ದೇವನಹಳ್ಳಿ: ಸಾಧಕ ರೈತರನ್ನು ಗುರುತಿಸಿ ಸನ್ಮಾನಿಸುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಕೆ.ವೆಂಕಟಸ್ವಾಮಿ ಹೇಳಿದರು.ಇಲ್ಲಿನ ಸ್ವಾಮಿ ವಿವೇಕಾನಂದ ಚಾರಿಟಬಲ್ ಟ್ರಸ್ಟ್ ರಾಮನಗರ ಜಿಲ್ಲೆ ನಿಜಿಯಪ್ಪನ ದೊಡ್ಡಿ ಗ್ರಾಮದ ಪ್ರಗತಿಪರ ರೈತ ಎನ್.ಆರ್.ಸುರೇಂದ್ರ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರದ ತಪ್ಪು ನೀತಿಗಳಿಂದ ಶೇ. 70 ರಷ್ಟು ರೈತರಿಗೆ ಅನ್ಯಾಯವಾಗುತ್ತಲೆ ಇದೇ.ಪ್ರಗತಿಪರ ರೈತರನ್ನು ಸರ್ಕಾರ ಗುರುತಿಸಿ ಗೌರವಿಸುವುದಕ್ಕಿಂತ ಮೊದಲು ಸಂಘ, ಸಂಸ್ಥೆಗಳು ಅವರಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ನಾಲ್ಕು ದಶಕಗಳ ಹಿಂದಿನ ಕೃಷಿ ಚಟುವಟಿಕೆಗೂ ಪ್ರಸಕ್ತ ಕೃಷಿಗೂ ವ್ಯತ್ಯಾಸವಿದೆ.ರಾಸಾಯನಿಕ ಕೃಷಿಗೆ ರೈತರು ಅವಲಂಬಿತರಾದರೆ ಭೂಮಿಯ ಫಲವತ್ತತೆ ಕಳೆದುಕೊಳ್ಳಬೇಕಾಗುತ್ತದೆ.
ಪುರಸಭೆ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಿನಾರಾಯಣ ಮಾತನಾಡಿ, ಕೃಷಿ ಕುಟುಂಬದಿಂದ ಬಂದ ರೈತ ಮಕ್ಕಳು ಕೃಷಿ ಬಗ್ಗೆಯೇ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ತಾಲ್ಲೂಕಿನ ಫಲವತ್ತಾದ ಭೂಮಿ, ಆಹಾರ ಬೆಳೆ, ವಾಣಿಜ್ಯ, ಪುಷ್ಪ ಕೃಷಿ ಹಾಗೂ ತರಕಾರಿ ಮತ್ತು ಹಣ್ಣುಗಳ ಬೆಳೆಗೆ ಉತ್ತಮ ಹಾಗೂ ಯೋಗ್ಯವಾಗಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷಿಕ ಎನ್,ಆರ್.ಸುರೇಂದ್ರ, ನಮ್ಮ ತಂದೆಯ ಕೃಷಿ ಚಟುವಟಿಕೆ ಕಾಳಜಿ ನನಗೆ ಪ್ರೇರಣೆಯಾಯಿತು.ಐದು ಎಕರೆ ಭೂಮಿಯಲ್ಲಿ ಎಲ್ಲಾ ಬೆಳೆಯನ್ನು ಬೆಳೆಯಲು ಪ್ರಯತ್ನ ಪಟ್ಟೆ, ಲಾಭ, ನಷ್ಠದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸತತ ಪರಿಶ್ರಮದಿಂದ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡೆ ಎಂದರು.
ಈ ಸಂದರ್ಭದಲ್ಲಿ ಎನ್.ಆರ್.ಸುರೇಂದ್ರ ಹಾಗೂ ಅವರ ತಾಯಿಗೆ ಚಾರಿಟಬಲ್ ಟ್ರಸ್ಟ್ವತಿಯಿಂದ 60 ಸಾವಿರ ರೂ ಹಾಗೂ ಶಾಸಕ ಕೆ.ವೆಂಕಟಸ್ವಾಮಿ 5 ಸಾವಿರ ರೂ ನಗದು ನೀಡಿ ಸನ್ಮಾನಿಸಿದರು.ತಾಲ್ಲೂಕು ರೈತ ಸಂಘ ಅಧ್ಯಕ್ಷ ಗಾರೆ ರವಿಕುಮಾರ್,ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎ.ಚಿನ್ನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿದರು.
ಸ್ವಾಮಿ ವಿವೇಕಾನಂದ ಚಾರಿಟೆಬಲ್ ಟ್ರಸ್ಟ್ ಕಾರ್ಯದರ್ಶಿ ನಾರಾಯಣ ಸ್ವಾಮಿ, ಶೇಷಾದ್ರಿಪುರಂ ಕಾಲೇಜು ಶಿಕ್ಷಣ ಸಂಸ್ಥೆ ನಿರ್ದೇಶಕ ವೀರಭದ್ರಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಸಿ.ಚಂದ್ರಪ್ಪ ಮತ್ತು ಜಿಲ್ಲಾ ಬಿ.ಜೆ.ಪಿ.ಕಾರ್ಯದರ್ಶಿ ದೆ.ಸು.ನಾಗರಾಜ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.