ಮುಂಬೈ(ಪಿಟಿಐ): ಷೇರು ನಿಯಂತ್ರಣ ಮಂಡಳಿ(ಸೆಬಿ) ಕೈಗೊಂಡಿದ್ದ ಬ್ಯಾಂಕ್ ಖಾತೆ ಮತ್ತು ಸ್ಥಿರಾಸ್ತಿ ಜಪ್ತಿ ಕ್ರಮದ ವಿರುದ್ಧ ಸಹಾರ ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು `ಸಾಲಪತ್ರಗಳ ಮೇಲ್ಮನವಿ ನ್ಯಾಯಾಧಿಕರಣ' (ಎಸ್ಎಟಿ) ಏ. 20ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಸುಬ್ರತಾ ರಾಯ್ ಅವರು ಹಾಜರುಪಡಿಸಿದ ಬ್ಯಾಂಕ್ ಮತ್ತು ಸ್ಥಿರಾಸ್ತಿ ದಾಖಲೆಪತ್ರಗಳನ್ನು ಶನಿವಾರದ ಪ್ರಾಥಮಿಕ ಹಂತದ ವಿಚಾರಣೆ ವೇಳೆ `ಎಸ್ಎಟಿ' ಪರಿಶೀಲಿಸಿತು.
ಸಹಾರಾ ಹೌಸಿಂಗ್ ಇನ್ವೆಸ್ಟ್ಮೆಂಟ್ ಕಾರ್ಪ್ ಲಿ. ಮತ್ತು ಸಹಾರಾ ಇಂಡಿಯ ರಿಯಲ್ ಎಸ್ಟೇಟ್ ಕಾರ್ಪ್ ಲಿ.ನ ಹಿರಿಯ ಅಧಿಕಾರಿಗಳೂ ಸುಬ್ರತಾ ರಾಯ್ ಜತೆ ಶನಿವಾರ ಎಸ್ಎಟಿ ಎದುರು ಹಾಜರಾಗಿದ್ದರು.
ಷೇರುದಾರರ ರೂ24,000 ಕೋಟಿ ಹಣ ವಾಪಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿರುವ ಸಹಾರಾ ಸಮೂಹದ ಬ್ಯಾಂಕ್ ಖಾತೆಗಳು ಮತ್ತು ಹಲವು ಸ್ಥಿರಾಸ್ತಿಗಳನ್ನು `ಸೆಬಿ' ಸದ್ಯ ಜಪ್ತಿ ಮಾಡಿಕೊಂಡಿದೆ.