ಬಾಗಲಕೋಟೆ: ಸಹಕಾರಿ ಬ್ಯಾಂಕುಗಳು ರೈತರ ಮಿತ್ರನಾಗಿ ಕೆಲಸಮಾಡಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಿರಾಣಿ ಉದ್ಯಮ ಸಮೂಹದಿಂದ ಗದ್ದನಕೇರಿಯಲ್ಲಿ ನೂತನವಾಗಿ ಆರಂಭವಾದ ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಬ್ಯಾಂಕ್ನ ಆರನೇ ಶಾಖೆಯನ್ನು ಸೋಮವಾರ ಉದ್ಘಾ ಟಿಸಿ ಅವರು ಮಾತನಾಡಿದರು.
ವಿಜಯ ಸೌಹಾರ್ದ ಕ್ರೆಡಿಟ್ ಸಹಕಾರಿ ಬ್ಯಾಂಕ್ ರೈತರ ಪರವಾಗಿ ಕೆಲಸ ಮಾಡಿಲಿದೆ ಎಂದು ಹೇಳಿದರು.
ಮುಧೋಳದಲ್ಲಿ 2006ರಲ್ಲಿ ಆರಂಭವಾದ ವಿಜಯ ಸೌಹಾರ್ದ ಸಹಕಾರಿ ಬ್ಯಾಂಕ್ ಪ್ರಸ್ತುತ 6 ಶಾಖೆಯನ್ನು ಒಳಗೊಂಡಿದ್ದು, ರೂ, 2 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ ಎಂದರು.
ಬ್ಯಾಂಕ್ ಕಳೆದ ವರ್ಷ ರೂ. 1 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದ ಅವರು ರೈತರ ಕಬ್ಬಿನ ಬಿಲ್ ಅನ್ನು ಈ ಬ್ಯಾಂಕಿನ ಮೂಲಕ ತಕ್ಷಣ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಗದ್ದನಕೇರಿ ಮಳೆಪ್ಪಯ್ಯ ಮಹಾ ಪುರುಷ ಅಜ್ಜನವರು ಹಾಗೂ ಸೀಮಿಕೇರಿ ರಾಮಾರೂಢ ಬ್ರಹ್ಮವಿದ್ಯಾ ಶ್ರಮದ ಪರಮಾಮಾರೂಢ ಮಹಾ ಸ್ವಾಮಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಜಿ.ಪಂ.ಸದಸ್ಯ ಹನುಮಂತ ನಿರಾಣಿ, ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿ.ಪಂ.ಉಪಾಧ್ಯಕ್ಷ ಹೂವಪ್ಪ ರಾಠೋಡ, ಮಾಜಿ ಶಾಸಕ ಪಿ.ಎಚ್.ಪೂಜಾರ, ಜಿ.ಪಂ. ಸದಸ್ಯ ಪಾಂಡು ಪೋಲಿಸ, ತಾ.ಪಂ.ಸದಸ್ಯ ಶ್ರೀಶೈಲ ಗೌರಿ, ಮುಕ್ಕಣ್ಣ ರಾಠೋಡ, ಚಂದ್ರಕಾಂತ ಕೇಸನೂರ, ರಾಚಪ್ಪಣ್ಣ ಕರೆಹೊನ್ನ ಮತ್ತಿತರರು ಇದ್ದರು.