ಬೆಂಗಳೂರು: `ಸೇನೆ ದೇಶದ ಬೆನ್ನೆಲುಬು ಇದ್ದಂತೆ. ಕೆಡೆಟ್ಗಳು ರಕ್ಷಣಾ ಇಲಾಖೆ ಹಾಗೂ ನಾಗರಿಕ ವಿಮಾನಯಾನ ಇಲಾಖೆಯ ಸೇವೆಗೆ ಸೇರಬೇಕು~ ಎಂದು ಕೇಂದ್ರ ತರಬೇತಿ ವಿಭಾಗದ ಮುಖ್ಯಸ್ಥ ಏರ್ ಮಾರ್ಷಲ್ ಪಿ.ಪಿ.ರೆಡ್ಡಿ ಸಲಹೆ ನೀಡಿದರು.
ಎನ್ಸಿಸಿ ನಿರ್ದೇಶನಾಲಯದ ಕರ್ನಾಟಕ ಹಾಗೂ ಗೋವಾ ಘಟಕದ ಆಶ್ರಯದಲ್ಲಿ ನಗರದ ಜಕ್ಕೂರು ಏರ್ಫೀಲ್ಡ್ನಲ್ಲಿ ಗುರುವಾರ ನಡೆದ ಅಖಿಲ ಭಾರತ ವಾಯು ಸೈನಿಕ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
`ರಾಷ್ಟ್ರದ ಅಭಿವೃದ್ಧಿಯಲ್ಲಿ ನಾಗರಿಕ ವಿಮಾನಯಾನ ಹಾಗೂ ರಕ್ಷಣಾ ಇಲಾಖೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಈ ಇಲಾಖೆಗಳಿಗೆ ಎನ್ಸಿಸಿ ವಾಯುದಳ ವಿಭಾಗದಿಂದ ಉತ್ತಮ ಕೆಡೆಟ್ಗಳು ದೊರಕುತ್ತಿದ್ದಾರೆ~ ಎಂದರು.
ದೇಶಾದಾದ್ಯಂತದ 600 ಎನ್ಸಿಸಿ ಕೆಡೆಟ್ಗಳು ಶಿಬಿರದಲ್ಲಿ ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ಶಿಬಿರಾರ್ಥಿಗಳಿಗೆ ಅತ್ಯುತ್ತಮ ಕೆಡೆಟ್ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.
ತಮಿಳುನಾಡು, ಪುದುಚೇರಿ, ಅಂಡಮಾನ್- ನಿಕೋಬಾರ್ ಎನ್ಸಿಸಿ ನಿರ್ದೇಶನಾಲಯಗಳು ಸಮಗ್ರ ಪ್ರಶಸ್ತಿಯನ್ನು ಪಡೆದರೆ, ದ್ವಿತೀಯ ಸ್ಥಾನ ಮಧ್ಯಪ್ರದೇಶ ಹಾಗೂ ಛತ್ತೀಸ್ಗಡ ನಿರ್ದೇಶನಾಲಯದ ಪಾಲಾಯಿತು.
ರಾಜಸ್ತಾನ ನಿರ್ದೇಶನಾಲಯ ಏರೊಮಾಡೆಲಿಂಗ್ನಲ್ಲಿ, ಕರ್ನಾಟಕ ಹಾಗೂ ಗೋವಾ ನಿರ್ದೇಶನಾಲಯಕ್ಕೆ ಫೈರಿಂಗ್ನಲ್ಲಿ, ಕೇರಳ ಹಾಗೂ ಲಕ್ಷದ್ವೀಪ ಲೈನ್ ಏರಿಯಾ ವಿಭಾಗಗಳಲ್ಲಿ ಪ್ರಶಸ್ತಿಗೆ ಪಾತ್ರವಾದವು.
ಬಾಲಕರ ವಿಭಾಗದಲ್ಲಿ ಕಿಶೋರ್ ಸಿಂಗ್ ಭಂಡಾರಿ ಹಾಗೂ ಬಾಲಕಿಯರ ವಿಭಾಗದಲ್ಲಿ ಶ್ರದ್ಧಾ ಪಿ.ರಾಜು ಅತ್ಯುತ್ತಮ ಪೈಲೆಟ್ ಪ್ರಶಸ್ತಿಗೆ ಪಾತ್ರರಾದರು. ಆರೋಗ್ಯ ಹಾಗೂ ಸುರಕ್ಷೆ ವಿಭಾಗದಲ್ಲಿ ಕರ್ನಾಟಕ ಹಾಗೂ ಗೋವಾ ನಿರ್ದೇಶನಾಲಯದ ಟಿ.ಎಂ.ಸೌರವ್ ಚಿನ್ನದ ಪದಕ ಗೆದ್ದುಕೊಂಡರು. ಸೌರವ್ ನಗರದ ಸೇನಾ ಶಾಲೆಯ 11 ತರಗತಿಯ ವಿದ್ಯಾರ್ಥಿ. ಏರ್ ಕಮಾಡೋರ್ ಸಿ.ರಾಜೀವ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.