ಸೂರತ್ (ಪಿಟಿಐ): ಪೊಲೀಸರು ಮತ್ತು ಇತರ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಿದ ಆರೋಪದಲ್ಲಿ ಒಬ್ಬ ಸಬ್ ಇನ್ಸ್ಪೆಕ್ಟರ್ ಮತ್ತು ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಪುತ್ರ ನಾರಾಯಣ್ ಸಾಯಿಯ ಐವರು ಸಹಚರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಯಿ ವಿರುದ್ಧದ ಲೈಂಗಿಕ ಹಲ್ಲೆ ಪ್ರಕರಣವನ್ನು ದುರ್ಬಲಗೊಳಿಸುವುದಕ್ಕಾಗಿ ಲಂಚ ನೀಡಲು ಯತ್ನಿಸಿದ ಆರೋಪ ಇವರ ಮೇಲಿದೆ. ಇವರಿಂದ ಐದು ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಪರಾಧ ಪತ್ತೆ ದಳದ ಸಬ್ ಇನ್ಸ್ಪೆಕ್ಟರ್ ಸಿ.ಕೆ. ಕುಂಭಾನಿ ಪ್ರಕರಣವನ್ನು ದುರ್ಬಲಗೊಳಿಸಲು ಹಣಕ್ಕೆ ಬೇಡಿಕೆ ಇರಿಸಿದ್ದ ಮತ್ತು ಇತರ ಪೊಲೀಸರು, ವೈದ್ಯರು ಹಾಗೂ ನ್ಯಾಯಾಧೀಶರಿಗೆ ತಾನೇ ಹಂಚುವುದಾಗಿ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.