ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಿ ಹಾಕಲು ಕಲಿಯುವುದೇ ಸಾಕ್ಷರತೆಯಲ್ಲ

Last Updated 9 ಸೆಪ್ಟೆಂಬರ್ 2011, 8:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: `ಸಹಿ ಹಾಕುವುದರಿಂದ ಮಾತ್ರವೇ ಯಾರೂ ಸಹ ಸಾಕ್ಷರರಾಗುವುದಿಲ್ಲ. ಓದುವುದನ್ನು ಮತ್ತು ಬರೆಯುವುದನ್ನು ಚೆನ್ನಾಗಿ ಅರಿತುಕೊಂಡಿರುವವರು ಮಾತ್ರ ಸಾಕ್ಷರರು. ಸಾಕ್ಷರತೆ ಯೋಜನೆಯ ಉದ್ದೇಶವು ಸಹಿ ಹಾಕುವುದನ್ನು ಕಲಿಸುವುದಕ್ಕೆ ಮಾತ್ರವೇ ಸೀಮಿತವಾಗದೇ ವ್ಯಕ್ತಿಯನ್ನು ಪರಿಪೂರ್ಣವಾಗಿ ಅಕ್ಷರಸ್ಥರನ್ನಾಗಿ ಸುವುದು ಗುರಿಯಾಗಬೇಕು ಎಂದು ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.

ಅಂತರರಾಷ್ಟ್ರೀಯ ಸಾಕ್ಷರತೆ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ನಾಲ್ಕು ಅಕ್ಷರಗಳನ್ನು ಕಲಿತರೆ ಸಾಲದು, ನೆಮ್ಮದಿಯ ಮತ್ತು ಆತ್ಮವಿಶ್ವಾಸದ ಜೀವನಕ್ಕೆ ಎಲ್ಲ ಅಕ್ಷರಗಳನ್ನು ಕಲಿಯಬೇಕು. ಅಕ್ಷರ ಕಲಿಕೆಯಿಂದ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು~ ಎಂದರು.

`ಸಾಕ್ಷರತೆ ಪ್ರಮಾಣಲ್ಲಿ ನಮ್ಮ ದೇಶವು ಇನ್ನೂ ಹಿಂದುಳಿದಿದ್ದು, ಅದರಲ್ಲೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರಾಗಿದ್ದಾರೆ. ಕಿರಿಯರಿಗೆ ಮಾತ್ರವಲ್ಲ ಹಿರಿಯರಿಗೂ ಸಾಕ್ಷರತೆಯ ಪಾಠ ಮಾಡಬೇಕಿದೆ.

ಅತ್ಯಾಧುನಿಕತೆಯಿಂದ ಕೂಡಿರುವ ಇಂದಿನ ದಿನಗಳಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅಕ್ಷರ ಕಲಿಕೆ ಅತ್ಯಗತ್ಯ~ ಎಂದು ಅವರು ತಿಳಿಸಿದರು.

`ಸಾಕ್ಷರತೆ ಯೋಜನೆಯಲ್ಲಿ ತೊಡಗಿಕೊಂಡಿರುವ ಸಿಬ್ಬಂದಿಗಳಿಗೆ ಸರ್ಕಾರದ ವತಿಯಿಂದ ಉತ್ತಮ ಸೌಕರ್ಯ ಸಿಗಬೇಕು. ಅಕ್ಷರ ಕಲಿಯುವವರಿಗೆ ಎಷ್ಟು ಮಾನ್ಯತೆ ನೀಡಲಾಗುತ್ತಿದೆಯೋ ಅಷ್ಟೇ ಆದ್ಯತೆಯನ್ನು ಅಕ್ಷರ ಕಲಿಸುವವರಿಗೂ ಕೊಡಬೇಕು. ಹೀಗಾದಾಗ ಮಾತ್ರ ಸಾಕ್ಷರತೆ ಯೋಜನೆಯ ಗುರಿಯು ಯಶಸ್ವಿಯಾಗುತ್ತದೆ~ ಎಂದು ಅವರು ತಿಳಿಸಿದರು.

`ಸಾಕ್ಷರತೆಯ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಪ್ರಪ್ರಥಮ ಬಾರಿಗೆ ರಾತ್ರಿ ಶಾಲೆಗಳನ್ನು ತೆರೆದರು. ರೈತರು, ಕಾರ್ಮಿಕರು ಮುಂತಾದವರು ಅಕ್ಷರ ಕಲಿಯಬೇಕು, ಅಕ್ಷರಸ್ಥರಾಗ ಬೇಕು ಎಂಬುದು ಅವರ ಗುರಿ  ಯಾಗಿತ್ತು. ಈಗ ವಿದ್ಯಾರ್ಥಿಗಳು ಕುಟುಂಬದ ಸದಸ್ಯರಿಗೆ ಅಕ್ಷರ ಕಲಿಸುವುದರ ಮೂಲಕ  ವಿಶ್ವೇಶ್ವರಯ್ಯನವರ ಕನಸು ನನಸಾಗಿಸಬೇಕು~ ಎಂದರು.

ಜಿಲ್ಲಾ ಪಂಚಾಯಿತಿ ಉಪಧ್ಯಕ್ಷೆ ಬಿ.ಸಾವಿತ್ರಮ್ಮ ಮಾತನಾಡಿ, `ಅಕ್ಷರ ಕಲಿಕೆ ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು. 6 ರಿಂದ 14 ವಯೋಮಾನದ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಬೇಕು. ಶಾಲೆಗಳಿಂದ ದೂರ ಉಳಿದಿರುವ ಮಕ್ಕಳನ್ನು ಶಾಲೆಗೆ ಸೇರಿಸುವುದರ ಮೂಲಕ ಶಿಕ್ಷಣದ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ~ ಎಂದರು.

ಶಿಕ್ಷಣ ತಜ್ಞ ಪ್ರೊ. ಕೋಡಿರಂಗಪ್ಪ ಮಾತನಾಡಿ, `ಹೆಣ್ಣುಮಕ್ಕಳು ಶಾಲೆಗೆ ಹೋದರೆ ಅಥವಾ ಅಕ್ಷರ ಕಲಿತರೆ, ಅವರಿಗೆ ಒಳ್ಳೆಯದಾಗಲ್ಲ. ಮದುವೆಯಾಗಲ್ಲ ಎಂಬ ಮೂಢನಂಬಿಕೆ ಒಂದು ಕಾಲದಲ್ಲಿ ಜನರಲ್ಲಿತ್ತು. ಶಾಲೆಗಳನ್ನು ತೆರೆಯದಂತೆ ಆಕ್ಷೇಪ ಕೂಡ ವ್ಯಕ್ತವಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದ್ದು, ಹೆಣ್ಣುಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಅಕ್ಷರ ಸಂಸ್ಕೃತಿ ಮತ್ತು ಕಲಿಕೆ ಕುರಿತು ನಿಧಾನವಾಗಿ ಎಲ್ಲರಲ್ಲೂ ಜಾಗೃತಿ ಮೂಡುತ್ತಿದೆ~ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎಸ್.ಶೇಖರಪ್ಪ, ಸದಸ್ಯೆ ಮಂಜುಳಾ, ಸದಸ್ಯ ಪಿ.ಎನ್.ಮುನೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಯು.ಚಂದ್ರಶೇಖರ್, ಅಜವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT