ಅರಕಲಗೂಡು: ಸದಸ್ಯರಿಗೆ ನೀಡುವ ಸಾಲದ ಮೊತ್ತ ಹೆಚ್ಚಿಸಲು ಸೋಮವಾರ ನಡೆದ ತಾಲ್ಲೂಕು ಕೈಗಾರಿಕಾ ಕಸುಬುದಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿರ್ಧರಿಸಲಾಯಿತು.
ಸಾಲದ ಮೊತ್ತವನ್ನು ಹೆಚ್ಚಿಸುವಂತೆ ಬೇಡಿಕೆ ಬಂದ ಪರಿಣಾಮ 15 ಸಾವಿರ ಮೊತ್ತವನ್ನು 20 ಸಾವಿರಕ್ಕೆ ಏರಿಸಲು ಸಭೆ ಒಪ್ಪಿಗೆ ಸೂಚಿಸಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ 75 ಲಕ್ಷ ರೂಗಳ ವ್ಯವಹಾರ ನಡೆಸಿ 1.72 ಲಕ್ಷ ನಿವ್ವಳ ಲಾಭ ಗಳಿಸಿದೆ. ಮುಂದಿನ ಸಾಲಿನ ಮುಂಗಡ ಪತ್ರದಲ್ಲಿ 1.92 ಲಕ್ಷ ರೂಗಳ ಲಾಭದ ನಿರೀಕ್ಷೆ ಹೊಂದಲಾಗಿದೆ ಎಂದರು. ಸದಸ್ಯರ ಸಹಕಾರದಿಂದ ಪ್ರತಿವರ್ಷ ಲಾಭದಲ್ಲಿ ನಡೆಯುತ್ತಿದ್ದು ಷೇರುದಾರರಿಗೆ ಲಾಭಾಂಶವನ್ನು ವಿತರಿಸುತ್ತಿರುವುದು ನಮ್ಮ ಸಂಘದ ಹೆಗ್ಗಳಿಕೆಯಾಗಿದೆ ಎಂದರು.
2010-11ನೇ ಸಾಲಿನ ಜಮಾ ಖರ್ಚಿನ ವಿವರವನ್ನು ಕಾರ್ಯದರ್ಶಿ ಯೋಗೇಂದ್ರ ಮಂಡಿಸಿದರು. ಸಂಘದ ಸಹಾಯಕ ಸಿ.ಆರ್. ಕಾಂತ 2011-12 ನೇ ಸಾಲಿಗೆ ಮುಂಗಡ ಪತ್ರ ಮಂಡಿಸಿದರು. ಸಂಘದ ನಿರ್ದೇಶಕ ಎ.ಜಿ.ರಾಮನಾಥ್, ಉಪಾಧ್ಯಕ್ಷ ಮಲ್ಲೇಶಪ್ಪ ಮಾತನಾಡಿದರು. ನಿರ್ಧೇಶಕರಾದ ತಿಮ್ಮಪ್ಪ, ಸಿ.ಜಿ. ವೆಂಕಟೇಶ್, ಚನ್ನಕೇಶವಶೆಟ್ಟಿ, ಕೆ.ಟಿ.ಶಿವಕುಮಾರ್, ನಾಗಣ್ಣ, ಸಣ್ಣಪುಟ್ಟಮ್ಮ ಸಭೆಯಲ್ಲಿ ಉಪಸ್ಥಿತರಿದ್ದರು.
ವಿದ್ಯುತ್ ವ್ಯತ್ಯಯ ಇಂದು
ಪಟ್ಟಣದ ಕೋರ್ಟ್ ಆವರಣದಲ್ಲಿ ವಿದ್ಯುತ್ ಮಾರ್ಗದ ಕಾಮಗಾರಿ ಕೈಗೊಳ್ಳುವುದರಿಂದ ಸೆ. 13ರ ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಪಟ್ಟಣದ ಪೇಟೆ, ಬೈಪಾಸ್ ರಸ್ತೆ, ಪೇಟೆ ಮಾಚಗೌಡನಹಳ್ಳಿ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.