ಕುಮಟಾ: ಕೃಷಿಯಿಂದ ಎಲ್ಲರೂ ದೂರ ಸರಿಯುತ್ತಿರುವ ಈ ಕಾಲದಲ್ಲಿ ಸಾವಯವ ಕೃಷಿ ಪದ್ಧತಿ ಮೂಲಕ ತೋಟಗಾರಿಕೆಯಲ್ಲಿ ಸಾಧನೆ ಮಾಡುತ್ತಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎಸ್.ಎಸ್. ಭಟ್ಟ ಗಮನ ಸೆಳೆಯುತ್ತಾರೆ.
ಎಸ್.ಎಸ್.ಭಟ್ಟ ನಿವೃತ್ತಿ ನಂತರ ಸುಮ್ಮನೆ ಕೂರಲಿಲ್ಲ. ಕುಮಟಾದ ಹೆರವಟ್ಟಾದಲ್ಲಿ ಜಾಗ ಖರೀದಿಸಿ ಅಲ್ಲಿ ತೋಟ ನಿರ್ಮಿಸಿ ಸಾವಯವ ಪದ್ಧತಿಯಲ್ಲಿ ಕೃಷಿ ಕೈಕೊಂಡಿದ್ದಾರೆ. ಸ್ಥಳೀಯವಾಗಿ ಬೆಳೆಯುವ ‘ಮಿಟಕಾ’ ತಳಿಯ ಬಾಳೆಗೊನೆಗೆ ಎಲ್ಲಿಲ್ಲದ ಬೇಡಿಕೆ ಇದೆ. ಅವರ ತೋಟದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಮೊದಲ ವರ್ಷ ಬೆಳೆದ ಮಿಟಕಾ ಬಾಳೆಗೊನೆ ಸುಮಾರು 30 ಕೆ.ಜಿ. ಭಾರ ಇತ್ತು. ಇದನ್ನು ಕುಮಟಾ ಎ.ಪಿ.ಎಂ.ಸಿ.ಯಲ್ಲಿ ಪ್ರದರ್ಶನಕ್ಕಿಡಲಾಗಿತ್ತು. 1977-78ರಲ್ಲಿ ಸ್ಥಳೀಯ ಲಯನ್ಸ್ ಕ್ಲಬ್ ಏರ್ಪಡಿಸಿದ್ದ ಹಸುಗಳ ಸ್ಪರ್ಧೆಯಲ್ಲಿ ಎಸ್.ಎಸ್. ಭಟ್ಟರಿಗೆ ಮೊದಲ ಸ್ಥಾನ ಸಿಕ್ಕಿದೆ. ಕೃಷಿಯಷ್ಟೇ ಅಲ್ಲ ಕ್ರೀಡೆಯಲ್ಲೂ ಮುಂದಿರುವ ಎಸ್.ಎಸ್. ಭಟ್ಟ 2009 ರಲ್ಲಿ ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ್ದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಾಹಸ ಚಟುವಟಿಕೆಯಲ್ಲಿ ಸದಾ ಮುಂದಿರುವ ಇರುವ ಹಿಮಾಲಯ ಪರ್ವತಾರೋಹಣ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಿವೃತ್ತಿ ನಂತರ ಮೋಟಾರ್ ಬೈಕ್ನಲ್ಲಿ ಹೈದರಾಬಾದ್ ರಾಮೋಜಿ ಫಿಲಂ ಸಿಟಿಗೆ ಭೇಟಿ ನೀಡಿ ಬಂದಿದ್ದಾರೆ. ಎಸ್.ಎಸ್. ಭಟ್ಟ ಸಾವಯವ ಕೃಷಿಯ ಬಗ್ಗೆ ಇಂದಿಗೂ ಯುವಕರಿಗೆ ಮಾರ್ಗದರ್ಶನ ನೀಡುತ್ತಾರೆ. ಸಾವಯವ ಗೊಬ್ಬರ, ನೈಸರ್ಗಿಕ ಕ್ರಿಮಿನಾಶಕವನ್ನು ಹಿತ್ತಲ ಗಿಡಗಳಿಂದ ಹೇಗೆ ತಯಾರಿಸಬೇಕು ಎನ್ನವುದನ್ನು ಯುವಕರಿಗೆ ತಿಳಿಸಿಕೊಡಲು ಇವರಿಗೆ ಸದಾ ಆಸಕ್ತಿ.