ಪುತ್ತೂರು: ಶಿಕ್ಷಕರು ಶಾಲಾ ಚೌಕಟ್ಟಿನ ಪರಿಧಿಯನ್ನು ದಾಟಿ ಸಾಮಾಜಿಕ ಚಳವಳಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಹೇಳಿದರು. ಪುತ್ತೂರಿನ ಕರ್ನಾಟಕ ಸಂಘ ಮತ್ತು ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅನುರಾಗ ಆವರಣದಲ್ಲಿ ‘ಸಾಹಿತ್ಯ ಕಲಾ ಕುಶಲೋಪರಿ ಸಂಸ್ಕೃತಿ ಸಲ್ಲಾಪ’ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ ‘ಶಿಕ್ಷಕರ ಸಾಹಿತ್ಯ ಸಂಸ್ಕೃತಿ ಸಂಭ್ರಮ’ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ನಿರಂತರ ಓದುವ ಜೊತೆಗೆ ಕೆಲಸದಲ್ಲಿ ತೃಪ್ತಿ ಪಡಬೇಕು. ಮಕ್ಕಳಲ್ಲಿ ಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಶೇಷಶಯನ, ಸರ್ಕಾರಿ ಶಾಲೆಗಳಲ್ಲಿ ಸಾಹಿತ್ಯದ ಬೆಳವಣಿಗೆಗೆ ಶಿಕ್ಷಕರು ಮುಂದಾಗಬೇಕು ಎಂದರು.ಪುತ್ತೂರು ಕ್ಷೇತ್ರ ಸಂಪನೂಲ ಕೇಂದ್ರದ ಸಮನ್ವಯಾಧಿಕಾರಿ ರಾಮಸ್ವಾಮಿ ಗೌಡ ಮಾತನಾಡಿ, ಗುರುಪರಂಪರೆಯಿಂದ ಸಾಮಾಜಿಕ ಬದಲಾವಣೆ ಸಾಧ್ಯ. ಶಿಕ್ಷಕರಲ್ಲಿ ಸಾಹಿತ್ಯ ರಚನೆ ಹಾಗೂ ಅಭಿರುಚಿಯ ಕೊರತೆಯಿದೆ ಎಂದರು.
ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ತಾರಾನಾಥ ಸವಣೂರು ಪ್ರಾಸ್ತಾವಿಕ ಮಾತನಾಡಿದರು. ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಅತಿಥಿಗಳನ್ನು ಗೌರವಿಸಿದರು. ಶಿಕ್ಷಕ ಚರಣ್ ಕುಮಾರ್, ತೇಜಸ್ವಿನಿ ಅಂಬೆಗಲ್ಲು, ವಿಜಯಕುಮಾರ್ ಐವರ್ನಾಡು ಇದ್ದರು.