ಮುಗಳಖೋಡ: ಇಲ್ಲಿಯ ಚನ್ನಬಸವೇಶ್ವರ ವಿದ್ಯಾವರ್ಧಕದ ಸಂಘದಲ್ಲಿ ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಬೆಳ್ಳಿ ಕೀರಿಟಧಾರಣೆ ಕಾರ್ಯಕ್ರಮ ಗುರುವಾರ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ಬಸವೇಶ್ವರ ನಗರದ ಖೇತಗೌಡರರ ಮನೆಯಿಂದ ಮೆರವಣಿಗೆಯು ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಬಿ.ನೀ. ಕುಲಿಗೋಡ ಸಂಯುಕ್ತ ಪ.ಪೂ. ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ಸಾಯಿಬಾಬಾ ಮಂದಿರದ ಬಳಿಯಲ್ಲಿ ಸಮಾವೇಶಗೊಂಡಿತು.
ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತ ವಿದ್ಯಾರ್ಥಿನಿಯರು, ಕೋಲಾಟ, ಲೇಜಿಮ್ ಕುಣಿತ ಹಾಗೂ ಸಾಯಿಬಾಬಾರ ರೂಪಕಗಳು, ಸ್ತಬ್ಧ ಚಿತ್ರಗಳು ವಿಶೇಷ ಮೆರಗು ನೀಡಿತ್ತು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಡಾ. ಸಿ.ಬಿ. ಕುಲಿಗೋಡ ಹಾಗೂ ಅಧ್ಯಕ್ಷ ಸಂಜಯ ಕುಲಿಗೋಡ ಅವರು ಮಂದಿರದಲ್ಲಿ ಸಾಯಿಬಾಬಾರ ಮೂರ್ತಿಗೆ ಬೆಳ್ಳಿಯ ಕಿರೀಟ ಧಾರಣೆ ಮಾಡಿದರು.
ವಿಜಯಕುಮಾರ ಶಹಾ, ಹನುಮಾನಸಾಹೇಬ ನಾಯಿಕ, ಸಂಗಪ್ಪ ಜಂಬಗಿ, ಅಪ್ಪಾಸಾಬ ಹಿಪ್ಪರಗಿ, ಬಸವರಾಜ ತೇರದಾಳ, ವಿಜಯಗೌಡ ನಾಯಿಕ, ಡಾ.ಎಂ.ವೈ. ಯಡವಣ್ಣವರ ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಜರುಗಿತು.