ಗಜೇಂದ್ರಗಡ: ಸಾಮೂಹಿಕ ವಿವಾಹಗಳು ಜಾತ್ಯತೀತ ವೇದಿಕೆಗಳಂತೆ ಕಾರ್ಯನಿರ್ವಹಿಸಬೇಕು. ಅಂದಾಗ ಮಾತ್ರ ಶ್ರೇಣಿಕೃತ ಸಮಾಜದಲ್ಲಿ ಸಮಾನತೆ ಮೂಡಲು ಸಾಧ್ಯ ಎಂದು ಯಲಬುರ್ಗಾದ ಶ್ರೀಧರ ಮುರಡಿ ಮಠದ ಬಸವಲಿಂಗೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಜಿಗೇರಿ ಗ್ರಾಮದ ಗುರುಸಿದ್ಧೇಶ್ವರ ಮಠದಲ್ಲಿ ಗುರುಸಿದ್ಧೇಶ್ವರ ಸ್ವಾಮೀಜಿ 27ನೇ ಪುಣ್ಯಸ್ಮರಣೆ ಹಾಗೂ ಸಾಮೂಹಿಕ ಕಲ್ಯಾಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಸಮಾಜದಲ್ಲಿ ನೆಲೆಯೂರಿರುವ ಜಾತೀಯತೆ ಮನೋಭಾವ ನಿರ್ಮೂಲನೆ ಮಾಡಿ ಸಮಾನತೆಯ ವೇದಿಕೆ ನಿರ್ಮಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಜಾತ್ಯತೀತ ಮನೋಭಾವ ನೆಲೆ ಸುವುದಕ್ಕಾಗಿ ಅಂತರಜಾತಿ ವಿವಾಹಗಳಿಗೆ ಆದ್ಯತೆ ನೀಡಿದ್ದರು.
ವಾಸ್ತವಾಂಶ ಹೀಗಿದ್ದರೂ ಸಮಾಜದಲ್ಲಿ ಇಂದಿಗೂ ಜಾತೀಯತೆ ಉಳಿದುಕೊಂಡಿರುವುದು ಕಳಕವಳಕಾರಿ ಸಂಗತಿಯಾಗಿದೆ ಎಂದರು.
ಕೆಜಿಪಿ ಮುಖಂಡ ಬಿ.ಎಂ.ಸಜ್ಜನರ ಮಾತನಾಡಿ, ವೈವಾಹಿಕ ಸಂಬಂಧದಲ್ಲಿ ವಧು ತನ್ನ ಎಲ್ಲ ಸಂಬಂಧ ಕಡಿದುಕೊಂಡು ಬಂದಿರುತ್ತಾಳೆ. ವೈವಾಹಿಕ ಜೀವನದ ಕುರಿತು ತನ್ನದೇ ಯಾದ ಆಸೆ, ಆಕಾಂಕ್ಷಿಗಳನ್ನು ಇಟ್ಟುಕೊಂಡಿರುತ್ತಾಳೆ.
ಹೀಗಾಗಿ ವಧುವಿನ ಆಕಾಂಕ್ಷಿಗಳಿಗೆ ಭಂಗವನ್ನುಂಟು ಮಾಡುವ ಕಾರ್ಯಕ್ಕೆ ವರ ಹಾಗೂ ವರನ ಕಡೆಯವರು ಮುಂದಾಗ ಬಾರದು. ವಧುವನ್ನು ಅತ್ಯಂತ ಗೌರವದಿಂದ ಕಂಡು ಆದರನೀಯ ಮನೋಭಾವದ ಮೂಲಕ ಸಂಸಾರ ಸಾಗಿಸಬೇಕ ಎಂದರು. ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಸ್ತುತ ಶ್ರೇಣಿಕೃತ ಸಮಾಜದಲ್ಲಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಹೊಂದಬೇಕಾದರೆ, ಶಿಕ್ಷಣ ಅತಿ ಅವಶ್ಯ. ಈ ಹಿನ್ನೆಲೆಯಲ್ಲಿ ಪಾಲಕರು ಆರ್ಥಿಕ ಹೊರೆಗೆ ಅನುಸಾ ರವಾಗಿ ಮಕ್ಕಳನ್ನು ಹೆತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು. ಎಂದರು.