ಸಿದ್ದಾಪುರ: ಬಾರಿ ಮಳೆಯಿಂದ ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಮುಳುಗುತ್ತಿದ್ದ ತನ್ನ ಸಹಪಾಠಿಯನ್ನು ನಾಗೇಂದ್ರ ಜಿ. ಎಂಬ 7ನೇ ತರಗತಿಯಲ್ಲಿ ಓದುತ್ತಿರುವ ಬಾಲಕ ರಕ್ಷಣೆ ಮಾಡಿದ ಘಟನೆ ತಾಲ್ಲೂಕಿನ ಹೆಗ್ಗರಣಿ ಸಮೀಪದ ಬೆಣ್ಣಳ್ಳಿಯಲ್ಲಿ ಈಚೆಗೆ ನಡೆದಿದೆ.
ನಾಗೇಂದ್ರ ಮತ್ತು ವೀಣಾ ಒಟ್ಟಿಗೆ ಹೆಗ್ಗರಣಿ ಸಮೀಪದ ಉಂಚಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಹೊಳೆಯಲ್ಲಿ ಅಕಸ್ಮಾತ್ ಬಿದ್ದ ವೀಣಾಳನ್ನು ಕೈಹಿಡಿದು ಹೊಳೆಯಿಂದ ದಂಡೆಗೆ ಎಳೆಯಲು ನಾಗೇಂದ್ರ ಪ್ರಯತ್ನ ಮಾಡಿದ.
ಆ ಸಂದರ್ಭದಲ್ಲಿ ತಾನೂ ಹೊಳೆಗೆ ಬಿದ್ದ. ಆದರೂ ಹೆದರದೇ ಧೈರ್ಯ ಮತ್ತು ಸಮಯಪ್ರಜ್ಞೆ ತೋರಿದ ಈತ, ತನ್ನ ಕೈಯಲ್ಲಿದ್ದ ಕೊಡೆಯನ್ನು ಹೊಳೆಯ ದಂಡೆಯ ಪೊದೆಗೆ ಸಿಕ್ಕಿಸಿದ. ಮತ್ತೊಂದು ಕೈಯಿಂದ ವೀಣಾಳನ್ನು ಹಿಡಿದುಕೊಂಡು ಹೊಳೆಯ ದಡಕ್ಕೆ ಕರೆತಂದ.
ಆ ಸಮಯದಲ್ಲಿ ಅಲ್ಲಿಗೆ ಬಂದ ವಿನಾಯಕ ಎಂಬ ಹುಡುಗ ಅವರಿಬ್ಬರನ್ನು ಮನೆಗೆ ತಲುಪಿಸಿದ ಎಂದು ಸ್ಥಳೀಯರು ಘಟನೆಯ ವಿವರ ನೀಡಿದ್ದಾರೆ. ವೀಣಾ ಬೆಣ್ಣಳ್ಳಿಯ ವೆಂಕಟ್ರಮಣ ಭಟ್ಟರ ಮಗಳಾಗಿದ್ದು, ನಾಗೇಂದ್ರ ಅವರ ತಂಗಿಯ ಮಗ ಎಂದು ಊರವರು ತಿಳಿಸಿದ್ದಾರೆ. ಈ ರೀತಿ ತನ್ನ ಜೀವದ ಹಂಗುದೊರೆದು ಬಾಲಕಿಯ ಪ್ರಾಣ ಕಾಪಾಡಿದ ನಾಗೇಂದ್ರನ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಹೆಗ್ಗರಣಿ ಭಾಗದ ಸಾರ್ವಜನಿಕರು ಕೊಂಡಾಡಿದ್ದಾರೆ.