ದೇವದುರ್ಗ: ಶ್ರೇಷ್ಠ ಸಹಕಾರ ಧುರೀಣ ಪ್ರಶಸ್ತಿ ಪುರಸ್ಕ್ರತ, ಹಿರಿಯ ವಕೀಲ ದೌಲತಗೌಡ ಚನ್ನಪ್ಪಗೌಡ ಪಾಟೀಲ (ಡಿ.ಸಿ. ಪಾಟೀಲ ) (87) ಶುಕ್ರವಾರ ಬೆಳಿಗ್ಗೆ ಪಟ್ಟಣದ ಸಿದ್ದರಾಮೇಶ್ವರ ವಾರ್ಡ್ನ ಸ್ವಗೃಹದಲ್ಲಿ ನಿಧನರಾದರು.
ತಾಲ್ಲೂಕಿನ ಮುಷ್ಟೂರಿನ ಗೆಜ್ಜೆಭಾವಿ ಗ್ರಾಮ ಮೂಲದ ಡಿ.ಸಿ. ಪಾಟೀಲ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ ಮಹಾದೇವಮ್ಮ , ಮಗ ವಕೀಲ ಮಲ್ಲನಗೌಡ ಪಾಟೀಲ ಹಾಗೂ ಆರು ಜನ ಹೆಣ್ಣು ಮಕ್ಕಳು ಇದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಅವರು, 1973 ಹಾಗೂ 1987ರಿಂದ 1990ರವರೆಗೂ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಇದರ ನಿರ್ದೇಶಕರಾಗಿದ್ದರು.
1962ರಲ್ಲಿ ಬಸವೇಶ್ವರ ಸಹಕಾರ ಸಂಘ ಸ್ಥಾಪನೆಗೆ ಶ್ರಮ ವಹಿಸಿದ ಅವರು, 1976ರವರೆಗೂ ಗೌರವ ಕಾರ್ಯದರ್ಶಿಯಾಗಿ, ನಂತರ 1986ರಿಂದ 1994ವರೆಗೂ ಅಧ್ಯಕ್ಷ ಮತ್ತು ನಿರ್ದೇಶಕರಾಗಿದ್ದರು. ಗೆಜ್ಜೆಭಾವಿ ಕೃಷಿ ಸಹಕಾರ ಸಂಘ (ಎಸಿಎಸ್)ದ ನಿರ್ದೇಶಕರಾಗಿ, ಮುಷ್ಟೂರು ವಿಎಸ್ಎಸ್ಎಸ್ಎನ್ ಅಧ್ಯಕ್ಷರಾಗಿ ಮತ್ತು ಪಟ್ಟಣದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ 1979ರಿಂದ 1985ರವರೆಗೆ ಅದರ ಅಧ್ಯಕ್ಚರಾಗಿದ್ದರು.
1984ರಿಂದ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯಲ್ಲಿ ಇರುವ ಕೃಷ್ಣಾ ರೈತರ ಟ್ರ್ಯಾಕ್ಟರ್ ಮಾಲೀಕರ ಸಹಕಾರ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಹಾಗೂ 1996ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ನಿರ್ದೇಶಕರಾಗಿದ್ದಾರೆ.
ಅವರಿಗೆ 26ನೇ ಜುಲೈ 2007ರಲ್ಲಿ ಮೈಸೂರಿನಲ್ಲಿ ನಡೆದ ಸಹಕಾರ ಚಳುವಳಿಯ ಶತಮಾನೋತ್ಸವ ಸಮಾರಂಭದಲ್ಲಿ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿಯ ವತಿಯಿಂದ ‘ಶ್ರೇಷ್ಠ ಸಹಕಾರ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಭೇಟಿ: ಸಹಕಾರ ಕ್ಷೇತ್ರದಲ್ಲಿ ಹೆಸರು ಪಡೆದಿರುವ ಮೃತ ಡಿ.ಸಿ. ಪಾಟೀಲ ಅವರ ಒಡನಾಡಿ ವಿಧಾನ ಪರಿಷತ್ ಸದಸ್ಯರಾಗಿರುವ ಹಾಲಪ್ಪ ಆಚಾರ್, ಶಿಖರ ಮಠದ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.
ಸಂತಾಪ: ತಾಲ್ಲೂಕಿನ ಮಾನಸಗಲ್ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮೌನಾಚರಣೆ ಮಾಡಲಾಯಿತು. ಶಾಸಕ ಎ.ವೆಂಕಟೇಶ ನಾಯಕ, ಪಕ್ಷದ ಮುಖಂಡ ಬಿ.ವಿ. ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಿಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಶೇಖರ ನಾಯಕ ಸಂತಾಪ ಸೂಚಿಸಿದ್ದಾರೆ.
ಅಂತ್ಯ ಸಂಸ್ಕಾರ: ಶನಿವಾರ ಮಧ್ಯಾಹ್ನ 1ಗಂಟೆಗೆ ಗೆಜ್ಜೆಭಾವಿ ಗ್ರಾಮದಲ್ಲಿನ ಅವರ ತಮ್ಮ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮಗ ವಕೀಲ ಮಲ್ಲನಗೌಡ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.