ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಬ್ಯಾಂಕಿಂಗ್ ಕ್ಷೇತ್ರ ತಳಮಳ

Last Updated 12 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ...ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಶ್ರೇಷ್ಠ ತತ್ವದ ಬುನಾದಿಯ ಮೇಲೆ ಕಟ್ಟಿರುವ ಸಹಕಾರ ಕ್ಷೇತ್ರ, ಕೆಲ ಸಹಕಾರಿಗಳ ಸ್ವಾರ್ಥ ಹಾಗೂ ಅಧಿಕಾರಿಗಳ ಭ್ರಷ್ಟ ಮನಸ್ಥಿತಿಯಿಂದಾಗಿ ಇಂದು ತೀವ್ರ ಹಿನ್ನಡೆ ಅನುಭವಿಸುತ್ತಿದೆ.

ರಾಜ್ಯದಲ್ಲೇ ಅತ್ಯುತ್ತಮ ಸಹಕಾರ ಬ್ಯಾಂಕ್‌ ಎಂದು ಪ್ರಶಸ್ತಿ, ಪುರಸ್ಕಾರ ಪಡೆದಿದ್ದ, ಶಿವಮೊಗ್ಗ ಜಿಲ್ಲೆಯ ಜನರ ನಂಬಿಕೆಯ ಬ್ಯಾಂಕ್‌ ಎಂಬ ಹೆಗ್ಗಳಿಕೆ ಗಳಿಸಿದ್ದ, ರೂ. 1,000 ಕೋಟಿ ವಹಿವಾಟು ಹೊಂದಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್‌) ಹಗರಣ ಈಗ ಜನರು ಸಹಕಾರ ಕ್ಷೇತ್ರವನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.

ಏನಿದು ಹಗರಣ?
ಡಿಸಿಸಿ ಬ್ಯಾಂಕ್‌ನ ಅಮೀರ್‌ ಅಹಮದ್‌ ವೃತ್ತದಲ್ಲಿರುವ ನಗರ ಶಾಖೆಯಲ್ಲಿ ಇತ್ತೀಚೆಗೆ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ರೂ. 1.79 ಕೋಟಿ ವ್ಯತ್ಯಾಸ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಇನ್ನಷ್ಟು ಪರಿಶೋಧನೆ ನಡೆಸಿದ ಕೇಂದ್ರ ಕಚೇರಿಯ ಅಧಿಕಾರಿಗಳಿಗೆ ಅವ್ಯವಹಾರದ ವಾಸನೆ ಬಡೆದಿತ್ತು. ಕೂಡಲೇ, ಶಾಖೆಯ ವ್ಯವಸ್ಥಾಪಕಿ, ನಗದು ಶಾಖೆಯ ಸಿಬ್ಬಂದಿ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಜಿಲ್ಲಾ ಅಪರಾಧ ತನಿಖಾ ತಂಡ ರೂ. 62.77 ಕೋಟಿ ಹಣ ದುರ್ಬಳಕೆ ಆಗಿರುವುದನ್ನು ದೃಢಪಡಿಸಿದೆ.

ಚಿನ್ನದ ಸಾಲ ಕರಾಮತ್ತು
ಡಿಸಿಸಿ ಬ್ಯಾಂಕ್‌ನಲ್ಲಿ ಪೂರ್ತಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಬಂಗಾರದ ಅಡಮಾನ ಸಾಲದ ವ್ಯವಸ್ಥೆಯಲ್ಲಿ. ಶಾಖೆಯ

ವ್ಯವಸ್ಥಾಪಕಿ ಶೋಭಾ ಕೇವಲ 15 ಜನ ಸಂಬಂಧಿಕರ ಹೆಸರಿಗೆ  785  ಅಕ್ರಮ ಖಾತೆ ತೆರೆದು ಬಂಗಾರ ಅಡಮಾನ ಇಟ್ಟುಕೊಳ್ಳದೇ ರೂ. 62.77 ಕೋಟಿ ಸಾಲ ಎತ್ತಿದ್ದಾರೆ. ಹೀಗೆ ಎತ್ತಿದ ಸಾಲವನ್ನು ರಿಯಲ್‌ ಎಸ್ಟೇಟ್‌, ಷೇರು ಮಾರುಕಟ್ಟೆ, ಖಾಸಗಿ ಬಡ್ಡಿ, ಆನ್‌ಲೈನ್‌ ಗೋಲ್ಡ್‌ ಟ್ರೇಡ್‌ ಮತ್ತಿತರ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ.

ಸಾಲದಲ್ಲೂ ನಿಯಮ ಉಲ್ಲಂಘನೆ
ಯಾವ ಪ್ರಕಾರದ ಸಾಲ ಗರಿಷ್ಠ ಎಷ್ಟು ಪ್ರಮಾಣದಲ್ಲಿರಬೇಕು ಎನ್ನುವುದನ್ನು ಬ್ಯಾಂಕ್‌ನ ಸ್ಥಿತಿಗತಿ ಅವಲಂಭಿಸಿ, ಸ್ಥಳೀಯ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿಗದಿ ಮಾಡಲಾಗಿರುತ್ತದೆ.

ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಬಂಗಾರದ ಅಡಮಾನ ಸಾಲವನ್ನು ಒಬ್ಬ ವ್ಯಕ್ತಿಗೆ ಗರಿಷ್ಠ ರೂ. 5 ಲಕ್ಷಕ್ಕೆ ನಿಗದಿ ಮಾಡಿದೆ. ಆದರೆ, ಬ್ಯಾಂಕ್‌ ವ್ಯವಸ್ಥಾಪಕಿ ನಿಯಮ ಮೀರಿ ಒಬ್ಬರಿಗೆ ರೂ. 15 ಲಕ್ಷದವರೆಗೂ ಸಾಲ ನೀಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಇದೊಂದೇ ಬ್ಯಾಂಕ್‌ ಕತೆಯಲ್ಲ...
ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಹಗರಣ ಸದ್ಯದ ಒಂದು ಉದಾಹರಣೆ ಅಷ್ಟೇ. ಡಿಸಿಸಿ ಬ್ಯಾಂಕ್‌ನಂತಹ ಎಷ್ಟೋ ಸಹಕಾರ ಬ್ಯಾಂಕ್‌ಗಳು, ಸೊಸೈಟಿಗಳು ಹೀಗೆ ನಿಯಮ ಉಲ್ಲಂಘಿಸಿ, ಬೇಕಾಬಿಟ್ಟಿ ಸಾಲ ನೀಡಿದ, ಹಣ ದುರುಪಯೋಗ ಪಡಿಸಿಕೊಂಡ ಪರಿಣಾಮ ನಷ್ಟದ ಹಾದಿ ಹಿಡಿದಿವೆ. ಕೆಲವು ಶಾಶ್ವತವಾಗಿ ಸಮಾಪನೆ (ಲಿಕ್ವಿಡೇಷನ್‌) ಆಗಿವೆ. ಎಷ್ಟೊ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳ ಆಸ್ತಿ ಮಾರಿ ಗ್ರಾಹಕರ ಅಲ್ಪಸ್ವಲ್ಪ ಹಣ ಹಿಂದಿರುಗಿಸಲಾಗಿದೆ.

ಸಂಘ ರಚನೆ ಮೂಲದಲ್ಲೇ ಲೋಪ!
ಪರಸ್ಪರ ಸಹಕಾರ, ನಂಬಿಕೆಯ ಅಮೂಲ್ಯ ತತ್ವಗಳ ಬುನಾದಿಯ ಮೇಲೆ ಅಸ್ತಿತ್ವಕ್ಕೆ ಬಂದ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್‌ಗಳು ಇಂದು  ಆರ್ಥಿಕ ನಷ್ಟ ಅನುಭವಿಸಲು, ಪತನದ ಹಾದಿಯಲ್ಲಿ ಸಾಗಲು ಅವುಗಳ ಮೂಲ ರಚನೆಯ ಲೋಪವೇ ಕಾರಣ ಎನ್ನುತ್ತಾರೆ ಸಹಕಾರಿ ಧುರೀಣರು.

ಯಾವುದೇ ಒಂದು ಸಹಕಾರ ಸಂಸ್ಥೆ ಅಸ್ತಿತ್ವಕ್ಕೆ ಬರಲು ಮೊದಲು ಸಹಕಾರ ಮನೋಭಾವದ ಸಮಾನ ಮನಸ್ಕರು ಒಂದೆಡೆ ಸೇರಿ ಅವರಲ್ಲೇ ಯೋಗ್ಯರಾದ ಒಬ್ಬರನ್ನು ಮುಖ್ಯ ಪ್ರವರ್ತಕರನ್ನಾಗಿ ನೇಮಿಸಬೇಕು. ನಂತರ ಸಂಘದ ಧ್ಯೇಯ ಉದ್ದೇಶವನ್ನು ಸದಸ್ಯರಾಗುವ ಅರ್ಹತೆ ಇರುವವರಿಗೆ ತಿಳಿಸಿ, ಅಂತಹವರಿಂದ ಪ್ರಾಥಮಿಕ ಷೇರು ಸಂಗ್ರಹಿಸಬೇಕು. ಹೀಗೆ ಸಂಗ್ರಹಿಸಿದ ಷೇರು ಮೊತ್ತವನ್ನು ಸೂಚಿತ ಬ್ಯಾಂಕ್‌ನ ಅಮಾನತು ಖಾತೆಯಲ್ಲಿಡಬೇಕು. ನಂತರ ಸಂಸ್ಥೆಯನ್ನು ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಿಸಿ, ಎಲ್ಲ ಷೇರುದಾರರ ಸಾಮಾನ್ಯ ಸಭೆ ಕರೆದು ಅವರಲ್ಲೇ ಒಬ್ಬ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಡಳಿತ ಮಂಡಳಿಯ ಒಪ್ಪಿಗೆ ಪಡೆದು, ನಿತ್ಯದ ವ್ಯವಹಾರ ನೋಡಿಕೊಳ್ಳಲು ಒಬ್ಬ ಕಾರ್ಯದರ್ಶಿ ಅಥವಾ ಕಾರ್ಯನಿರ್ವಹಣಾಧಿಕಾರಿ ನೇಮಿಸಿಕೊಳ್ಳಬೇಕು. ಅಗತ್ಯವಿದ್ದರೆ ಇತರೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬಹುದು.

ವಿನಾಶಕ್ಕೆ ಕಾರಣವಾಗುವ ಅಧಿಕಾರ ಮೋಹ
ಯಾವುದೇ ಸಹಕಾರಿ ಸಂಸ್ಥೆ ಹುಟ್ಟುಹಾಕುವಾಗ ಎಲ್ಲರೂ ಸಹಕಾರದ ತತ್ವ ಪಾಲನೆಗೆ ಒತ್ತು ನೀಡಿರುತ್ತಾರೆ. ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರ ಆಯ್ಕೆ ಮಾಡುವಾಗ ‘ನನಗೆ ಬೇಡ, ನೀನೇ ಆಗು’ ಎಂಬ ಮನೋಭಾವ ಇರುತ್ತದೆ. ಇಂತಹ ಮನೋಭಾವ ಆಡಳಿತ ಮಂಡಳಿ ಒಂದು ಅವಧಿ (ಅಧ್ಯಕ್ಷ, ಉಪಾಧ್ಯಕ್ಷರು ಎರಡೂವರೆ ವರ್ಷ, ನಿರ್ದೇಶಕರು ಐದು ವರ್ಷಗಳ ಅವಧಿ) ಮುಗಿದ ನಂತರ ಚುನಾವಣೆ ಮೂಲಕ ಆಯ್ಕೆಯಾಗಬೇಕಾಗುತ್ತದೆ. ಒಮ್ಮೆ ಅಧಿಕಾರದ ರುಚಿ ಕಂಡವರು ಆ ಸ್ಥಾನ ತೊರೆಯಲು ಇಷ್ಟಪಡುವುದಿಲ್ಲ. ಇನ್ನೊಬ್ಬರು ಆ ಸ್ಥಾನದಲ್ಲಿ ಕೂರುವುದನ್ನು ಸಹಿಸುವುದಿಲ್ಲ. ಅದಕ್ಕಾಗಿ ಚುನಾವಣೆಯಲ್ಲಿ ಗೆಲ್ಲಲು ವಿವಿಧ ತಂತ್ರ ಅನುಸರಿಸುತ್ತಾರೆ.

ಇಂತಹ ತಂತ್ರ ಹೊಸದಾಗಿ ಸದಸ್ಯತ್ವ ನೀಡುವುದರಿಂದಲೇ ಆರಂಭವಾಗುತ್ತದೆ. ಅವನು ಸದಸ್ಯನಾದರೆ ನನಗೆ ವೋಟ್‌ ಮಾಡುತ್ತಾನೆಯೇ? ಅವನು ಯಾರ ಪರ? ಎಂದೆಲ್ಲ ಲೆಕ್ಕಹಾಕಿ ಸಂಸ್ಥೆಯ ಸದಸ್ಯತ್ವ ನೀಡಲಾಗುತ್ತದೆ. ಹೇಳಿದಂತೆ ಕೇಳದ ಸಿಬ್ಬಂದಿಗಳನ್ನು ಬದಲಾಯಿಸಲಾಗುತ್ತದೆ. ಅರ್ಹತೆಗಿಂತ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿ, ಸಿಬ್ಬಂದಿಗೆ ಮಣೆ ಹಾಕಲಾಗುತ್ತದೆ. ಇದು ಮುಂದೆ ಆಡಳಿತ ಮಂಡಳಿಯ ಸರ್ವಾಧಿಕಾರಿ ಪ್ರವೃತ್ತಿಗೆ ಕಾರಣವಾಗಿ ಸಾರ್ವಜನಿಕ ಹಣದ ದುರ್ಬಳಕೆಗೂ ದಾರಿಯಾಗುತ್ತದೆ.

ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದವರಿಗೆ ಸಾಲ ನೀಡುವುದು, ನಕಲಿ ಖಾತೆ ಸೃಷ್ಟಿಸಿ ಸಾಲ ನೀಡುವುದು. ವಸೂಲಿ ಮಾಡದೇ ನಷ್ಟ ತೋರಿಸುವುದು. ಸ್ವಹಿತಾಸಕ್ತಿಗೆ ಬಳಸಿಕೊಳ್ಳುವುದು. ಗುಂಪುಗಾರಿಗೆ ನಡೆಸುವುದು... ಹೀಗೆ ಸಾಗುತ್ತಾ ಸಹಕಾರ ಸಂಸ್ಥೆ ಅಥವಾ ಬ್ಯಾಂಕ್‌ಗಳು ದಿವಾಳಿಯ ಹಂಚು ತಲುಪುತ್ತವೆ.

ಡಿಸಿಸಿ ಬ್ಯಾಂಕ್‌ನ ತಾಯಿ ಬೇರು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವ್ಯವಸಾಯ ಸೇವಾ ಸಹಕಾರ ಸಂಘಗಳು) ಡಿಸಿಸಿ ಬ್ಯಾಂಕ್‌ನ ತಾಯಿ ಬೇರು. ಗ್ರಾಮೀಣ ಮಟ್ಟದಲ್ಲಿ ಕೃಷಿಕರು ಸೇರಿ ಷೇರು ಹಾಕುವ ಮೂಲಕ ರಚಿತವಾಗಿರುತ್ತದೆ. ಕೃಷಿಗೆ ಬೇಕಾದ ಸಾಲ, ಸೌಲಭ್ಯಗಳನ್ನು ನೇರವಾಗಿ ರೈತರಿಗೆ ವಿತರಿಸುವ ಕೆಲಸವನ್ನು ಈ ಸಹಕಾರ ಸಂಘಗಳು ಮಾಡುತ್ತವೆ. ನಿತ್ಯದ ವ್ಯವಹಾರ ನೋಡಿಕೊಳ್ಳಲು ಪ್ರತಿ ಸಂಘಕ್ಕೂ ಒಬ್ಬ ಕಾರ್ಯದರ್ಶಿ ಇರುತ್ತಾನೆ.

ಒಂದು ಜಿಲ್ಲೆಯ ಇಂತಹ ಎಲ್ಲ ಪ್ರಾಥಮಿಕ ಸಹಕಾರ ಸಂಘಗಳ ಸದಸ್ಯತ್ವದ ಒಟ್ಟು ರೂಪವೇ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌. ಅಂದರೆ, ವ್ಯಕ್ತಿಯೊಬ್ಬ ನೇರವಾಗಿ ಈ ಬ್ಯಾಂಕ್‌ನ ಸದಸ್ಯನಾಗುವಂತಿಲ್ಲ. ಪ್ರಾಥಮಿಕ ಸಂಘಗಳು ಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರನ್ನು ಆಯ್ಕೆ ಮಾಡುತ್ತವೆ. ಆ ನಿರ್ದೇಶಕರಲ್ಲೇ ಒಬ್ಬ ಅಧ್ಯಕ್ಷ, ಉಪಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕರ್ನಾಟಕ ಸಹಕಾರ ಸೇವೆಯ ಅಧಿಕಾರಿ ಈ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ.

21 ಡಿಸಿಸಿ ಬ್ಯಾಂಕ್‌
ರಾಜ್ಯದಲ್ಲಿ ಒಟ್ಟು 21 ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿವೆ. ಕೆಲವೆಡೆ ಜಿಲ್ಲೆಗೆ ಒಂದು ಬ್ಯಾಂಕ್‌ ಇದ್ದರೆ, ಇನ್ನೂ ಕೆಲವೆಡೆ ಎರಡು–ಮೂರು ಜಿಲ್ಲೆಗಳಿಗೆ ಒಂದೇ ಬ್ಯಾಂಕ್‌ ಇದೆ.

ಜೋಡಿ ಜಿಲ್ಲೆ ಬ್ಯಾಂಕ್‌
ರಾಯಚೂರು–ಕೊಪ್ಪಳ, ಧಾರವಾಡ–ಗದಗ–ಹಾವೇರಿ, ದಕ್ಷಿಣ ಕನ್ನಡ–ಉಡುಪಿ, ಬೆಂಗಳೂರು–ಚಿಕ್ಕಬಳ್ಳಾಪುರ–ರಾಮನಗರ, ಮೈಸೂರು–ಚಾಮರಾಜನಗರ.

ಯಶಸ್ವಿ ಸಹಕಾರಿ ಬ್ಯಾಂಕ್‌
ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‌ಗಳು ಲಾಭದಾಯಕವಾಗಿಲ್ಲ. ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ವಿಜಾಪುರ, ಬಳ್ಳಾರಿ ಸೇರಿದಂತೆ ಕೆಲ ಡಿಸಿಸಿ ಬ್ಯಾಂಕ್‌ಗಳು ಸಾಕಷ್ಟು ಪ್ರಗತಿ ಸಾಧಿಸಿವೆ.

ಧಾರವಾಡ ಹಾಗೂ ಕೋಲಾರ ಡಿಸಿಸಿ ಬ್ಯಾಂಕ್‌ಗಳು ನಷ್ಟದ ಹಾದಿಯಲ್ಲಿ ಸಾಗಿ, ಸದಸ್ಯರಿಗೆ ಷೇರು ಹಿಂದಿರುಗಿಸಲು ಆಗದ ಸ್ಥತಿಗೆ ತಲುಪಿದ್ದವು. ಸರ್ಕಾರ ಧಾರವಾಡ ಡಿಸಿಸಿ ಬ್ಯಾಂಕ್‌ ಚೇತರಿಕೆಗೆ ರೂ. 126.81 ಕೋಟಿ ಹಾಗೂ ಕೋಲಾರ ಡಿಸಿಸಿ ಬ್ಯಾಂಕ್‌ಗೆ ರೂ. 69.09ಕೋಟಿ  ಬಿಡುಗಡೆ ಮಾಡಿತ್ತು. ಸದಸ್ಯ ಧಾರವಾಡ ಡಿಸಿಸಿ ಬ್ಯಾಂಕ್‌ ಮತ್ತೆ ಚೇತರಿಕೆಯ ಹಾದಿಯಲ್ಲಿ ಸಾಗಿದೆ.
ರಾಜ್ಯ ಅಪೆಕ್ಸ್‌ ಬ್ಯಾಂಕ್‌

ಎಲ್ಲ ಡಿಸಿಸಿ ಬ್ಯಾಂಕ್‌ಗಳ ಸದಸ್ಯತ್ವದ ರಾಜ್ಯ ಸಂಸ್ಥೆ ಅಪೆಕ್ಸ್‌ ಬ್ಯಾಂಕ್‌. ಜಿಲ್ಲಾ ಬ್ಯಾಂಕ್‌ಗಳು ಸಂಗ್ರಹಿಸುವ ಠೇವಣಿಯಲ್ಲಿ ಶೇ 30ರಷ್ಟು ಹಣವನ್ನು ಅಪೆಕ್ಸ್‌ ಬ್ಯಾಂಕ್‌ನಲ್ಲಿ ಮೀಸಲಿಡಲಾಗುತ್ತದೆ.

ಅಪೆಕ್ಸ್‌ ಬ್ಯಾಂಕ್‌ ತನ್ನ ಮೂಲನಿಧಿ ಹಾಗೂ ನಬಾರ್ಡ್‌ ನೀಡುವ ಹಣವನ್ನು ಡಿಸಿಸಿ ಬ್ಯಾಂಕ್‌ಗಳಿಗೆ ಹಂಚಿಕೆ ಮಾಡುತ್ತದೆ. ಡಿಸಿಸಿ ಬ್ಯಾಂಕ್‌ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ನೀಡುತ್ತವೆ. ಪ್ರಸ್ತುತ ಸಾಲಿನಲ್ಲಿ (2014–15) ಅಪೆಕ್ಸ್ ಬ್ಯಾಂಕ್‌ ನಬಾರ್ಡ್‌ನಿಂದ ದೊರೆತ ರೂ. 1,552 ಕೋಟಿ ಡಿಸಿಸಿ ಬ್ಯಾಂಕ್‌ಗಳಿಗೆ ನೀಡಿದ್ದು, ಒಟ್ಟು ರೂ. 10 ಸಾವಿರ ಕೋಟಿ ಸಾಲ ನೀಡುವ ಗುರಿ ಹೊಂದಿದೆ.

ರಾಜ್ಯದಲ್ಲಿನ 4,848 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ಗಳ ಮೂಲಕ ಹಣ ವಿತರಿಸಲಾಗುತ್ತದೆ.
2013–14ನೇ ಸಾಲಿನಲ್ಲಿ ರಾಜ್ಯದ 19.85 ಲಕ್ಷ ರೈತರಿಗೆ ರೂ. 7 ಸಾವಿರ ಕೋಟಿ ಅಲ್ಪಾವಧಿ ಮತ್ತು ಮಧ್ಯಾಮಾವಧಿ ಸಾಲ ವಿತರಿಸಲಾಗಿತ್ತು. ನಬಾರ್ಡ್‌ ರೂ. 4,025 ಕೋಟಿ ನೀಡಿತ್ತು.

70 ಸಾವಿರಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ಸಹಕಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದು, ಅವುಗಳೂ ನೂರಾರು ಕೋಟಿ ಹಣಕಾಸಿನ ವಹಿವಾಟು ನಡೆಸುತ್ತಿವೆ. ನಗರ, ಪಟ್ಟಣ ಪ್ರದೇಶದಲ್ಲಿ 290 ಸಹಕಾರ ಬ್ಯಾಂಕ್‌ಗಳು ಹಾಗೂ 4 ಸಾವಿರ ಇತರೆ ಸಹಕಾರ ಸಂಘಗಳಿವೆ. ಇವುಗಳಲ್ಲಿ 28 ಮಹಿಳಾ ಸಹಕಾರ ಬ್ಯಾಂಕ್‌ಗಳೂ ಸೇರಿವೆ. ಈ ಬ್ಯಾಂಕ್‌ಗಳು ವಾರ್ಷಿಕ  ರೂ. 50 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿವೆ.

ರಾಜ್ಯದ ಎಲ್ಲ ಸಹಕಾರ ಸಂಸ್ಥೆಗಳು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಕಾಯ್ದೆಯ ಅಡಿ ರಚಿತವಾಗಿವೆ. ಕಾಲಕಾಲಕ್ಕೆ ಕಾಯ್ದೆ ತಿದ್ದುಪಡಿಗೆ ಒಳಪಟ್ಟು ಪ್ರಸ್ತುತ ಹೊಸ ರೂಪ ಪಡೆದಿದೆ.

ಕೃಷಿ ಆಧಾರದ ಸಹಕಾರ ಬ್ಯಾಂಕ್‌ಗಳಲ್ಲದೇ ರಾಜ್ಯದಲ್ಲಿ ನೂರಾರು ವಿವಿಧ ರೂಪಗಳ ಸಹಕಾರ ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ. ಹಾಲು ಉತ್ಪಾದನೆ, ಗೃಹ ನಿರ್ಮಾಣ, ಕೈಗಾರಿಕೆ, ಸ್ಪಿನ್ನಿಂಗ್‌ ಮಿಲ್‌, ಸಕ್ಕರೆ ಕಾರ್ಖಾನೆ, ಮಾರುಕಟ್ಟೆ, ನೀರಾವರಿ, ಕೂಡುಬೇಸಾಯ, ಸಂಸ್ಕರಣ, ನೌಕರರು, ಬಳಕೆದಾರರು, ನಗರ ಸಹಕಾರ ಸಂಸ್ಥೆಗಳು ಸೇರಿದಂತೆ 38,430 ಸಹಕಾರ ಸಂಸ್ಥೆಗಳು, ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ.

ಇವುಗಳಲ್ಲಿ  2,364 ಸಂಘಗಳು ಬಾಗಿಲು ಮುಚ್ಚಿವೆ. 2,388 ಅವನತಿಯ ಹಾದಿಯಲ್ಲಿ ಸಾಗಿವೆ.
ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳಿಗೆ ಹೋಲಿಸಿದರೆ, ನಗರ ಪ್ರದೇಶದ ಸಂಘಗಳು ಹೆಚ್ಚು ಯಶಸ್ವಿಯಾಗಿವೆ. ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕರ್ನಾಟಕದ  ಕೆಲ ಜಿಲ್ಲೆಗಳಲ್ಲಿ ಸಹಕಾರ ಸಂಸ್ಥೆಗಳು ಹೆಚ್ಚಿನ ಯಶಸ್ಸು ಕಂಡಿವೆ. ಸಹಕಾರ ಸಕ್ಕರೆ ಕಾರ್ಖಾನೆಗಳು ಮಾತ್ರ ಬೆಳಗಾವಿ ಹೊರತುಪಡಿಸಿ ಉಳಿದೆಡೆ ಯಶಸ್ಸು ಕಂಡಿಲ್ಲ.

ಕೈಗಾರಿಕಾ ಬ್ಯಾಂಕ್‌
ಕೈಗಾರಿಕಾ ಅಭಿವೃದ್ಧಿಗೆ ಸಾವಿರಾರು ಕೋಟಿ ಸಾಲ ಸೌಲಭ್ಯ ನೀಡುವ ಮೂಲಕ ರಾಜ್ಯದಲ್ಲಿ ಹೆಸರಾಗಿದ್ದ ಕೈಗಾರಿಕಾ ಸಹಕಾರ ಬ್ಯಾಂಕ್‌ ನಷ್ಟದ ಹಾದಿಯಲ್ಲಿ ಸಾಗಿ, ಇಂದು ಅವನತಿ ಕಂಡಿದೆ.

ಸಮಾಪನೆಗೊಂಡಿರುವ ಬ್ಯಾಂಕ್‌ನ ಆಸ್ತಿಯನ್ನು ಹರಾಜು ಮಾಡಿ, ಬಂದ ಹಣದಲ್ಲಿ ಷೇರುದಾರರು ಹಾಗೂ ಠೇವಣಿದಾರರ ಹಣ ನೀಡುವ ಕಾರ್ಯಕ್ಕೆ ಸಹಕಾರ ಇಲಾಖೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ.

ಗ್ರಾಹಕರ ಆತಂಕ: ಠೇವಣಿ ವಾಪಸ್‌
ಯಾವುದೇ ಸಹಕಾರ ಬ್ಯಾಂಕ್‌ನಲ್ಲಿನ ಹಗರಣ ಬೆಳಕಿಗೆ ಬಂದ ತಕ್ಷಣ ಠೇವಣಿದಾರರು ಮೊದಲು ಆತಂಕಕ್ಕೆ ಒಳಗಾಗುತ್ತಾರೆ. ತಕ್ಷಣವೇ ಠೇವಣಿ ಖಾತೆಯಲ್ಲಿ ಇರಿಸಿದ ಹಣವನ್ನು ಹಿಂದಕ್ಕೆ ಪಡೆಯಲು ತೊಡಗುತ್ತಾರೆ. ಈ ಪ್ರಕ್ರಿಯೆ ಕೇವಲ ಹಗರಣ ನಡೆದ ಬ್ಯಾಂಕ್‌ಗೆ ಸೀಮಿತವಾಗುವುದಿಲ್ಲ. ಎಲ್ಲ ಸಹಕಾರ ಕ್ಷೇತ್ರದ ಮೇಲೂ ಅದು ಪರಿಣಾಮ ಬೀರುತ್ತದೆ. ಹೀಗೆ ಠೇವಣಿ ನಿರಂತರವಾಗಿ ಹಿಂತೆಗೆದರೆ ಬ್ಯಾಂಕ್‌ ಮುಳುಗಿಬಿಡುತ್ತದೆ. ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ ಹಗರಣ ಬೆಳಕಿಗೆ ಬಂದ ಒಂದು ತಿಂಗಳಲ್ಲೇ ಠೇವಣಿದಾರರು ರೂ. 90 ಕೋಟಿ ಠೇವಣಿ ಹಿಂದಕ್ಕೆ ಪಡೆದಿದ್ದಾರೆ. ಇದು ಸಹಕಾರ ಕ್ಷೇತ್ರಕ್ಕೆ ದೊಡ್ಡ ಪೆಟ್ಟು.

ಲೆಕ್ಕಪರಿಶೋಧನೆ
ಹಣ ದುರುಪಯೋಗ ಆಗದಂತೆ ತಡೆಯಲು ಸಹಕಾರ ಸಂಸ್ಥೆಯಲ್ಲಿ ನಿರಂತರ ಆಂತರಿಕ ಲೆಕ್ಕ ಪರಿಶೋಧನೆ ಮಾಡಬೇಕು. ವ್ಯವಹಾರದಲ್ಲಿ ವ್ಯತ್ಯಾಸ ಕಂಡುಬಂದರೆ ಮೊದಲು ಆಡಳಿತ ಮಂಡಳಿಯಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಬೇಕು. ಸಹಕಾರ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸಹಕಾರ ಸಂಸ್ಥೆ, ಬ್ಯಾಂಕ್‌ಗಳಿಗೆ ಅನೀರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಹಣ ದುರುಪಯೋಗ ಕಂಡು ಬಂದರೆ ಮೇಲಧಿಕಾರಿಗಳಿಗೆ, ಸಹಕಾರ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು. ದುರುಪಯೋಗ ಖಚಿತವಾದರೆ 1959ರ ಕಾಯ್ದೆಯ ಸೆಕ್ಷನ್‌ 69, 70, 103 ಅನ್ವಯ ಸಿವಿಲ್‌ ಪ್ರಕರಣ ದಾಖಲಿಸಬೇಕು. ಹಗರಣ ದೊಡ್ಡದಾಗಿದ್ದು, ಅಗತ್ಯವಿದ್ದಲ್ಲಿ ಪೊಲೀಸ್‌ ಠಾಣೆಯಲ್ಲಿ ಆರೋಪಿ ನೌಕರರು ಅಥವಾ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಪೊಲೀಸರು ಕೇಳುವ ಎಲ್ಲ ಮಾಹಿತಿಗಳನ್ನೂ ಒದಗಿಸಿ ತನಿಖೆಗೆ ಸಹಕರಿಸಬೇಕು.

ಶೇ 30ರಷ್ಟು ಠೇವಣಿ ಕಡ್ಡಾಯ
ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಯಮದಂತೆ ಬ್ಯಾಂಕ್‌ ಸ್ಥಾನಮಾನ ಹೊಂದುವ ಸಹಕಾರ ಸಂಘಗಳು ತಾವು ಸಂಗ್ರಹಿಸುವ ಠೇವಣಿಯಲ್ಲಿ ಶೇ 30ರಷ್ಟನ್ನು ಕಡ್ಡಾಯವಾಗಿ ಕೇಂದ್ರ ಬ್ಯಾಂಕ್‌ಗಳಲ್ಲಿ  ಮೀಸಲು ನಿಧಿಯಾಗಿ ಇಡಬೇಕು.
ಅದರಲ್ಲಿ ಶಾಸನಾತ್ಮಕ ಸಮಾಪನಾ ಮೀಸಲು ಅನುಪಾತ (ಎಸ್‌ಎಲ್‌ಆರ್‌) ಶೇ 25 ಹಾಗೂ ನಗದು ಮೀಸಲು ಅನುಪಾತ (ಸಿಆರ್‌ಆರ್‌) ಶೇ 5 ಒಳಗೊಂಡಿರುತ್ತದೆ.

ಉದಾಹರಣೆ ಯಾವುದೇ ಒಂದು ಸಹಕಾರಿ ಬ್ಯಾಂಕ್‌ ಸಾರ್ವಜನಿಕರಿಂದ ರೂ. 100 ಕೋಟಿ ಸಂಗ್ರಹಿಸಿದರೆ ಅದರಲ್ಲಿ ರೂ. 30 ಕೋಟಿ ಹಣವನ್ನು ಕೇಂದ್ರ ಬ್ಯಾಂಕ್‌ನಲ್ಲಿ ಮೀಸಲು ನಿಧಿಯಾಗಿ ಇಡಬೇಕು. ಆ ಬ್ಯಾಂಕ್‌ನ ಠೇವಣಿ ರೂ. 9 ಕೋಟಿ ಕಡಿಮೆಯಾಯಿತು ಎಂದಿಟ್ಟುಕೊಳ್ಳಿ, ತಕ್ಷಣವೇ ಕೇಂದ್ರ ಬ್ಯಾಂಕ್‌ ರೂ. 3 ಕೋಟಿ ಹಿಂದಿರುಗಿಸುತ್ತದೆ. ರೂ. 30 ಕೋಟಿ ಹೆಚ್ಚಾಯಿತು ಎಂದರೆ ತಕ್ಷಣವೇ ಮತ್ತೆ ರೂ. 10 ಕೋಟಿಯನ್ನು ಕೇಂದ್ರ ಬ್ಯಾಂಕ್‌ಗೆ ಕಳುಹಿಸಬೇಕು.

ಒಂದು ವೇಳೆ ಬ್ಯಾಂಕ್‌ ನಷ್ಟದ ಹಾದಿ ಹಿಡಿದು ಸಮಾಪನಗೊಳ್ಳುವ ಪರಿಸ್ಥಿತಿ ಎದುರಾದರೆ ಠೇವಣಿದಾರರ ಹಾಗೂ ಷೇರುದಾರರ ಅಸಲು ಹಣಕ್ಕೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಆರ್‌ಬಿಐ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ರಾಜ್ಯದ ವಿವಿಧೆಡೆಯ ಪರಿಸ್ಥಿತಿ
ರಾಯಚೂರು ಜಿಲ್ಲಾ ಸಹಕಾರ ಬ್ಯಾಂಕ್(ಆರ್‌ಡಿಸಿಸಿ ಬ್ಯಾಂಕ್) ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಚಟುವಟಿಕೆ ನಡೆಸುತ್ತಿದ್ದು, 18 ಶಾಖೆಗಳನ್ನು ಒಳಗೊಂಡಿದೆ. ಅಲ್ಲದೇ, ರಾಯಚೂರು ಜಿಲ್ಲೆಯಲ್ಲಿ 121 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 90 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ಈ ಬ್ಯಾಂಕ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಪ್ರಾದೇಶಿಕ ಸಹಕಾರಿ ಕೃಷಿ ಅಭಿವೃದ್ಧಿ ಮತ್ತು ಗ್ರಾಮೀಣ ಬ್ಯಾಂಕ್ ಐದು ಶಾಖೆಗಳೂ ಕಾರ್ಯನಿರತವಾಗಿವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 121 ಕಾರ್ಯನಿರತವಾಗಿದ್ದರೆ, 3 ಶಾಖೆ ಸಮಾಪನೆಗೊಂಡಿವೆ. ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿ ಮೂರು ಕಾರ್ಯನಿರತವಾಗಿದ್ದರೆ, ಒಂದು ಶಾಖೆ ಸಮಾಪನೆಗೊಂಡಿದೆ. ನೌಕರರ ಪತ್ತಿನ ಸಹಕಾರ ಸಂಘಗಳಲ್ಲಿ 24 ಕಾರ್ಯನಿರತವಾಗಿದ್ದರೆ, ಎರಡು ಸ್ಥಗಿತಗೊಂಡಿವೆ. ಒಂದು ಶಾಖೆ ಸಮಾಪನೆಗೊಂಡಿದೆ. ಇತರೆ ಪತ್ತಿನ ಸಹಕಾರಿ ಸಂಘಗಳು 20ರಷ್ಟಿವೆ.

ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್‌ 19 ಶಾಖೆಗಳನ್ನು ಹೊಂದಿದೆ. ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (3 ಶಾಖೆ), ವಿಕಾಸ ಸೌಹಾರ್ದ ಸಹಕಾರಿ ಬ್ಯಾಂಕ್‌, ಸಂಡೂರು ಅರ್ಬನ್‌ ಸೌಹಾರ್ದ ಸಹಕಾರಿ ಬ್ಯಾಂಕ್‌, ಸುಕೋ ಬ್ಯಾಂಕ್‌, ಬಳ್ಳಾರಿ ನಗರ ಸಹಕಾರಿ ಬ್ಯಾಂಕ್‌, ಹೊಸಪೇಟೆ ನಗರ ಸಹಕಾರಿ ಬ್ಯಾಂಕ್‌, ಹೂವಿನಹಡಗಲಿ ಪಟ್ಟಣ ಸಹಕಾರಿ  ಬ್ಯಾಂಕ್‌ ಎಲ್ಲವೂ ಸುಸ್ಥಿತಿಯಲ್ಲಿವೆ. ಇತ್ತೀಚಿನ ವರ್ಷಗಳಲ್ಲಿ ಯಾವುದೇ ಹಗರಣಗಳಾಗಿಲ್ಲ.

ಗುಲ್ಬರ್ಗ ಜಿಲ್ಲೆಯಲ್ಲಿ ಒಂದು ಡಿಸಿಸಿ ಬ್ಯಾಂಕ್ ಹಾಗೂ ಏಳು ಸಹಕಾರ ಬ್ಯಾಂಕುಗಳಿದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ. ಡಿಸಿಸಿ ಹೊರತು ಪಡಿಸಿದರೆ ಇತರೆ ಬ್ಯಾಂಕುಗಳು ಯಾವುದೇ ವಿವಾದಕ್ಕೆ ಒಳಗಾಗಿಲ್ಲ.  ಇತ್ತೀಚಿನ ವರ್ಷಗಳಲ್ಲಿ ಯಾವ ಬ್ಯಾಂಕ್‌ ಸ್ಥಗಿತಗೊಂಡಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಸಹಕಾರಿ ಬ್ಯಾಂಕ್‌ಗಳಿವೆ. 9 ಸುಸ್ಥಿತಿಯಲ್ಲಿದ್ದರೆ, ಎರಡು ಬ್ಯಾಂಕ್‌ಗಳು (ಸಿದ್ದಾಪುರ ಅರ್ಬನ್‌ ಸಹಕಾರಿ ಬ್ಯಾಂಕ್‌ ಹಾಗೂ ಹಳಿಯಾಳ ಅರ್ಬನ್‌ ಸಹಕಾರಿ ಬ್ಯಾಂಕ್‌)  ಅವನತಿ ಹಾದಿಯಲ್ಲಿವೆ. ಸದ್ಯ ಯಾವುದೇ ಸಹಕಾರಿ ಬ್ಯಾಂಕ್‌ ಸ್ಥಗಿತಗೊಂಡಿಲ್ಲ.

ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ, ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಹಕಾರಿ ಬ್ಯಾಂಕುಗಳು ಸೇರಿದಂತೆ ಒಟ್ಟು 5001 ಸಹಕಾರಿ ಸಂಘಗಳಿವೆ. ಬಹುತೇಕ ಸಹಕಾರ ಸಂಘಗಳು ಉತ್ತಮ ಸ್ಥಿತಿಯಲ್ಲಿವೆ. ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ.

ಪಟ್ಟಣ ಸಹಕಾರ ಬ್ಯಾಂಕು, ಪ್ರಾಥಮಿಕ ಸಹಕಾರ ಕೃಷಿ ಅಭಿವೃದ್ಧಿ ಮತ್ತು ಗ್ರಾಮೀಣ ಬ್ಯಾಂಕು, ಸಹಕಾರಿ ಗ್ರೇನ್‌ ಬ್ಯಾಂಕು, ಸಹಕಾರಿ ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಒಟ್ಟು 50 ವಿವಿಧ ಪ್ರಕಾರಗಳಲ್ಲಿ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕು (ಡಿಸಿಸಿ) ಉತ್ತಮ ಸ್ಥಿತಿಯಲ್ಲಿದೆ. ಜಿಲ್ಲೆಯಲ್ಲಿ 43 ಪಟ್ಟಣ ಸಹಕಾರ ಬ್ಯಾಂಕುಗಳಿದ್ದು, ಈ ಪೈಕಿ 7 ಬ್ಯಾಂಕುಗಳು ಬಂದ್‌ ಆಗಿವೆ. ಉಳಿದವುಗಳು ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ದೇಶದ ಮೊದಲ ಸಹಕಾರ ಸಂಘ
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸಹಕಾರ ಕ್ಷೇತ್ರಕ್ಕೆ ಬುನಾದಿ ಹಾಕಿದ್ದು ಕರ್ನಾಟಕ ರಾಜ್ಯ.
1904ರಲ್ಲಿ ಗದಗ ಜಿಲ್ಲೆಯ (ಆಗಿನ ಧಾರವಾಡ ಜಿಲ್ಲೆ) ಕಣಗಿನಹಾಳ ಗ್ರಾಮದ ಸಣ್ಣರಾಮನಗೌಡ ಸಿದ್ದರಾಮನಗೌಡ ಪಾಟೀಲ (ಎಸ್‌.ಎಸ್‌.ಪಾಟೀಲ).

ಅಂದು ಗ್ರಾಮದಲ್ಲಿ ಕೆಲ ಸಮಾನ ಮನಸ್ಕ ರೈತರನ್ನು ಒಗ್ಗೂಡಿಸಿದ ಪಾಟೀಲರು, ದೇಶದ ಮೊದಲ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದರು. ಆ ಸಂಘ ದೇಶದ ಮೊದಲ ಸಹಕಾರ ಸಂಘ.

ಈಗ ಗದಗ ಜಿಲ್ಲೆಯಲ್ಲಿ ಸುಸ್ಥಿತಿಯಲ್ಲಿರುವ ಬ್ಯಾಂಕ್‌ಗಳೆಂದರೆ, ಗದಗದ ದಿ ಮರ್ಚೆಂಟ್ಸ್‌ ಲಿಬರಲ್‌ ಕೋ–ಆಪ್‌. ಬ್ಯಾಂಕ್‌, ದಿ ಮರ್ಚೆಂಟ್ಸ್‌ ಅರ್ಬನ್‌ ಕೋ–ಆಪ್‌ ಬ್ಯಾಂಕ್ ಮತ್ತು  ಆಜಾದ ಕೋ ಆಪ್‌ ಬ್ಯಾಂಕ್‌.

ಗಜೇಂದ್ರಗಡದ ದಿ ಲಕ್ಷ್ಮೀ ಅರ್ಬನ್‌ ಕೋ–ಆಪ್‌ ಬ್ಯಾಂಕ್‌ ಲಿ., ರೋಣ ತಾಲ್ಲೂಕು ಪ್ರೈಮರಿ ಟೀಚರ್ಸ್‌ ಕೋ–ಆಪ್‌ ಕ್ರೆಡಿಟ್‌ ಬ್ಯಾಂಕ್‌, ರೋಣ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌, ಶಿರಹಟ್ಟಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ನರಗುಂದ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌, ಮುಂಡರಗಿ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಹಾಗೂ ಗದಗ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌.

ಗದಗ ಪಟ್ಟಣ ಸಹಕಾರಿ ಬ್ಯಾಂಕ್‌, ಮುಂಡರಗಿ ಪಟ್ಟಣ ಸಹಕಾರಿ ಬ್ಯಾಂಕ್‌, ರೋಣ ಪಟ್ಟಣ ಸಹಕಾರ ಬ್ಯಾಂಕ್‌,  ಲಕ್ಷ್ಮೇಶ್ವರ ಕೋ–ಆಪ್‌ ಕ್ರೆಡಿಟ್‌ ಬ್ಯಾಂಕ್ ಹಾಗೂ ಹೊಳೆಆಲೂರಿನ ಕಲ್ಮೇಶ್ವರ ಅರ್ಬನ್‌ ಕೋ–ಆಪ್‌ ಬ್ಯಾಂಕ್‌ ಸ್ಥಗಿತಗೊಂಡಿವೆ.

ಸಹಕಾರ ಸಂಘ–ಸಹಕಾರ ಬ್ಯಾಂಕ್‌
ಕ್ಷೇತ್ರ, ವ್ಯಾಪ್ತಿಯ ಆಧಾರದಲ್ಲಿ ನಿಗದಿಯಾದ ಪ್ರಮಾಣದ ಷೇರು ಸಂಗ್ರಹಿಸಿ ಆರಂಭವಾಗುವ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದುತ್ತಾ ಭಾರತೀಯ ರಸರ್ವ್‌ ಬ್ಯಾಂಕ್‌ ನಿಗದಿ ಪಡಿಸಿದ ಷೇರು ಹಾಗೂ ಠೇವಣಿ ಸಂಗ್ರಹಿಸಿದರೆ ಅಂತಹ ಸಂಘ ಬ್ಯಾಂಕ್ ಸ್ಥಾನಮಾನ ಪಡೆಯುತ್ತದೆ.

ಪ್ರಸ್ತುತ ಆರ್‌ಬಿಐ ನಿಯಮದ ಪ್ರಕಾರ ಯಾವುದೇ ಸಂಘ ಬ್ಯಾಂಕ್‌ ಸ್ಥಾನಮಾನ ಪಡೆಯ ಬೇಕಾದರೆ ರೂ. 25 ಕೋಟಿ ಷೇರು  ಬಂಡವಾಳ, ರೂ. 100 ಕೋಟಿ ಠೇವಣಿ ಹೊಂದಿರಬೇಕು. ಆರ್‌ಬಿಐನ ಈ ನಿಯಮ ಪ್ರತಿವರ್ಷ ಬದಲಾಗುತ್ತಿರುತ್ತದೆ.

ರೈತರೇ ನಿಮಗಿದು ತಿಳಿದಿರಲಿ...
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂದು ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದ್ದು, ರೈತರು ಸ್ಥಳೀಯ ಬ್ಯಾಂಕ್‌, ಪತ್ತಿನ ಸಹಕಾರ ಸಂಘಗಳ ಮೂಲಕ ಮಾಡುವ ಕೃಷಿ ಸಾಲದ ಬಡ್ಡಿಯನ್ನು ಗಣನೀಯವಾಗಿ ಕಡಿಮೆ ಮಾಡಿವೆ.

ಇಂದು ರೈತರಿಗೆ  ರೂ. 3 ಲಕ್ಷದವರೆಗೂ ಬಡ್ಡಿ ರಹಿತ ಕೃಷಿ ಸಾಲ ನೀಡಲಾಗುತ್ತಿದೆ. ಸಾಲ ಮರುಪಾವತಿಯ ಅವಧಿ ಒಂದು ವರ್ಷ. ಒಂದು ವರ್ಷದ ಅವಧಿಗೂ ಮೊದಲೇ ಸಾಲ ಮರುಪಾವತಿ ಮಾಡಿದರೆ ಅಂತಹ ರೈತರಿಗೆ ಪಡೆದಿದ್ದ ಸಾಲದ ಶೇ 3ರಷ್ಟು ಹಣವನ್ನು ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ.

ಉದಾಹರಣೆಗೆ ಒಬ್ಬ ರೈತ 2014ರ ಆ. 13ರಂದು ರೂ. 3 ಲಕ್ಷ ಸಾಲ ಪಡೆದರೆ,  ತೀರುವಳಿ ಅವಧಿ 2015ರ ಆ. 12ರವರೆಗೆ ಇರುತ್ತದೆ. ಈ ಅವಧಿ ಮುಗಿಯುವುದರೊಳಗೇ ಸಾಲ ಹಿಂದಿರುಗಿಸಿದರೆ ಆ ರೈತನಿಗೆ ರೂ. 9 ಸಾವಿರ ಪ್ರೋತ್ಸಾಹಧನ ಸಿಗುತ್ತದೆ. ಆದರೆ, ರಾಜ್ಯದ ಬಹುತೇಕ ರೈತರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂಬುದು ವಿಪರ್ಯಾಸ.

ರಾಜ್ಯಕ್ಕೆ ಮಾದರಿ–ಕರಾವಳಿ

ಸಹಕಾರ ಚಳವಳಿಯ ಹುಟ್ಟು, ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಕೊಟ್ಟ ಮಹತ್ವಕ್ಕಿಂತಲೂ ಹೆಚ್ಚಿನ ಮಹತ್ವವನ್ನು ಸಹಕಾರಿ ಬ್ಯಾಂಕ್‌ಗಳಿಗೆ ನೀಡುತ್ತಿವೆ. ಇಲ್ಲಿನ ಡಿಸಿಸಿ ಬ್ಯಾಂಕ್‌, ಪಿಎಲ್‌ಡಿ ಬ್ಯಾಂಕ್‌, ಪಟ್ಟಣ ಸಹಕಾರಿ ಬ್ಯಾಂಕ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಠೇವಣಿ ಹೂಡುವುದಕ್ಕೆ ಜನ ಮುಗಿಬೀಳುವುದನ್ನು ಕಂಡಾಗ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರ ಎಷ್ಟರ ಮಟ್ಟಿಗೆ ಜನರ ಮನಸ್ಸು ತಟ್ಟಿದೆ ಎಂಬುದು ಗೊತ್ತಾಗುತ್ತದೆ. ಬಜ್ಪೆಯ ಸಹಕಾರಿ ಸಂಘ ಕಳೆದ ಹಣಕಾಸು ವರ್ಷದಲ್ಲಿ ರೂ. 6 ಕೋಟಿ ನಿವ್ವಳ ಲಾಭ ಗಳಿಸಿದೆ. ಎರಡೂ ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ಸಹಕಾರಿ ಬ್ಯಾಂಕ್‌ಗಳು ಮತ್ತು ಸೊಸೈಟಿಗಳಲ್ಲಿ ಸಾಲ ವಸೂಲಿಯೂ ಸಮರ್ಪಕವಾಗಿ ನಡೆಯುತ್ತಿದೆ.

ಹೀಗಾಗಿ ಸಹಕಾರಿ ಬ್ಯಾಂಕ್‌ ಮತ್ತು ಸಂಘಗಳು ಕರಾವಳಿಯಲ್ಲಿ ವ್ಯವಸ್ಥಿತವಾಗಿಯೇ ನಡೆಯುತ್ತಿವೆ ಎಂದು ಹೇಳಬಹುದು.  ಆದರೆ ಇದೇ ಸ್ಥಿತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಲ್ಲ. ಅಲ್ಲಿನ 528 ಸಹಕಾರಿ ಬ್ಯಾಂಕ್‌ಗಳು ಮತ್ತು ಸಂಘಗಳ ಪೈಕಿ 219 ನಷ್ಟದಲ್ಲಿವೆ. 284 ಲಾಭದಲ್ಲಿದ್ದರೆ, 25 ಸಂಘಗಳು ಲಾಭದಲ್ಲೂ ಇಲ್ಲ, ನಷ್ಟದಲ್ಲೂ ಇಲ್ಲ. 37 ಸಂಘಗಳು ಸ್ಥಗಿತಗೊಂಡಿದ್ದರೆ, 23 ಸಮಾಪನೆಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 814 ಬ್ಯಾಂಕ್‌ ಮತ್ತು ಸಂಘಗಳ ಪೈಕಿ  659 ಲಾಭದಲ್ಲಿವೆ, 132 ನಷ್ಟದಲ್ಲಿವೆ. 23 ಸಂಘಗಳು ಲಾಭದಲ್ಲೂ ಇಲ್ಲ; ನಷ್ಟದಲ್ಲೂ ಇಲ್ಲ. 19 ಸ್ಥಗಿತಗೊಂಡಿವೆ, 19 ಸಮಾಪನೆಗೊಂಡಿವೆ. ಉಡುಪಿಯಲ್ಲಿ 607ರಲ್ಲಿ 543 ಲಾಭದಲ್ಲಿವೆ, 64 ನಷ್ಟದಲ್ಲಿವೆ. 3 ಸ್ಥಗಿತಗೊಂಡಿದ್ದರೆ, 21 ಸಮಾಪನೆಗೊಂಡಿವೆ.

ಕರಾವಳಿಯಲ್ಲೂ ವಂಚಕರೇ ಇಲ್ಲ ಎಂದಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ಸಹಕಾರ ಸಂಘಗಳಲ್ಲಿ ಹಣ ದುರುಪಯೋಗದ 160 ಪ್ರಕರಣಗಳು ಪತ್ತೆಯಾಗಿವೆ. ಇಷ್ಟಾಗಿಯೂ ಜನಸಾಮಾನ್ಯರು ಸಹಕಾರಿ ಸಂಘಗಳಲ್ಲಿ ಇಟ್ಟಿರುವ ವಿಶ್ವಾಸ ಕುಂದಿಲ್ಲ. ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ವಂಚನೆ ಪ್ರಕರಣ ಬಯಲಿಗೆ ಬಂದ ಮೇಲೂ, ಕರಾವಳಿ ಭಾಗದಲ್ಲಿ ಸಹಕಾರಿ ಸಂಘಗಳಿಂದ ಹಣ ಹಿಂಪಡೆಯುವ ಧಾವಂತವೇನೂ ಕಂಡುಬಂದಿಲ್ಲ.

‘ನಂಬಿಕೆಯೇ ಬುನಾದಿ’
ಸಹಕಾರ ರಂಗದಲ್ಲಿ ಅಧಿಕಾರದ ಕುರ್ಚಿ ಮೇಲೆ ಕೂತವರು ಪ್ರತಿ ಕ್ಷಣವೂ ಆ ಸಂಸ್ಥೆಯ ಅಭಿವೃ ದ್ಧಿಯ ಬಗ್ಗೆ ಚಿಂತಿಸಬೇಕು. ಎಂತಹ

ಸಂದರ್ಭದಲ್ಲೂ ಸ್ವಾರ್ಥ ಕ್ಕೆ ಅವಕಾಶ ನೀಡಬಾರದು. ಸಮ ಗ್ರ ದೃಷ್ಟಿಯ ಇಚ್ಛಾಶಕ್ತಿ ಇರಬೇಕು. ಸಹಕಾರ ಸಂಸ್ಥೆಯನ್ನು ಕಟ್ಟಿದಾಗ ಜನರು ಠೇವಣಿ ಇಡುವ ಮುನ್ನ ಯಾರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂಬುದನ್ನೂ ಗಮನಿಸುತ್ತಾರೆ.
ಠೇವಣಿ ಇಟ್ಟ ನಂತರ ಪ್ರತಿ ಬಾರಿಯೂ ಬ್ಯಾಂಕ್‌ ಲಾಭ, ಅದು ಹೊಂದಿರುವ ಮೀಸಲು ನಿಧಿ ಕುರಿತೂ ಗಮನ ಹರಿಸುತ್ತಾರೆ.
ನಂಬಿಕೆ ವಿಶ್ವಾಸದ ಮೇಲೆ ಎಲ್ಲ ಸಹಕಾರ ಸಂಸ್ಥೆಗಳ ಭವಿಷ್ಯ ನಿಂತಿರುತ್ತದೆ. ನಂಬಿಕೆಯೇ ಸಹಕಾರ ಕ್ಷೇತ್ರದ ಬುನಾದಿ. ಅದನ್ನು ಹಾಳು ಮಾಡಿದರೆ ಆ ಸಂಸ್ಥೆ ಅವಸಾನದತ್ತ ಸಾಗಿತೆಂದೇ ಅರ್ಥ.
–ಎನ್‌.ಎಂ.ಜೆ.ಬಿ.ಆರಾಧ್ಯ .ಅಧ್ಯಕ್ಷ, ದಾವಣಗೆರೆ–ಹರಿಹರ ಅರ್ಬನ್‌ ಬ್ಯಾಂಕ್‌

‘ಹೂಡಿಕೆ ಕಡಿಮೆ, ವಿವಾದ ಇಲ್ಲ’
ಕೊಪ್ಪಳ ಜಿಲ್ಲೆಯ ಸಹಕಾರ ಬ್ಯಾಂಕ್‌ಗಳು ರಾಯಚೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ವ್ಯಾಪ್ತಿಗೊಳಪಟ್ಟಿವೆ.
ಜಿಲ್ಲೆಯಲ್ಲಿ ಒಟ್ಟು 670 ಸಹಕಾರ ಸಂಘಗಳಿವೆ. ಅವುಗಳಲ್ಲಿ 529 ಕಾರ್ಯನಿರತವಾಗಿವೆ. 99 ಸ್ಥಗಿತಗೊಂಡಿವೆ. 42 ಬ್ಯಾಂಕ್‌ಗಳು ಕೆಲವು ವರ್ಷಗಳ ಹಿಂದೆಯೇ ಸಮಾಪನಗೊಂಡಿವೆ.

102 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಐದು ಅರ್ಬನ್‌ ಬ್ಯಾಂಕ್‌ಗಳೂ ಇವೆ. ಏಳು ಸಹಕಾರ ಬ್ಯಾಂಕ್‌ಗಳಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ ಆರ್ಥಿಕ ನೆರವು ನೀಡುತ್ತಿದೆ. ಸದ್ಯ ಯಾವುದೇ ಬ್ಯಾಂಕ್‌ ವಿವಾದದಲ್ಲಿಲ್ಲ. ದೊಡ್ಡ ಹಗರಣಗಳೂ ನಡೆದಿಲ್ಲ. ಜಿಲ್ಲೆಯಲ್ಲಿ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರೂ ಕಡಿಮೆ. ಹಾಗಾಗಿ ಲಾಭ ಗಳಿಕೆಯತ್ತ ಚಿತ್ತ ಹರಿಸುವ ಮಂದಿಯೂ ಕಡಿಮೆ. ಹಾಗೆಂದು ಎಲ್ಲವೂ ಸರಿಯಿದೆ ಎಂದಲ್ಲ. ಸಣ್ಣಪುಟ್ಟ ಲೋಪಗಳೂ ಇವೆ. ಅವುಗಳನ್ನು ಲೆಕ್ಕ ಪರಿಶೋಧನೆ ವೇಳೆ ಪರಿಶೀಲಿಸಿ ಬಗೆಹರಿಸಲು ಆಯಾ ಬ್ಯಾಂಕ್‌ನ ಆಡಳಿತ ಮಂಡಳಿಗೆ ಸೂಚಿಸಲಾಗುತ್ತದೆ ಎನ್ನುತ್ತಾರೆ ಸಹಕಾರ ಸಂಘಗಳ ಉಪನಿಬಂಧಕ ಮುನಿಯಪ್ಪ.

ಯಶಸ್ವಿ ಬ್ಯಾಂಕ್‌ನ ಸೂತ್ರಗಳು
ಯಾವುದೇ ಸಹಕಾರ ಬ್ಯಾಂಕ್‌ ಯಶಸ್ವಿಯಾಗಲು ಬ್ಯಾಂಕ್‌ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಈ ನಿಯಮ ಪಾಲಿಸಬೇಕು
*ಪಾರದರ್ಶಕ ವ್ಯವಹಾರ
*ಗ್ರಾಹಕರ ಸಂಪೂರ್ಣ ಮಾಹಿತಿ ಸಂಗ್ರಹ
*ಸಾಲಗಾರನ ಮರುಪಾವತಿ ಸಾಮರ್ಥ್ಯ
*ನೌಕರರ ಕುಟುಂಬ, ಬೇನಾಮಿ ಸಾಲಕ್ಕೆ ಕಡಿವಾಣ
*ವ್ಯವಹಾರ ಪ್ರಕ್ರಿಯೆಯಲ್ಲಿ ನಿಯಮಗಳಿಗೆ ಮನ್ನಣೆ
*ಉತ್ತಮ ಮೇಲುಸ್ತುವಾರಿ
*ಸಾಲ ವಸೂಲಾತಿ ಬಿಗಿ ಕ್ರಮ
*ಅನುಪಯುಕ್ತ ವೆಚ್ಚಕ್ಕೆ ಕಡಿವಾಣ
*ಬೇನಾಮಿ ಸಾಲದ ಬಗ್ಗೆ ಕಣ್ಗಾವಲು
*ನಿರಂತರ ಆಂತರಿಕ ಲೆಕ್ಕ ಪರಿಶೋಧನೆ
*ಲೆಕ್ಕ ಪರಿಶೋಧಕರ ಸಲಹೆಗೆ ಆದ್ಯತೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT