ರಾಯಚೂರು: ಕ್ರೀಡಾ ಕ್ಷೇತ್ರವೇ ಇರಲಿ. ರಾಜಕೀಯವೇ ಇರಲಿ. ಎಲ್ಲದಕ್ಕೂ ಶ್ರದ್ಧೆ ಅವಶ್ಯ. ಶ್ರದ್ಧೆ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮೆರೆಯಬಹುದು. ಯುವಕರು ಪರಿಶ್ರಮದಿಂದ ತಮ್ಮ ಆಸಕ್ತಿ ಕ್ಷೇತ್ರದಲ್ಲಿ ಪ್ರತಿಭೆ ಮೆರೆದು ಸಾಧನೆ ಮಾಡಬೇಕು ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಸಾತ್ವಾ ಹೇಳಿದರು.
ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಜಿಶಾಸಕ ಎನ್.ಎಸ್ ಬೋಸರಾಜ ಪ್ರತಿಷ್ಠಾನವು ಶುಕ್ರವಾರ ಆಯೋಜಿಸಿದ್ಧ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕ್ರಿಕೆಟ್ ಎಂದ ತಕ್ಷಣ ನಮ್ಮ ದೇಶದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಕಣ್ಮುಂದೆ ನಿಲ್ಲುತ್ತಾರೆ. ಕ್ರಿಕೆಟ್ನಲ್ಲಿ ಒಬ್ಬ ಉತ್ತಮ ಬ್ಯಾಟ್ಸಮನ್ ಆಗಿ ಅವರು ಮಾಡದ ದಾಖಲೆಗಳೇ ಇಲ್ಲ. ಇಂಥ ಮಹತ್ವದ ಸಾಧನೆಗೆ ಅವರು ಚಿಕ್ಕವಯಸ್ಸಿನಲ್ಲಿ ಪಟ್ಟ ಶ್ರಮ. ನಂತರದ ದಿನಗಳಲ್ಲಿ ಅನುಸರಿಸಿದ ಶ್ರದ್ಧೆಯೇ ಕಾರಣ ಎಂದು ತಿಳಿಸಿದರು.
ಶಾಸಕ ಸಯ್ಯದ್ ಯಾಸಿನ್, ಮಾಜಿ ಶಾಸಕ ಎನ್.ಎಸ್ ಬೋಸರಾಜ, ಮಾಜಿಸಂಸದ ಎ. ವೆಂಕಟೇಶ ನಾಯಕ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಭೈರೇಗೌಡ ಮತ್ತಿತರಿದ್ದರು.