ಹಂಪಿ (ಬಳ್ಳಾರಿ ಜಿಲ್ಲೆ): ಮಲೆನಾಡಿನ ಮಡಿಕೇರಿಯಲ್ಲಿ ಮೂರು ದಿನಗಳ ಕಾಲ ನಡೆದ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗುಂಗಿನಲ್ಲಿರುವ ನಾಡಿನ ಜನರನ್ನು ಬಿಸಿಲ ನಾಡಿನ ಹಂಪಿಯಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಉತ್ಸವ ಕೈಬೀಸಿ ಕರೆಯುತ್ತಿದೆ.
ತುಂಗಭದ್ರೆಯ ದಡದಗುಂಟ ಹರಡಿಕೊಂಡಿದ್ದ ವಿಜಯನಗರ ಸಾಮ್ರಾಜ್ಯದ ವೈಭವವು ಈ ಮೂಲಕ ಮೂರು ದಿನಗಳ ಕಾಲ ಮರುಕಳಿಸಲಿದ್ದು, ಕಲ್ಲುಗಳಲ್ಲಿ ಅರಳಿದ ಕಲೆಯಿಂದ ಜಗದ್ವಿಖ್ಯಾತಿ ಪಡೆದಿರುವ ಈ ತಾಣದಲ್ಲಿ ಸಾಂಸ್ಕೃತಿಕ ವೈಭವವೂ ಕಲಾಸಕ್ತರ ಮನತಣಿಸಲಿದೆ.
ವಿಜಯನಗರದ ದೊರೆ ಶ್ರೀ ಕೃಷ್ಣದೇವರಾಯನ ಹೆಸರಿನ ಪ್ರಧಾನ ವೇದಿಕೆಯೂ ಸೇರಿದಂತೆ ಒಟ್ಟು ನಾಲ್ಕು ವೇದಿಕೆಗಳು ಗಾಯನ, ನೃತ್ಯ, ನಾಟಕ, ಜನಪದ ಕಲಾವಿದರ ಪ್ರತಿಭೆಯ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದು, ಸಕಲ ಸಿದ್ಧತೆಗಳೂ ಅಂತಿಮ ಹಂತ ತಲುಪಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಂಜೆ ಉತ್ಸವಕ್ಕೆ ಚಾಲನೆ ನೀಡಲಿದ್ದು, ಎಲ್ಲ ವಯೋಮಾನದ ಜನರನ್ನು ಆಕರ್ಷಿಸಲೆಂದೇ ಮೊದಲ ಬಾರಿಗೆ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಹಿಳೆಯರು, ಮಕ್ಕಳು, ಅಂಗವಿಕಲರು, ಸಾಹಸಪ್ರಿಯರು, ಛಾಯಾಗ್ರಾಹಕರು, ಕ್ರೀಡಾಪಟುಗಳು ಮತ್ತು ಚಿತ್ರ ಕಲಾವಿದರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.
ಚಲನಚಿತ್ರ ಹಿನ್ನೆಲೆ ಗಾಯಕರಾದ ಎಂ.ಡಿ.ಪಲ್ಲವಿ, ಕಸ್ತೂರಿ ಶಂಕರ್, ಶಾನ್, ಅರ್ಚನಾ ಉಡುಪ, ಕುನಾಲ್ ಗಾಂಜಾವಾಲಾ, ಸುನಿಧಿ ಚೌಹಾಣ್, ಸಂಗೀತಾ ಕಟ್ಟಿ, ವಸುಂಧರಾ ದಾಸ್, ರಘು ದೀಕ್ಷಿತ್, ಗಝಲ್ ಗಾಯಕರಾದ ಪಂಕಜ್ ಉದಾಸ್, ತಲತ್ ಅಜೀಜ್, ಶಾಸ್ತ್ರೀಯ ಸಂಗೀತಗಾರರಾದ ಶುಭಾ ಮುದ್ಗಲ್, ಎಂ.ಎಸ್.ಶೀಲಾ, ಪಂ. ರಾಜಶೇಖರ ಮನ್ಸೂರ್, ರಾಜೀವ್ ತಾರಾನಾಥ, ಹೆಗ್ಗಾರ ಅನಂತ ಹೆಗಡೆ ಮತ್ತಿತರ ಪ್ರಮುಖರು ಉತ್ಸವಕ್ಕೆ ಮೆರುಗು ನೀಡಲಿದ್ದು, ಒಟ್ಟು ₨ 7.5 ಕೋಟಿ ವೆಚ್ಚದಲ್ಲಿ ಉತ್ಸವ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.
ಕಬಡ್ಡಿ, ಕುಸ್ತಿ, ಮಲ್ಲಕಂಭ ಒಳಗೊಂಡ ಗ್ರಾಮೀಣ ಕ್ರೀಡಾಕೂಟ, ಮಹಿಳೆಯರಿಗಾಗಿ ಅಡುಗೆ, ರಂಗೋಲಿ ಮತ್ತು ಮೆಹಂದಿ ಸ್ಪರ್ಧೆ, ನಾಟಕ, ಯಕ್ಷಗಾನ, ವಚನ ಗಾಯನ, ನೃತ್ಯರೂಪಕ, ತೊಗಲು ಗೊಂಬೆ ಆಟ, ಕವಿಗೋಷ್ಠಿ, ಮಕ್ಕಳು, ಅಂಗವಿಕಲ ಕಲಾವಿದರಿಗೆ ಅವಕಾಶ ನೀಡಿರುವುದು ಈ ಬಾರಿಯ ಉತ್ಸವದ ವಿಶೇಷ. ಹೆಲಿಕಾಪ್ಟರ್ ಮೂಲಕ ಆಗಸದಿಂದಲೇ ಶಿಲ್ಪಕಲಾ ವೈಭವವನ್ನು ಕಣ್ತುಂಬಿಸಿಕೊಳ್ಳಲು ‘ಹಂಪಿ ಬೈ ಸ್ಕೈ’ ವ್ಯವಸ್ಥೆ ಮಾಡಲಾಗಿದೆ.
ಕುಂಚದಿಂದ ಹಂಪಿಯ ಕಲಾಸೊಬಗನ್ನು ಸೆರೆ ಹಿಡಿದ ಚಿತ್ರ ಕಲಾವಿದರಿಗಾಗಿ ‘ಹಂಪಿ ಬೈ ಆರ್ಟ್’, ಕ್ಯಾಮೆರಾ ಮೂಲಕ ಹಂಪಿಯ ಸ್ಮಾರಕಗಳನ್ನು ಸೆರೆ ಹಿಡಿಯುವ ಛಾಯಾಗ್ರಾಹಕರಿಗಾಗಿ ‘ಹಂಪಿ ಬೈ ಲೆನ್ಸ್’ ಸ್ಪರ್ಧೆಗಳು, ಸಾಹಸ ಕ್ರೀಡೆ, ದೋಣಿ ವಿಹಾರ ಪ್ರಿಯರನ್ನು ಐತಿಹಾಸಿಕ ತಾಣದೆಡೆ ಸೆಳೆಯುವಂತೆ ಮಾಡಿದೆ.
ಉತ್ಸವದ ಉದ್ಘಾಟನೆಗೆ ಮುನ್ನ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಶೋಭಾಯಾತ್ರೆ ನಡೆಯಲಿದ್ದು, ಕೊನೆ ದಿನ ನಡೆಯುವ ‘ಜನಪದ ವಾಹಿನಿ’ ಕಲಾ ಮೆರವಣಿಗೆಯಲ್ಲಿ ನಾನಾ ತಂಡಗಳು ಭಾಗವಹಿಸಲಿವೆ.
ಉತ್ಸವದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಭಾರಿ ಭದ್ರತೆ ಒದಗಿಸಲಾಗಿದ್ದು, ವಿವಿಧ ಜಿಲ್ಲೆಗಳಿಂದ ಸಾವಿರಾರು ಪೊಲೀಸರು ಬಂದಿದ್ದಾರೆ.
ಉತ್ಸವಕ್ಕೆ ಬರುವ ಜನರಿಗೆ ಜಿಲ್ಲಾಡಳಿತದ ವತಿಯಿಂದ ನಿತ್ಯವೂ ರಾತ್ರಿ ₨ 5ಕ್ಕೆ ಊಟ ಒದಗಿಸಲು ಅಕ್ಕತಂಗಿಯರ ಗುಡ್ಡ ಹಾಗೂ ಕೃಷ್ಣ ಬಝಾರ್ ಬಳಿ ವ್ಯವಸ್ಥೆ ಮಾಡಲಾಗಿದೆ. ಹೊಸಪೇಟೆಯಿಂದ ಹಂಪಿಗೆ ತೆರಳಲು ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ಗಳ
ವ್ಯವಸ್ಥೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.