ಹೊಸಪೇಟೆ ತಾಲ್ಲೂಕಿನ ಹಂಪಿ, ಕಮಲಾಪುರ ಸುತ್ತ ಮುತ್ತಲಿನ ರೈತರು ತುಂಗಭದ್ರೆಯ ಕೃಪೆಗೆ ಪಾತ್ರರಾದ ರು.ಹೆಚ್ಚು ಕಡಿಮೆ ವರ್ಷ ಪೂರ್ತಿ ನೀರಿನ ಸೌಲಭ್ಯವಿದೆ. ಬಹುತೇಕ ರೈತರು ಕಬ್ಬು, ಭತ್ತ, ಬಾಳೆ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ. ಕಡ್ಡಿರಾಂಪುರದ ಮರಿಸ್ವಾಮಿ ಮಠದ ಬಸಯ್ಯ ಸ್ವಾಮಿ ಎಂಬ ರೈತರು ಸಣ್ಣ ನರ್ಸರಿ ಮಾಡಿ ಸಾಗವಾನಿ ಮತ್ತಿತರ ಸಸಿಗಳನ್ನು ಬೆಳೆಸಿ ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ.
ಬಸಯ್ಯಸ್ವಾಮಿ ಅವರಿಗೆ 12 ಎಕರೆ ಭೂಮಿ ಇದೆ. ಅವರು ಕಾಲು ಎಕರೆಯ ನರ್ಸರಿಯಲ್ಲಿ ಹಲವಾರು ಬಗೆಯ ಸಸಿಗಳನ್ನು ಬೆಳೆಸಿದ್ದಾರೆ. ಸಸ್ಯಗಳಿಗೆ ಕಸಿ ಕಟ್ಟುತ್ತಾರೆ.
ಬಸಯ್ಯಸ್ವಾಮಿ ಅವರ ನರ್ಸರಿಯಲ್ಲಿ ಸಾಗವಾನಿ ಸಸಿಗಳು ಹೆಚ್ಚಾಗಿವೆ. ಅವುಗಳಿಗೆ ಬೇಡಿಕೆ ಇರುವುದನ್ನು ಮನಗಂಡು 8-10 ವರ್ಷಗಳಿಂದ ಸಸಿ ಬೆಳೆಸುತ್ತಿದ್ದಾರೆ. ಹಂಪಿ, ಕಡ್ಡಿರಾಂಪುರದ ಸುತ್ತಮುತ್ತಲಿನ ರೈತರು ಬೆಳೆಸಿರುವ ಸಾಗವಾನಿ ಮರಗಳು ಇವರ ನರ್ಸರಿಯಲ್ಲಿ ಬೆಳೆದವು.
ಅವರು ಇದುವರೆಗೆ 10,000 ಸಾಗವಾನಿ ಮತ್ತಿತರ ಸಸಿಗಳನ್ನು ಮಾರಾಟ ಮಾಡಿದ್ದಾರೆ. ಹಂಪಿ ಸುತ್ತಲಿನ ಪ್ರದೇಶದಲ್ಲಿ ನೀರಿನ ಕೊರತೆ ಇಲ್ಲದಿರುವುದರಿಂದ ಅಲ್ಲಿ ಸಾಗವಾನಿ ಮರಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬಹುದು. ಸಾಗವಾನಿ ಮರಗಳನ್ನು ಬೆಳೆಸುವುದು ಆರ್ಥಿಕವಾಗಿ ಲಾಭದಾಯಕ. ಅವರ ನರ್ಸರಿಯಲ್ಲಿ ನಾಗಲಿಂಗ ಪುಷ್ಪದ ಸಸಿಗಳು, ಬಾದಾಮಿ ಗಿಡಗಳು, ವಿವಿಧ ತುಳಸಿಗಳ ಸಸಿಗಳನ್ನು ಬೆಳೆಸಿದ್ದಾರೆ.