ಬೆಳಗಾವಿ: ಖಾಸಗಿ ಸೊಸೈಟಿ ಹಾಗೂ ಬ್ಯಾಂಕುಗಳಿಂದ ಪಡೆದಿರುವ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಅ.29 ರಿಂದ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಕೂಡಲೇ ರಾಜ್ಯ ಸರ್ಕಾರ ಸಾಲ ಮನ್ನಾಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಹಾಕಿದ ರೈತರು, ಸಾನ ಮನ್ನಾ ಮಾಡುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದರು.
ಆಲೂಗಡ್ಡೆ ಹಾಗೂ ತರಕಾರಿ ಬೆಳೆಗಳು ಕಳೆದ ಕೆಲವು ವರ್ಷಗಳಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾಳಾಗಿ ಹೋಗಿವೆ. ಮಾರುಕಟ್ಟೆಯಲ್ಲಿ ಇವುಗಳ ಧಾರಣೆಗಳು ಕುಸಿದಿವೆ. ಸಾಲ ಮರುಪಾವತಿ ಮಾಡಲು ರೈತರು ಅಶಕ್ತರಾಗಿದ್ದಾರೆ.ಆದ್ದರಿಂದ ಮನ್ನಾ ಮಾಡಬೇಕು ಎಂದು ಕೋರಿದ್ದಾರೆ.
ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಾಸಾಬ ದೇಸಾಯಿ, ಕಲಗೌಡ ಪಾಟೀಲ, ವೈಜು ಲೂಮ್ಯಾಚೆ, ನಾಗಪ್ಪ ಅಪ್ಪುಗೋಳ ಪಾಲ್ಗೊಂಡಿದ್ದರು.