ಹಿರಿಯೂರು: ವಿವಿಧ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡಿರುವ ಮಹನೀಯರ ಸ್ಮರಣೆ ಮೂಲಕ ನಿಮ್ಮ ಸಾಧನೆಗೆ ಸ್ಫೂರ್ತಿ ಪಡೆಯಿರಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್. ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರಿನ ಚೇತನ ಸಂಸ್ಥೆ ಹಾಗೂ ಚಳ್ಳಕೆರೆಯ ಟೇಕ್ ಸಂಸ್ಥೆ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ `ಪರೀಕ್ಷೆ ಒಂದು ಹಬ್ಬ, ಸಂಭ್ರಮಿಸಿ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಮಾಣಿಕ ಪ್ರಯತ್ನ, ದಕ್ಷತೆ, ಶಿಸ್ತುಬದ್ಧ ಓದು, ಆಸಕ್ತಿಯುತ ಕಲಿಕೆಯಿಂದ, ಓದುವಿಕೆ ಜತೆಗೆ ಬರೆಯುವಿಕೆ ಇದ್ದರೆ ಖಂಡಿತಾ ಯಶಸ್ಸು ಸಿಗುತ್ತದೆ. ಶಿಕ್ಷಕರು ಸಕಾಲದಲ್ಲಿ ಅರಿವು ಮೂಡಿಸುವ ಮೂಲಕ ಮಕ್ಕಳ ಸಾಧನೆಗೆ ಪ್ರೇರಣೆ ನೀಡಬೇಕು, ಮಕ್ಕಳ ವ್ಯಕ್ತಿತ್ವ ವಿಕಸನವಾಗುವಂತೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ರೇವಣಸಿದ್ದಪ್ಪ ಮಾತನಾಡಿ, ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂಬ ಪ್ರಶ್ನೆಯನ್ನು ಈಗಲೇ ಹಾಕಿಕೊಳ್ಳುವುದು ಉತ್ತಮ. ಅದಕ್ಕೆ ತಕ್ಕಂತೆ ಬದುಕನ್ನು ರೂಪಿಸಿಕೊಳ್ಳಬೇಕು. ಪರಿಶ್ರಮವಿದ್ದಲ್ಲಿ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದರು.
ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ತಿರುಮಲೇಶ್, ವಿದ್ಯಾಧಿಕಾರಿ ಎಂ.ಎನ್. ರಮೇಶ್, ಎಸ್ಕೆಬಿ ಪ್ರಸಾದ್, ಟೇಕ್ ಸಂಸ್ಥೆ ಕಾರ್ಯದರ್ಶಿ ಗಜೇಂದ್ರನಾಯ್ಕ, ಕೆ. ರಂಗಪ್ಪ, ಚಂದ್ರಪ್ಪ, ಮಹೇಶ್ವರಪ್ಪ, ಸತೀಶ್ ಮತ್ತಿತರರು ಹಾಜರಿದ್ದರು. ಶಿಕ್ಷಣ ಸಂಯೋಜಕ ಸತೀಶ್ ಸ್ವಾಗತಿಸಿದರು.