ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಕೆಂಗೇರಿ-ಉತ್ತರಹಳ್ಳಿ ರಸ್ತೆಯಲ್ಲಿರುವ ಕಾಫಿ ಮಿಲೇಂಗೆ ರೆಸ್ಟೋರೆಂಟ್ ವ್ಯವಸ್ಥಾಪಕನಿಗೆ ಹಾಗೂ ರೆಸ್ಟೋರೆಂಟ್ನಲ್ಲಿ ಹುಕ್ಕಾ ಸೇವಿಸುತ್ತಿದ್ದ ಎಂಟು ಮಂದಿಗೆ ರಾಜರಾಜೇಶ್ವರಿ ಪೊಲೀಸರು ಶನಿವಾರ ನೋಟಿಸ್ ನೀಡಿದ್ದಾರೆ.
ರೆಸ್ಟೋರೆಂಟ್ನಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ, ಕಾರ್ಮಿಕ ಹಿತರಕ್ಷಣಾ ಟ್ರಸ್ಟ್ನ ಸದಸ್ಯರು ಶನಿವಾರ ಸಂಜೆ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದರು. ಈ ವೇಳೆ ರೆಸ್ಟೋರೆಂಟ್ನಲ್ಲಿ ದೊರೆತ ಹುಕ್ಕಾ ಪೆಟ್ಟಿಗೆಗಳನ್ನು ಹೊರಗೆ ಎಸೆದರು. ಘಟನೆಯಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಟ್ರಸ್ಟ್ನ ಸದಸ್ಯರು ರೆಸ್ಟೋರೆಂಟ್ನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಅಲ್ಲಿ ತಂಬಾಕು ಮಾತ್ರ ಪತ್ತೆಯಾಗಿದೆ.ಹುಕ್ಕಾ ಸೇವನೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ ಪೊಲೀಸರಿಗಿಲ್ಲ. ಬಿಬಿಎಂಪಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳಬಹುದು ಎಂದು ಪೊಲೀಸರು ತಿಳಿಸಿದರು.