ಹೊಸಕೋಟೆ: ವಾಲ್ಮೀಕಿ ಜನಾಂಗದವರು ಕೀಳರಿಮೆ ಬಿಟ್ಟು ಸಂಘಟಿತರಾಗಿ ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕು ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಕರೆ ನೀಡಿದರು.
ತಾಲ್ಲೂಕು ಆಡಳಿತ ಹೊಸಕೋಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, `ವಾಲ್ಮೀಕಿ ಒಂದು ಜಾತಿಗೆ ಮೀಸಲಾದವರಲ್ಲ. ಅವರು ರಚಿಸಿದ ರಾಮಾಯಣ ಹಿಂದೂಗಳ ಪವಿತ್ರ ಗ್ರಂಥವಾಗಿದೆ~ ಎಂದು ಬಣ್ಣಿಸಿದರು.
`ತಾಲ್ಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುವುದು. ಅಲ್ಲದೆ 6.5 ಕೋಟಿ ರೂಪಾಯಿ ವೆಚ್ಚದಲ್ಲಿ ಧರ್ಮೇಶ್ವರ ಕ್ಷೇತ್ರದಲ್ಲಿ ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆ ನಿರ್ಮಿಸಲಾಗುತ್ತಿದೆ~ ಎಂದು ಸಚಿವರು ತಿಳಿಸಿದರು.
ದಲಿತ ಕ್ರಿಯಾ ಸಮಿತಿಯ ಅಧ್ಯಕ್ಷ ಚಿ.ನಾ.ರಾಮು, `ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೀಸಲಾತಿ ವ್ಯಾಪ್ತಿಗೆ ಇತರೆ ಹತ್ತು ಹಲವು ಜಾತಿಗಳನ್ನು ಸೇರಿಸಿರುವುದರಿಂದ ಅದರ ದುರುಪಯೋಗವಾಗುತ್ತಿದೆ. ಇದರಿಂದ ಅರ್ಹರು ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಶೋಷಿತ ಸಮುದಾಯ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ~ ಎಂದು ಕರೆ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಜಿ.ಪಂ.ಸದಸ್ಯ ತಿರುವರಂಗ ನಾರಾಯಣಸ್ವಾಮಿ, ತಹಶೀಲ್ದಾರ್ ಬಿ.ಮಲ್ಲಿಕಾರ್ಜುನ, ಮುಖಂಡ ಬಿ.ಬಸವಯ್ಯ ಮಾತನಾಡಿದರು.
ಜಿ.ಪಂ.ಉಪಾಧ್ಯಕ್ಷೆ ಶಾಂತಮ್ಮ ಅಧ್ಯಕ್ಷತೆ ವಹಿಸಿದ್ದರು.ದೇವರಾಜ್ ಸ್ವಾಗತಿಸಿದರು. ಇದಕ್ಕೂ ಮುನ್ನ ವಾಲ್ಮೀಕಿ ಅವರ ಭಾವಚಿತ್ರವನ್ನು ಅಲಂಕೃತ ಪಲ್ಲಕ್ಕಿಯಲ್ಲಿರಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.