ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಪ್ರಜ್ಞೆಯಿಂದ ಸಾಹಿತ್ಯ ರಚಿಸಿ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸ್ವಾತಂತ್ರ್ಯಪೂರ್ವದಲ್ಲಿ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುವ ಮೂಲಕ ಲೇಖಕಿ ಜಯದೇವಿ ತಾಯಿ ಲಿಗಾಡೆ ಅವರು ಸಾಮಾಜಿಕ ಹೋರಾಟಗಾರ್ತಿಯಾಗಿ ರೂಪುಗೊಂಡಿದ್ದರು. ಪ್ರಸ್ತುತ ಲೇಖಕಿಯರು ಲಿಗಾಡೆ ಅವರ ಆದರ್ಶಗಳನ್ನು ಅನುಸರಿಸುವ ಅಗತ್ಯವಿದೆ~ ಎಂದು `ಮಯೂರ~ ಮಾಸಪತ್ರಿಕೆಯ ಸಹಾಯಕ ಸಂಪಾದಕಿ ಡಾ.ಆರ್.ಪೂರ್ಣಿಮಾ ಅಭಿಪ್ರಾಯಪಟ್ಟರು.

ಕರ್ನಾಟಕ ಲೇಖಕಿಯರ ಸಂಘವು ಜಯದೇವಿ ತಾಯಿ ಲಿಗಾಡೆ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಗಮಕ ಕಾರ್ಯಕ್ರಮ ಮತ್ತು ಆರು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. 

`ಸಾಹಿತಿಗಳು ಸಾಮಾಜಿಕ ಪ್ರಜ್ಞೆಯನ್ನು ಇಟ್ಟುಕೊಂಡು ಸಾಹಿತ್ಯವನ್ನು ರಚಿಸಬೇಕು. ಆಗ ಮಾತ್ರ ಅದಕ್ಕೆ ಒಂದು ಮೌಲ್ಯವಿರುತ್ತದೆ. ಯಾವುದೇ ಸಾಹಿತ್ಯ ದಂತಗೋಪುರದಡಿ ರಚನೆಯಾಗದೇ, ನೈಜ ವಿಚಾರಗಳತ್ತ ಒಲವು ತೋರಬೇಕು. ಈ ನಿಟ್ಟಿನಲ್ಲಿ ಯುವ ಲೇಖಕಿಯರು ಹೆಜ್ಜೆ ಇಡಬೇಕು~ ಎಂದು ಸಲಹೆ ನೀಡಿದರು.

`ಲಿಗಾಡೆಯವರು ಈ ಕಾಲದಲ್ಲಿ ಜೀವಂತವಾಗಿದ್ದರೆ, ಸಾಮಾಜಿಕ ಪಿಡುಗುಗಳ ವಿರುದ್ಧ ದನಿ ಎತ್ತುತ್ತಿದ್ದರು. ಆದರೆ, ಈ ವಿಚಾರದಲ್ಲಿ ಮಹಿಳೆಯರು, ಲೇಖಕಿಯರು ಕೈಕಟ್ಟಿ ಕೂರದೇ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದಾಗಬೇಕು~ ಎಂದು ಅವರು ಕರೆ ನೀಡಿದರು.

ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, `ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಲೇ ಹಲವು ಬಗೆಯ ಮಾರಕ ಕಾಯಿಲೆಗಳನ್ನು ಸ್ವಾಗತಿಸುತ್ತಿದ್ದೇವೆ. ಉದ್ಯೋಗ, ಜೀವನಶೈಲಿಯೊಂದಿಗೆ ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ~ ಎಂದು ತಮ್ಮ ಕೃತಿಯ ಬಗ್ಗೆ ವಿವರಿಸಿದರು.

ಇದೇ ಸಂದರ್ಭದಲ್ಲಿ ವಸುಂಧರಾ ಭೂಪತಿ ಅವರ `ಆರೋಗ್ಯ-ವೈವಿಧ್ಯ~ `ಆಹಾರ ಮತ್ತು ಆರೋಗ್ಯ~, ಗುಣಸಾಗರಿ ನಾಗರಾಜ್ ಅವರ `ಮುಷ್ಟಿಯೊಳಗಿನ ಹೆಣ್ಣು~ `ಪರಿವರ್ತನೆ~, ವಿಜಯಾ ವಿಷ್ಣುಭಟ್ ಅವರ `ವಿವಾಹ ಮತ್ತು ಮಹಿಳೆ~, `ಪ್ರಬಂಧ ಸಂಚಯ~ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಸಂಗೀತ ಮತ್ತು ಗಮಕ ವಿದುಷಿ ಎನ್. ಶ್ರೀಮತಿ, ಹಿರಿಯ ಲೇಖಕಿ ಬಿ.ಜಿ. ಕುಸುಮ ಅವರಿಂದ ಜಯದೇವಿ ತಾಯಿ ಲಿಗಾಡೆ ಅವರ ಸಿದ್ಧರಾಮೇಶ್ವರ ಪುರಾಣದ ಗಮಕ ವಾಚನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT