ದಾವಣಗೆರೆ: ಸಾಮರಸ್ಯದಿಂದ ಉತ್ತಮ ಆಡಳಿತ ಮತ್ತು ಸುಧಾರಣೆ ಸಾಧ್ಯ ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಹೇಳಿದರು.
ಸಮೀಪದ ಕಾಡಜ್ಜಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ `ಮಂಥನ~ ಆಡಳಿತ ಚಿಂತನಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬಗ್ಗೆ ಜನಸಾಮಾನ್ಯರಲ್ಲಿ ನಕಾರಾತ್ಮಕ ಭಾವನೆ ಇದೆ. ಆದರೆ, ಇರುವ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವುದು ಕಷ್ಟಸಾಧ್ಯ ಎಂಬುದು ಅಧಿಕಾರಿ-ಜನಪ್ರತಿನಿಧಿಗಳ ಅಂಬೋಣವಾಗಿದೆ. ಉತ್ತಮ ಸಾಧನೆ ಮಾಡಿ ತೋರಿಸುವ ದಿಸೆಯಲ್ಲಿ ಈ ಎರಡೂ ವರ್ಗ ಸಕಾರಾತ್ಮಕವಾಗಿ ಚಿಂತಿಸಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ರಾಜಕೀಯ ವಲಯ ಮತ್ತು ಅಧಿಕಾರಿ ವಲಯಗಳ ಮನಸ್ಥಿತಿಗಳ ಮಧ್ಯೆ ಅವಲೋಕನ ನಡೆಯುವುದರಿಂದ ಜಿಲ್ಲಾಡಳಿತ ಕ್ರಿಯಾಶೀಲತೆ ಪಡೆದುಕೊಳ್ಳುತ್ತದೆ. ವೃತ್ತಿಪರತೆ, ಕ್ರಿಯಾಶೀಲತೆಯಿಂದ ಸಮಾಜ ಸುಧಾರಣೆ ಸರಳವಾಗುತ್ತದೆ.
ಜವಾಬ್ದಾರಿಯನ್ನು ಎರಡೂ ವರ್ಗಗಳು ಅರಿತು ಸಾಗುವುದರಿಂದ ಜನರ ವಿಶ್ವಾಸ ಗಳಿಸಬಹುದು ಎಂದರು.
ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಎಲ್ಲಾ ಕಡೆ ಪ್ರಾಮಾಣಿಕತೆ ಕಣ್ಮರೆಯಾಗುತ್ತಿದೆ. ದಕ್ಷತೆಯಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದರೊಂದಿಗೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಮೇಯರ್ ಎಂ.ಎಸ್. ವಿಠ್ಠಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ. ಗುರುಸಿದ್ದನಗೌಡ, ಜಿಲ್ಲಾ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.