ಸೊರಬ: ಸಮಾಜದ ಸ್ವಾಸ್ತ್ಯ ಹಾಳು ಮಾಡುವ ಸಾರಾಯಿ ನಮಗೆ ಬೇಡ ಎಂದು ತಾಲ್ಲೂಕಿನ ಕುಣೆತೆಪ್ಪ ಗ್ರಾಮದ ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.
ಪಟ್ಟಣದ ಅಬಕಾರಿ ಇಲಾಖೆ ಕಚೇರಿ ಎದುರು ಸಾರಾಯಿ ನಿಷೇಧಕ್ಕೆ ಆಗ್ರಹಿಸಿದ ಅವರು, ಪ್ರಸ್ತುತ ಒಂದೊಂದು ಗ್ರಾಮಗಳಿಗೆ 3-4 ಸಾರಾಯಿ ಅಂಗಡಿ ತೆರೆಯಲು ಇಲಾಖೆ ಅನುಮತಿ ನೀಡಿದೆ. ಸ್ವಚ್ಛ, ನೆಮ್ಮದಿ ಬದುಕಿಗೆ ತೊಂದರೆಯಾಗಿದ್ದು, ಕುಡಿತಕ್ಕೆ ಮನೆಗೆ ಸಮೀಪ ಅಂಗಡಿಗಳು ಇರುವುದರಿಂದ ಪುರುಷರು ದಿನದ 24 ತಾಸು ಹೆಂಡದ ಅಂಗಡಿಯಲ್ಲಿ ಕಾಲ ಕಳೆದು ಹೆಂಡತಿ ಮಕ್ಕಳನ್ನು ಉಪವಾಸ ಕೆಡುವುತ್ತಿದ್ದಾರೆ ಎಂದು ಅಬಕಾರಿ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಮನೆಯಲ್ಲಿ ಸಂಗ್ರಹಿಸಿಟ್ಟ ಪುಡಿಗಾಸುನ್ನು ಕದ್ದು, ಮನೆ, ಮಾನ ಹಾಳು ಮಾಡುವುದಷ್ಟೇ ಅಲ್ಲದೇ, ಗ್ರಾಮದ ಹೆಸರುನ್ನು ಕೆಡಿಸಿ ಹೊಲೆಸೆಬ್ಬಿಸಿದ್ದಾರೆ. ಹಾಗಾಗಿ, ಕೂಡಲೇ, ನಮ್ಮ ಗ್ರಾಮದಲ್ಲಿ ಸಾರಾಯಿ ಅಂಗಡಿ ಮುಚ್ಚಬೇಕು. ಇಲ್ಲದಿದ್ದರೆ ತಾಲ್ಲೂಕು ಕೇಂದ್ರದಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಶಶಿಕಲಾ, ಮಮತಾ, ಪೂರ್ಣಿಮಾ, ಜಯಮ್ಮ, ಲಲಿತಾ, ಗೀತಾ ಅನಸೂಯಾ, ಕಮಲಮ್ಮ, ಬಂಗಾರಮ್ಮ, ಶ್ವೇತಾ, ಸಾಕಮ್ಮ, ಹನುಮಂತಮ್ಮ, ನೇತ್ರಾ ಸುಶೀಲಮ್ಮ, ಶಾಂತಮ್ಮ ರೇಣುಕಾ ಹಾಜರಿದ್ದರು.