ನವದೆಹಲಿ: ದ್ರಾಕ್ಷಿ ಮತ್ತು ದಾಳಿಂಬೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಸಾಲ ಮನ್ನಾ ಸಾಧ್ಯವಿಲ್ಲ ಆದರೆ, ಬಡ್ಡಿ ಮನ್ನಾ ಮಾಡಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸರ್ಕಾರ ಶನಿವಾರ ಖಡಾಖಂಡಿತವಾಗಿ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆ ಮೇಲಿನ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿದ ಸಮಯದಲ್ಲಿ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತೋಟಗಾರಿಕೆ ಬೆಳೆಗಳ ಮೇಲಿನ ಸಾಲ ಮನ್ನಾ ಸಾಧ್ಯವಿಲ್ಲ. ಬಡ್ಡಿ ಮನ್ನಾ ಕುರಿತು ಪರಿಶೀಲಿಸಲಾಗುವುದು. ಆರ್ಬಿಐ ಮಾರ್ಗಸೂಚಿ ಚೌಕಟ್ಟಿ-ನೊಳಗೆ ರೈತರ ಸಾಲ ಮರು ಹೊಂದಾಣಿಕೆ ಮಾಡುವ ಬಗ್ಗೆ ಚಿಂತಿಸಬಹುದು ಎಂದು ಚಿದಂಬರಂ ತಿಳಿಸಿದರು.
ಅಸಲು ಮತ್ತು ಬಡ್ಡಿ ಸೇರಿ ದ್ರಾಕ್ಷಿ ಮೇಲೆ ₨700 ಕೋಟಿ, ದಾಳಿಂಬೆ ಮೇಲೆ ₨170 ಕೋಟಿ ಸಾಲವನ್ನು ರೈತರು ಪಾವತಿಸಬೇಕಾಗಿದೆ.
ಇದಲ್ಲದೆ, ಕೊಳೆ ರೋಗದಿಂದ ನಾಶವಾಗಿರುವ ಅಡಿಕೆಗೆ ₨500 ಕೋಟಿ ಹಾಗೂ ನುಸಿ ರೋಗದಿಂದ ಹಾಳಾಗಿರುವ ತೆಂಗಿಗೆ ₨580 ಕೋಟಿ ರೂಪಾಯಿ ನೆರವು ನೀಡುವಂತೆ ಕೃಷಿ ಸಚಿವ ಶರದ್ ಪವಾರ್ ಅವರಿಗೂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ರಾಜ್ಯದ ಮನವಿಯನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಪವಾರ್ ಮುಖ್ಯಮಂತ್ರಿಗೆ ಭರವಸೆ ನೀಡಿದ್ದಾರೆ.