ಬೆಳಗಾವಿ: ಗ್ರಾಮದ ಜನರ ನೆಮ್ಮದಿ ಹಾಳು ಮಾಡಿರುವ ಸಾರಾಯಿ ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ದಡ್ಡಿ ರಾಮೇವಾಡಿ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಸಾರಾಯಿ ಕುಡಿಯುವುದರಿಂದ ಗ್ರಾಮದ ಬಹಳಷ್ಟು ಕುಟುಂಬಗಳು ಹಾಳಾಗಿವೆ. ಹೆಂಡತಿ, ಮಕ್ಕಳು ಬೀದಿ ಪಾಲಾಗಿದ್ದಾರೆ. ಕುಡಿದ ಅಮಲಿನಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆಗಳು ನಡೆದಿವೆ.
ಇದೇ ಕಾರಣದಿಂದ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಕುಡುಕರ ಹಾವಳಿಯಿಂದಾಗಿ ಊರಿಗೆ ಕೆಟ್ಟ ಹೆಸರು ಬಂದಿದೆ. ಮಹಿಳೆಯರು ತಲೆ ಎತ್ತಿ ತಿರುಗಾಡದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ.
ಕೂಡಲೇ ಗ್ರಾಮದ ಪರಿಸ್ಥಿತಿ ತಿಳಿದುಕೊಳ್ಳಲು ಸಂಬಂಧಿಸಿದ ಅಧಿಕಾರಿಗಳನ್ನು ಕಳುಹಿಸಿಕೊಡಬೇಕು ಹಾಗೂ ಸಾರಾಯಿ ಅಂಗಡಿಗಳನ್ನು ಮುಚ್ಚಲು ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು. ಲಕ್ಷ್ಮೀ ಮಾನೆ, ರೇಹನಾ ಬಿ, ಪ್ರಜ್ಞಾ ಮಾನೆ, ನಾಗವ್ವ ತಳವಾರ, ವಿಷ್ಣು ರೇಡೆಕರ, ಪ್ರಸಾದ ಪಿ, ಬಾಬು ವಡ್ಡರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.