ಹುಮನಾಬಾದ್: ತ್ಲ್ಲಾಲೂಕಿನ ಅಂಗವಿಕಲರಿಗಾಗಿ ವಿವಿಧ ಸಾಧನ ಸಲಕರಣೆ ಖರೀದಿಸಲು ತಮ್ಮ ನಿಧಿಯಿಂದ ರೂ.5ಲಕ್ಷ ಅನುದಾನ ನೀಡುವುದಾಗಿ ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯಿತಿ ಬಿ.ಆರ್.ಜಿ.ಎಫ್ ಯೋಜನೆ ಅಡಿಯಲ್ಲಿ 2010-11ನೇ ಸಾಲಿಗಾಗಿ ಮಂಜೂರಾದ ಸಾಧನ ಸಲಕರಣೆಗಳನ್ನು ಅಂಗವಿಕಲರಿಗೆ ವಿತರಿಸಿ ಮಾತನಾಡಿದರು.
ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಸಾಧಿಸಬೇಕೆಂಬ ಛಲ ಹೊಂದಿರುವ ವ್ಯಕ್ತಿ ಜೀವನದಲ್ಲಿ ಎಂಥ ಸಮಸ್ಯೆಯಾದರೂ ಸರಿ ಅತ್ಯಂತ ಸರಳ ಸಾಧಿಸಬಲ್ಲ. ಸದೃಢರಿಂದ ಸಾಧ್ಯವಾಗದ ಅದೆಷ್ಟೋ ಮಹತ್ವಪೂರ್ಣ ಕಾರ್ಯಗಳನ್ನು ಅಂಗವಿಕಲರು ಸಾಧಿಸಿ ತೋರಿಸಿದ ನಿದರ್ಶನ ನಮ್ಮ ಕಣ್ಮುಂದೆ ಜೀವಂತ ಇವೆ. ವಿಶಿಷ್ಟ ಸಾಧನೆ ಗೈಯ್ಯಲು ಮುಂದೆ ಬರುವ ಅಂಗವಿಕಲರಿಗೆ ತಮ್ಮಿಂದ ಅಗತ್ಯ ಸಹಾಯ ಸಹಕಾರ ನೀಡಲು ಸದಾಸಿದ್ದ ಇರುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಸ್ತಾನ್ ನೂರೋದ್ದೀನ್ ಮಾತನಾಡಿ, ಅಂಗವಿಕಲರಿಗೆ ತಮ್ಮ ನಿಧಿಯಿಂದ ರೂ. 3ಲಕ್ಷ ಅನುದಾನ ನೀಡುವುದಾಗಿ ಪ್ರಕಟಿಸಿದ, ಅವರು ಅಗತ್ಯ ಬಿದ್ದರೇ ವೈಯಕ್ತಿಕವಾಗಿ ಹೆಚ್ಚಿನ ನೆರವು ನೀಡುವುದಾಗಿ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಖೆ ಜಿಲ್ಲಾ ನಿರ್ದೇಶಕ ದೊರೆಸ್ವಾಮಿ ಮಾತನಾಡಿ, ಅಂಗವಿಕಲರಿಗೆ ಬೇಕಾಗಿರುವುದು ಅನುಕಂಪ ಅಲ್ಲ ಅವಕಾಶ. ಅದನ್ನು ಚುನಾಯಿತ ಪ್ರತಿನಿಧಿಗಳು, ಸಮಾಜ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಹೆಚ್ಚಿನದನ್ನು ಸಾಧಿಸಿ ತೋರಿಸಬಲ್ಲರು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಉಮಾದೇವಿ ಬಸವರಾಜ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣಿ, ಸದಸ್ಯ ಗಜೇಂದ್ರ ನಕಟಕರ್, ತಾಲ್ಲೂಕು ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಮೇಶ ಮತ್ತು ಪದಾಧಿಕಾರಿಗಳು ಇದ್ದರು. ಬನ್ಸಿ ಪವಾರ ನಿರೂಪಿಸಿ, ವಂದಿಸಿದರು.