ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯ ನಿರೀಕ್ಷೆಯಲ್ಲಿ ಬಡ ಕುಟುಂಬ...

Last Updated 28 ಮೇ 2012, 10:00 IST
ಅಕ್ಷರ ಗಾತ್ರ

ಗಜೇಂದ್ರಗಡ: ಹಣೆ ಬರಹಕ್ಕೆ ಹೊಣೆ ಯಾರು...? ಇಂಥದೊಂದು ಪ್ರಶ್ನೆಯನ್ನು ಬಡತನದ ಬೇಗೆಯಲ್ಲಿ ಬೆಯುತ್ತಿರುವ ಕುಟುಂಬವೊಂದು ತನ್ನಲ್ಲಿ ತಾನೇ ಹಾಕಿಕೊಂಡು ವಿಧಿ ಯಾಟವನ್ನು ನಿಂದಿಸುತ್ತಾ ನರಕ ಸದೃಶ್ಯ ದ ದಯನೀಯ ಬದುಕು ಸಾಗಿಸುತ್ತಿದೆ.

ಬೀಡಿ ಅಂಗಡಿಯನ್ನಿಟ್ಟುಕೊಂಡು ಬರೋ ಅಲ್ಪ ಮೊತ್ತದ ಆದಾಯದಲ್ಲಿಯೇ ಹೆಂಡತಿ, ಮಕ್ಕಳನ್ನು ಸಲಹುತ್ತಿದ್ದ ಪಟ್ಟಣದ ಗಂಜಿ ಪೇಟೆಯ ಧರ್ಮಾಸಾ ರಾಯಬಾಗಿ ಎಂಬುವವರಿಗೆ ದಶಕದ ಹಿಂದೆ ಕಾಮಾಲೆ ಕಾಣಿಸಿಕೊಂಡಿದೆ.

ಮೊದಲೇ ಬಡತನದಿಂದ ಕಂಗೆಟ್ಟಿದ್ದ ಧರ್ಮಾಸಾ ಕಾಮಾಲೆಗೆ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ದೊಡ್ಡ ಮೊತ್ತದ ಹಣ ಖರ್ಚಾಗುತ್ತದೆ ಎಂದು ಭಾವಿಸಿ, ನಾಟಿ ವೈದ್ಯರ ಸಲಹೆಯ ಮೇರೆಗೆ ಕಣ್ಣಲ್ಲಿ ಯಾವುದೋ ಔಷಧಿಯನ್ನು ಕಣ್ಣಿನಲ್ಲಿ ಹಾಕಿಕೊಂಡ ಪರಿಣಾಮ    ಎರಡು ಕಣ್ಣುಗಳು ಸ್ವಾಧೀನ ಕಳೆದುಕೊಂಡು ಅಂಧತ್ವಕ್ಕೆ ಒಳಗಾಗಿವೆ.

ಮೊದಲೇ ಬಡತನದ ಬೇಗೆಯಲ್ಲಿ ಬೆಂದು ಹೋಗಿದ್ದ ರಾಯಬಾಗಿ ಕುಟುಂಬಕ್ಕೆ ಧರ್ಮಾಸಾರ ಅಂಧತ್ವ ಮತ್ತೊಂದು ಸಂಕಷ್ಟ ತಂದೊಡಿತು. ಕುಟುಂಬ ನಿರ್ವಹಣೆಯ ನೊಗ ಹೊತ್ತಿದ್ದ ಧರ್ಮಾಸಾರ ಅಂಧತ್ವಕ್ಕೆ ಸಿಲುಕಿದ ಬಳಿಕ ಇಪ್ಪತ್ತರ ಹರಯದ ಹಿರಿಯ ಪುತ್ರ ಚಿದಾನಂದಸಾ ಅವರ ಹೆಗಲಿಗೆ ಬಿತ್ತು. ಆದರೆ, ಕುಟುಂಬ ನಿರ್ವಹಣೆಯ ನೊಗ ಹೊತ್ತ ಕೆಲವೇ ತಿಂಗಳಲ್ಲಿ ಚಿದಾನಂದಸಾ ಮತಿ ಭ್ರಮಣೆಗೆ ಗುರಿಯಾದರು. ಇದರಿಂದ ರಾಯಬಾಗಿ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಯಿತು.

ಸಂಕಷ್ಟಗಳ ಸರಮಾಲೆ ಎದುರಾಗುತ್ತಿರುವುದು ಒಂದೆಡೆ ಯಾದರೆ ಅವುಗಳ ನಿವಾರಣೆಗೆ ಅಗತ್ಯ ವಿರುವ ಆರ್ಥಿಕ ಬಲ ರಾಯಬಾಗಿ ಕುಟುಂಬಕ್ಕೆ ಇಲ್ಲದಂತಾಗಿ ಅಂಧತ್ವಕ್ಕೆ ಗುರಿಯಾದ ಧರ್ಮಾಸಾ ಹಾಗೂ ಮತಿಭ್ರಮಣೆಗೆ ಒಳಗಾದ ಚಿದಾನಂದಸಾ ಅವರುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲ್ಲೇ ಇಲ್ಲ.

ಪರಿಣಾಮ ದಿನಗಳು ಉರುಳಿದಂತೆ ಸಮಸ್ಯೆಗಳ ಆಳ ಹೆಚ್ಚಿತ್ತಲೇ ಸಾಗಿದೆ. ಸದ್ಯ ಧರ್ಮಾಸಾ ಅವರ ಕಿರಿಯ ಪುತ್ರ ನಾಗರಾಜಸಾ ಕುಟುಂಬ ನಿರ್ವಹಣೆ ಗಾಗಿ ಸ್ಥಳೀಯ ಬಟ್ಟೆ ಅಂಗಡಿ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೆ 400 ರೂಪಾಯಿ ಸಂಬಳವಿದೆ.

`ಈ ಅಲ್ಪ ಪ್ರಮಾಣದ ಹಣದಿಂದ ಕುಟುಂಬ ಸದಸ್ಯರ ಅನ್ನದ ಬವಣೆ ನೀಗುತ್ತಿಲ್ಲ. ಇಂತಹ ಪರಿಸ್ಥಿಯಲ್ಲಿ ತಂದೆ ಧರ್ಮಾಸಾ ಹಾಗೂ ಸಹೋದರ ಚಿದಾನಂದಸಾ ಅವರ ಅನಾರೋಗ್ಯ ಬೇರೆ ದಿನದಿಂದ ದಿನಕ್ಕೆ ಬಿಗಡಾಯಿ ಸುತ್ತಿದೆ. ಕುಟುಂಬ ಸಂಕಷ್ಟಗಳನ್ನೆಲ್ಲ ನೋಡಿ ಜೀವನವೇ ಬೇಸರವಾಗಿದೆ~ ಎಂದು ನಾಗರಾಜಸಾ ಕಣ್ಣೀರಿಟ್ಟರು.

ಹಣಕ್ಕಾಗಿ ಅಲೆದಾಟ: ಸಾಮೂಹಿಕ ವಿವಾಹವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ನೀಡುವ ಹತ್ತು ಸಾವಿರ ರೂಪಾಯಿ ನೆಚ್ಚಿಕೊಂಡು ಧರ್ಮಾಸಾರ ಕಿರಿಯ ಪುತ್ರ ನಾಗರಾಜಸಾ 2009ರಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಗದಗ ನಗರದಲ್ಲಿ ಆಯೋಜಿಸಿದ್ದ `ಸಾಮೂಹಿಕ ವಿವಾಹ~  ಕಾರ್ಯಕ್ರಮದಲ್ಲಿ ವಿವಾಹವಾದರು.

ಆದರೆ, ಈವರೆಗೂ ಆ ಹಣಕ್ಕಾಗಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ. ಆದರೆ, ಸರ್ಕಾರದ ಪ್ರೋತ್ಸಾಹದ ಧನ ಮಾತ್ರ ಕನ್ನಡಿಯೊಳಗಿನ ಗಂಟಿ ನಂತಾಗಿರುವುದು ವಿಪರ್ಯಾಸದ ಸಂಗತಿ. 

ಕಿತ್ತು ತಿನ್ನುವ ಬಡತನವೊಂದೇ ಆಗಿದ್ದರೆ ಹೇಗಾದರೂ ನಿಭಾಯಿ ಸಬಹುದು. ಆದರೆ, ಅಂಧತ್ವದ ತಂದೆ, ಹಾಗೂ ಬುದ್ದಿಮಾಂದ್ಯ ಸಹೋದರ, ವಯೋವೃದ್ಧ ತಾಯಿ ಇವರೆಲ್ಲರ ಆರೋಗ್ಯ ಸಂರಕ್ಷಣೆಯ ಜೊತೆಗೆ ಕುಟುಂಬ ನಿರ್ವಹಣೆಯಿಂದಾಗಿ ಬಸವಳಿದ ಅಸಹಾಯಕ ನಾಗರಾಜಸಾ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಒಟ್ಟಾರೆ ಬಡತನದ ಬೇಗುದಿ ಒಂದೆಡೆಯದರೆ, ಕಾಯಿಲೆಗಳ ಮಹಾ ಪೂರ ಇನ್ನೊಂದೆಡೆ ರಾಯಬಾಗಿ ಕುಟುಂಬವನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ. ಉದಾರಿಗಳು ರಾಯಬಾಗಿ ಅವರ ಕಷ್ಟ ನಿವಾರಣೆಯಲ್ಲಿ ಪಾಲುದಾರರಾಗುವರೇ? ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದ್ದು, ನೆರವಿನ ಮಹಾಪೂರ ಹರಿಯುವುದೇ? ಎಂಬುದನ್ನು ಕುಟುಂಬ ತೆವಗೊಂಡ ಕಣ್ಣುಗಳಿಂದ ಎದುರು ನೋಡುತ್ತಿದೆ.

ನೆರವು ನೀಡಿ
ಕುರುಡು ತಂದೆ, ಮತಿಭ್ರಮಣೆಗೆ ಒಳಗಾದ ಸಹೋದರ, ವಯೋವೃದ್ಧ ತಾಯಿ ಇವರುಗಳ ಯೋಗ ಕ್ಷೇಮದ ಜೊತೆಗೆ ಕುಟುಂಬ ನಿರ್ವಹಣೆಯ ನೊಗ ಹೊತ್ತು ನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿರುವ ರಾಯಬಾಗಿ ಕುಟುಂಬ ನೆರವಿನ ನಿರೀಕ್ಷೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT