ತಲಘಟ್ಟಪುರ: `ಗ್ರಾಮೀಣ ರೈತರ ಬದುಕು ದಯನೀಯವಾಗಿದ್ದು, ಕೃಷಿಯಲ್ಲಿ ಆಧುನಿಕ ತಂತ್ರಗಾರಿಕೆಯ ಜೊತೆಗೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ' ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಕಿವಿಮಾತು ಹೇಳಿದರು.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮತ್ತು ಬಮೂಲ್ ಟ್ರಸ್ಟ್ ಆಶ್ರಯದಲ್ಲಿ ಗುಳಕಮಲೆಯಲ್ಲಿ ಮಂಗಳವಾರ ನೂತನ ಹಾಲು ಉತ್ಪಾದಕರ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
`ಗ್ರಾಮೀಣರು ಪರಿವರ್ತನೆಯಾಗಬೇಕು. ರೈತರು ಸರ್ಕಾರದ ಸವಲತ್ತುಗಳ ಕಡೆಗೆ ಗಮನ ಹರಿಸದೆ ಸ್ವಸಹಾಯ ಸಂಘಗಳ ಮೂಲಕ ಹೈನುಗಾರಿಕೆಯ ಉತ್ಪನ್ನಗಳನ್ನು ತಯಾರಿಸಬೇಕು. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಣಕಾಸಿನ ನೆರವನ್ನು ವಿವಿಧ ಯೋಜನೆಗಳಿಗೆ ನೀಡಲಾಗಿದೆ' ಎಂದರು. ವಿಧಾನಪರಿಷತ್ ಸದಸ್ಯ ಬಿ.ಟಿ. ದಯಾನಂದ ರೆಡ್ಡಿ, ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ಮಂಜುನಾಥ್ ಮಾತನಾಡಿದರು.