ್ದಾರೆ.
`ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಕಾನೂನಿನ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ~ ಎಂದೂ ಅವರು ಹೇಳಿದ್ದಾರೆ.
ಈ ಮೊದಲು ರಶ್ದಿ ಭೇಟಿಗೆ ಭಾರತದ ಪ್ರಮುಖ ಇಸ್ಲಾಂ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ದಿಯೊಬಂದ್ ಮತ್ತು ಬರೆಲ್ವಿ ಪಂಗಡ ವಿರೋಧ ವ್ಯಕ್ತಪಡಿಸಿದ್ದವು.