ಕನಕಪುರ: ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯಿತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ಸಲಹೆ ನೀಡಿದರು.
ತಾಲ್ಲೂಕಿನ ಸಾತನೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಸಾತನೂರು ಹೋಬಳಿ ವ್ಯಾಪ್ತಿಯ ಶಿಕ್ಷಕರು ಏರ್ಪಡಿಸಿದ್ದ ಗುರುಸ್ಪಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗುರುಸ್ಪಂದನಾ ಕಾರ್ಯಕ್ರಮ ಏರ್ಪಡಿಸುತ್ತೀರಿ. ಆದರೆ ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ನೀವೂ ಕೂಡ ಸಾರ್ವಜನಿಕರೊಂದಿಗೆ ವಿಶ್ವಾಸದಿಂದ ನಡೆದುಕೊಳ್ಳಬೇಕು.
ಸಾರ್ವಜನಿಕ ವಲಯದಲ್ಲಿ ನಿಮ್ಮ ಮೇಲೆ ಸಾಕಷ್ಟು ದೂರುಗಳು ಬರುತ್ತಿವೆ, ಅವುಗಳಿಗೆ ಅವಕಾಶ ನೀಡದಂತೆ ಕೆಲಸ ನಿರ್ವಹಸಬೇಕೆಂದು ತಿಳಿಸಿದರು.
ನಿಮ್ಮಂತೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸ್ಪಂದನ ಕಾರ್ಯಕ್ರಮವಿಲ್ಲ. ಆದರೂ ಸಮಸ್ಯೆಗಳ ಬಗ್ಗೆ ಅವರು ಕೇಳುವ ಮೊದಲು ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ಶಾಲೆಯಲ್ಲಿರುವ ಶೌಚಾಲಯ, ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟು ಮಕ್ಕಳಿಗೆ ತಯಾರಿಸಿದ ಅಡುಗೆಯನ್ನು ನೀವೊಮ್ಮೆ ಸೇವಿಸುವ ಮೂಲಕ ಶುಚಿತ್ವ ಹಾಗು ಪೌಷ್ಟಿಕಯುಕ್ತ ಆಹಾರವನ್ನು ಮಕ್ಕಳಿಗೆ ನೀಡಿ. ಅವರನ್ನು ನಿಮ್ಮ ಮಕ್ಕಳಂತೆಯೇ ನೋಡಿಕೊಳ್ಳಬೇಕೆಂದು ಶಿಕ್ಷಕರಲ್ಲಿ ವಿನಂತಿಸಿಕೊಂಡರು.
ಶಿಕ್ಷಣ ಇಲಾಖೆ ಬಿ.ಆರ್.ಸಿ. ಸ್ವರೂಪ ಮಾತನಾಡಿ, ಇಲಾಖೆಯಲ್ಲಿ ಯಾವುದೇ ದುರುದ್ದೆೀಶದಿಂದ ಕಡೆತಗಳ ಹಾಗೂ ಶಿಕ್ಷಕರ ಕೆಲಸಗಳನ್ನು ವಿಳಂಬ ಮಾಡುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಕೆಲಸನಿರ್ವಹಿಸಬೇಕಿದ್ದು ಅದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ನಿಗದಿತ ಸಮಯಕ್ಕೆ ನೀಡಿದರೆ ಖಂಡಿತವಾಗಿಯೂ ನಿಮ್ಮ ಕೆಲಸವನ್ನು ಶೀಘ್ರವಾಗಿ ಮಾಡಿಕೊಡಬಹುದೆಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಾವು ಸಾರ್ವಜನಿಕರಿಂದ ಗೌರವ ಅಪೇಕ್ಷಿಸುತ್ತೇವೆ. ಅದೇ ರೀತಿಸಾರ್ವಜನಿಕರಿಗೂ ಗೌರವ ಕೊಡುವುದನ್ನು ರೂಡಿಸಿಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ರಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ತಿಪ್ಪೇಸ್ವಾಮಿ ಸ್ವಾಗತಿಸಿದರು, ಮುನಿಸ್ವಾಮಯ್ಯ ವಂದಿಸಿದರು. ಜಿಲ್ಲಾಪಂಚಾಯಿತಿ ಸದಸ್ಯೆ ಗೌರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪ್ರಕಾಶ್, ನಾಗರತ್ನಮ್ಮ, ಮಾಜಿ ಸದಸ್ಯ ಕಬ್ಬಾಳೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ತೋಟಳ್ಳಿ ನಾರಾಯಣ ಇಲಾಖೆಯ ಮ್ಯಾನೇಜರ್ ರಾಧಾಕೃಷ್ಣ ರಾವ್ ಮತ್ತಿತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.