ಹಾನಗಲ್: `ಉಳ್ಳವರು ದುರ್ಬಲರಿಗೆ ಕೈಲಾದ ಸಹಾಯ ಮಾಡುವಂತಹ ಸಹಬಾಳ್ವೆಯ ಸಮೃದ್ಧ ಸಮಾಜ ನಿರ್ಮಾಣವಾದಲ್ಲಿ ಭಾರತೀಯ ಪರಂಪರೆಗೆ ನಿಜವಾದ ಅರ್ಥ ಬರುತ್ತದೆ~ ಎಂದು ಧಾರವಾಡ ಕವಿವಿ ಮೌಲ್ಯಮಾಪನ ಕುಲಸಚಿವ ಡಾ.ಕೆ.ಆರ್.ದುರ್ಗಾದಾಸ ಹೇಳಿದರು.
ಇಲ್ಲಿನ ಗ್ರಾಮಕೇಂದ್ರದ ದಿ. ಸುದರ್ಶನ ದೇಸಾಯಿ ವೇದಿಕೆಯಲ್ಲಿ ನಾಡಹಬ್ಬ ಉತ್ಸವ ಸಮಿತಿ ಆಶ್ರಯ ದಲ್ಲಿ ನಡೆದ 75ನೇ ನಾಡಹಬ್ಬ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುರ್ಬಲ ಹಾಗೂ ಅಸಹಾಯಕರಿಗೆ ಸಮರ್ಥರು ಸಹಾಯ ಹಸ್ತ ಚಾಚಬೇಕು. ಯಾರಿಗೆ ಯಾವ ಕಾಲಕ್ಕೆ ಯಾವ ಕಷ್ಟ ಬರುತ್ತದೆ ಎಂದು ಹೇಳಲಿಕ್ಕಾಗದು.
ಆದ್ದರಿಂದ ಸರ್ವರನ್ನು ಸಮಾನವೆಂದು ತಿಳಿದು ಗೌರವದಿಂದ ಬದುಕುವ ವ್ಯವಸ್ಥೆ ಬೇಕು. ಹಣವನ್ನು ಅವಶ್ಯಕತೆಗಿಂತ ಹೆಚ್ಚಾಗಿ ಸಂಪಾದಿಸುವ ಇಚ್ಛೆಯನ್ನು ಇಟ್ಟುಕೊಳ್ಳುವ ಹಪಾಪಿತನ ಸರಿಯಲ್ಲ ಎಂದು ಅವರು ಹೇಳಿದರು.
ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಸ್.ಬಳ್ಳಾರಿ, ಉಪಾಧ್ಯಕ್ಷ ಪಿ.ವೈ. ಗುಡಗುಡಿ ಮಾತನಾಡಿದರು. ಸದಸ್ಯ ರಾದ ನಾಗೇಂದ್ರ ಬಂಕಾಪುರ, ರಾಜು ಪೇಟಕರ ಉಪಸ್ಥಿತರಿದ್ದರು. ದಾನಪ್ಪ ಗಂಟೇರ ನಿರೂಪಿಸಿದರು.
ಇಂದಿನ ಕಾರ್ಯಕ್ರಮ: ನಾಡಹಬ್ಬ ಉತ್ಸವದ ನಾಲ್ಕನೇ ದಿನದ ಸಭಾ ಕಾರ್ಯಕ್ರಮ ಅ.20ರ ರಾತ್ರಿ 8 ಗಂಟೆಗೆ ನಡೆಯಲಿದೆ.ಆದಿಶಕ್ತಿ ಸೌಹಾರ್ದ ಸಹಕಾರಿ ನಿಯ ಮಿತದ ಅಧ್ಯಕ್ಷ ಎಂ.ಬಿ.ಕಲಾಲ ಅಧ್ಯಕ್ಷತೆ ವಹಿಸುವರು. ಆನವಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾ.ಎಚ್. ಜಯಪ್ಪ ಆರ್ಥಿಕ ಅಭಿವೃದ್ಧಿಯಲ್ಲಿ ಕೃಷಿಯ ಪಾತ್ರ ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ಪೋಲಿಸ್ ಅಧೀಕ್ಷಕ ವಿ.ಎ.ಪೂಜಾರ, ವಕೀಲ ಎಸ್.ಆರ್.ಪಾಟೀಲ, ದೇವೇಂದ್ರಪ್ಪ ಮೂಡ್ಲಿ, ರಾಮಣ್ಣ ಮಾಸನಕಟ್ಟಿ, ಹನುಮಂತಪ್ಪ ನಾಗಜ್ಜನವರ, ಯಲ್ಲಪ್ಪ ಕಿತ್ತೂರ, ಡಾ.ಎಂ.ಎಸ್.ನಾಗೇಂದ್ರ (ಶಿವಾ) ಪಾಲ್ಗೊಳ್ಳವರು. ರಾತ್ರಿ 10 ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಆಡೂರಿನ ಮಾಲತೇಶ ಕಲಾ ಬಳಗದಿಂದ ವೀರ ಸಿಂಧೂರ ಲಕ್ಷ್ಮಣ ಎಂಬ ನಾಟಕ ಪ್ರಸ್ತುತಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.