ಬೆಂಗಳೂರು: ಹುಡ್ಕೊದಿಂದ ಹೆಚ್ಚಿನ ಬಡ್ಡಿಗೆ ಪಡೆದ ಸಾಲ ತೀರಿಸಲು ಬಿಬಿ ಎಂಪಿ, ಕೆನರಾ ಬ್ಯಾಂಕ್ನಿಂದ ರೂ. 200 ಕೋಟಿ ಹೊಸ ಸಾಲ ಪಡೆಯಲು ನಿರ್ಧರಿಸಿದೆ. ಅದಕ್ಕಾಗಿ ತನ್ನ ಎರಡು ಮಾರುಕಟ್ಟೆ ಕಟ್ಟಡಗಳನ್ನು ಅಡವು ಇಡಲು ತೀರ್ಮಾನಿಸಿದೆ.
ಮೊದಲು ಸಾಲದ ಭದ್ರತೆಗಾಗಿ ಪುರಭವನ ಕಟ್ಟಡವನ್ನು ಕೆನರಾ ಬ್ಯಾಂಕ್ಗೆ ಅಡವು ಇಡಲು ನಿರ್ಧರಿಸಲಾಗಿತ್ತು. ಆದರೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅದಕ್ಕೆ ಆಕ್ಷೇಪಿ ಸಿದ್ದರಿಂದ ನಿಲುವು ಬದಲಿಸಿದ ಬಿಬಿಎಂಪಿ, ಮಾರುಕಟ್ಟೆ ಗಳನ್ನು ಅಡವು ಇಡುವ ನಿರ್ಧಾರಕ್ಕೆ ಬಂದಿದೆ.
ವರ್ಷಗಳ ಹಿಂದೆ ಹುಂಡಿ ವ್ಯವಸ್ಥೆ ಮೂಲಕ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿದ ಸಂದರ್ಭದಲ್ಲಿ ಬಿಬಿಎಂಪಿ ಮೇಲೆ ರೂ. 200 ಕೋಟಿ ಸಾಲದ ಹೊರೆ ಬಿದ್ದಿತ್ತು. ಹುಡ್ಕೊ ದಿಂದ ಸಾಲ ಪಡೆದು, ಹಳೆಯ ಸಾಲ ವನ್ನು ತೀರಿಸಲಾಗಿತ್ತು.
‘ಹುಡ್ಕೊದಲ್ಲಿ ಬಡ್ಡಿದರ ಶೇ 14.2ರಷ್ಟಿದ್ದು, ಕೆನರಾ ಬ್ಯಾಂಕ್ ಈಗ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಒಪ್ಪಿದ್ದರಿಂದ ಆ ಬ್ಯಾಂಕ್ನಿಂದ ಹೊಸ ಸಾಲ ಪಡೆದು, ಹುಡ್ಕೊ ಬಾಕಿ ತೀರಿಸಲು ಉದ್ದೇಶಿ ಸಲಾಗಿದೆ. ಹುಡ್ಕೊದಿಂದ ಕೆನರಾ ಬ್ಯಾಂಕ್ಗೆ ಸಾಲ ವರ್ಗಾವಣೆಗೊಂಡ ಬಳಿಕ ಬಿಬಿಎಂಪಿಗೆ ಶೇ 3.36 ರಷ್ಟು ಬಡ್ಡಿದರ ಕಡಿಮೆ ಆಗಲಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ಬಿಬಿಎಂಪಿಯ ಈ ವ್ಯವಹಾರದ ಬಗೆಗೆ ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಭವನದ ಬದಲು ರಸೆಲ್ ಹಾಗೂ ಜಾನ್ಸನ್ ಮಾರುಕಟ್ಟೆ ಸ್ವಾಮ್ಯದ ಕಾಗದಗಳನ್ನು ಸಾಲದ ಭದ್ರತೆಗಾಗಿ ಒದಗಿಸಲು ನಿರ್ಧರಿಸಿದೆ.
‘ಸಾಲದ ಮೇಲಿನ ಬಡ್ಡಿ ಹೊರೆ ಕಡಿಮೆ ಮಾಡಿಕೊಳ್ಳಲು ಕೆನರಾ ಬ್ಯಾಂಕ್ನಿಂದ ಹೊಸ ಸಾಲ ಪಡೆಯ ಲಾಗುತ್ತಿದೆ. ಪುರಭವನವನ್ನೇ ಅಡವು ಇಡಲು ನಿರ್ಧಾರಿಸ ಲಾಗಿತ್ತು. ಆದರೆ, ಮುಖ್ಯಮಂತ್ರಿಗಳು ಆ ಕಟ್ಟಡ ಅಡವು ಇಡದಂತೆ ಸೂಚಿಸಿದ್ದಾರೆ’ ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿ ನಾರಾಯಣ ತಿಳಿಸಿದರು.
‘ರಸೆಲ್, ಜಾನ್ಸನ್ ಮಾರುಕಟ್ಟೆ ದಾಖಲೆಗಳನ್ನು ಬ್ಯಾಂಕ್ಗೆ ಸಾಲದ ಭದ್ರತೆಗಾಗಿ ನೀಡಲಾಗುತ್ತದೆ. ಇದು ಕೇವಲ ದಾಖಲೆಗಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಸಾಲ ಮರು ಪಾವತಿಯಲ್ಲಿ ಬಿಬಿಎಂಪಿ ಯಾವತ್ತೂ ವಿಫಲವಾದ ಉದಾಹರಣೆ ಇಲ್ಲ. ಈ ಕಟ್ಟಡಗಳ ಸ್ವಾಮ್ಯದ ವಿಷಯವಾಗಿ ಆತಂಕ ಪಡುವ ಅಗತ್ಯವಿಲ್ಲ’ಎಂದರು. ಬಿಬಿಎಂಪಿ ಈ ಮುನ್ನ ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, ಕೆ.ಆರ್. ಮಾರುಕಟ್ಟೆ ಕಟ್ಟಡಗಳನ್ನು ಸಾಲಕ್ಕಾಗಿ ಅಡವು ಇಟ್ಟಿತ್ತು.
‘ಪುರಭವನ ಅಡವು ಬೇಡ’
ಬಿಜೆಪಿ ಆಡಳಿತದ ಭ್ರಷ್ಟಾಚಾರದ ಪ್ರತಿ ಫಲವನ್ನು ನಮ್ಮ ಸರ್ಕಾರ ಅನುಭವಿಸುತ್ತಿದೆ. ಅಧಿಕಾರಕ್ಕೆ ಬಂದಾಗಿನಿಂದ ಹಿಂದಿನ ಸರ್ಕಾರ ಮಾಡಿರುವ ಕೊಳೆ ತೊಳೆಯುವ ಕೆಲಸವನ್ನೇ ಮಾಡುತ್ತಿದ್ದೇವೆ. ಆಗ ಯಾವುದೇ ಕೆಲಸ ಮಾಡದಿದ್ದರೂ ಬಿಬಿಎಂಪಿಯಿಂದ ಹೆಚ್ಚಿನ ಬಡ್ಡಿ ದರ ದಲ್ಲಿ ಸಾಲ ಪಡೆಯಲಾಗಿದೆ. ಅದನ್ನು ತೀರಿಸಲು ಈಗ ಕಡಿಮೆ ಬಡ್ಡಿ ದರದಲ್ಲಿ ಹೊಸ ಸಾಲ ಮಾಡ ಬೇಕಿದೆ. ಭದ್ರತೆಗೆ ಪುರಭವನ ಕಟ್ಟಡ ಅಡವು ಇಡಲು ಬಿಬಿಎಂಪಿ ನಿರ್ಧರಿ ಸಿತ್ತು. ಅದಕ್ಕೆ ಆಸ್ಪದ ನೀಡಿಲ್ಲ. ಅದರ ಬದಲು ಬೇರೆ ಕಟ್ಟಡ ಅಡವು ಇಡು ವಂತೆ ಸೂಚಿಸಲಾಗಿದೆ.
–ಸಿದ್ದರಾಮಯ್ಯ, ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.