ಹೆಬ್ರಿ: ಕಾಂಗ್ರೆಸ್ ಕಾರ್ಯಕರ್ತರು ಜಾಗ್ರತೆಯಿಂದ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ ಸಾಧನೆಯನ್ನು ಜನತೆಗೆ ತಿಳಿಸಿ ಮತಯಾಚಿಸಬೇಕಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಮುದ್ರಾಡಿ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ಬಿಜೆಪಿಯವರು ಸುಳ್ಳನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿ ಮತಯಾಚನೆ ಮಾಡುತ್ತಿದ್ದಾರೆ. ನಾನೆಂದೂ ಓಡಿ ಹೋಗುವ ರಾಜಕೀಯ ಮಾಡಿಲ್ಲ. ಹಿಂದಿನಿಂದಲೂ ಸ್ವಕ್ಷೇತ್ರದಲ್ಲೇ ನಿಂತು ಜನರ ಕೆಲಸ ಮಾಡಿದ್ದೆನೆ. ಚುನಾವಣೆಯಲ್ಲಿ ಗೆದ್ದಾಗಲೂ ಸೋತಾಗಲೂ ಜನರ ಬಳಿಗೆ ಬಂದು ಸಿಕ್ಕಿದ 20 ತಿಂಗಳ ಅವಧಿಯಲ್ಲಿ ಸಾಧ್ಯವಾದಷ್ಟು ಕೆಲಸ ಮಾಡಿದ್ದೇನೆ. ಮುಂದೆ ಅವಕಾಶ ನೀಡಿದರೆ ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ’ ಎಂದರು.
‘ಬಿಜೆಪಿಯವರು ಯಾವುದೇ ಸುಳ್ಳು ಹೇಳಬೇಕಾದರೆ ಒಮ್ಮೆ ಯೋಚಿಸಿ ಸ್ವಲ್ಪ ದಾಖಲೆಗಳನ್ನು ನೋಡಲು ಕಲಿಯಿರಿ. ಸುಳ್ಳಿನಿಂದ ನಿರಂತರ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ’ ಎಂದು ಜಯಪ್ರಕಾಶ ಹೆಗ್ಡೆ ಹೇಳಿದರು.
ಕಾಂಗ್ರೆಸ್ ಹಿರಿಯ ಮುಖಂಡ ಗೋಪಾಲ ಭಂಡಾರಿ ಮಾತನಾಡಿ, ‘ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿಯವರು ನೂರು ಸುಳ್ಳುಗಳನ್ನು ಹೇಳಿ ಮತದಾರರನ್ನು ನಂಬಿಸಲು ಹೊರಟ್ಟಿದ್ದಾರೆ. ನಾವು ಸುಳ್ಳು ಹೇಳಲು ಹೋಗಲ್ಲ ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. 10 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡದ ಪಡಿತರ ಚೀಟಿ ಸಮಸ್ಯೆಯನ್ನು ನಿವಾರಿಸಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಶೇ 80 ಬಿಪಿಎಲ್ ಕಾರ್ಡು ನೀಡಿ ನುಡಿದಂತೆ ನಡೆದಿದ್ದೇವೆ’ ಎಂದು ಹೇಳಿದರು. ಮುದ್ರಾಡಿ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪೂಜಾರಿ, ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಕಾರ್ಯದರ್ಶಿ ನವೀನ ಅಡ್ಯಂತಾಯ, ಸಂತೋಷ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಆಚಾರ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಮುದ್ರಾಡಿ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಪ್ರಮುಖರಾದ ಚಂದ್ರಶೇಖರ ಬಾಯರಿ,ಸದಾಶಿವ ಶೆಟ್ಟಿ, ಜಯಕರ ಶೆಟ್ಟಿ, ಸರೋಜಾ ಹೆಗ್ಡೆ, ಗುಣವತಿ ಶೆಟ್ಟಿಗಾರ್, ಪಂಚಾಯಿತಿ ಸದಸ್ಯರು, ಸ್ಥಳೀಯ ಮುಖಂಡರು ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.