ಲಕ್ಷ್ಮೇಶ್ವರ: `ಕಡಿಮೆ ಬಂಡವಾಳದಲ್ಲಿ ಒಕ್ಕಲುತನ ಮಾಡಿ ಉತ್ತಮ ಫಸಲು ಪಡೆಯಲು ಸಾವಯವ ಕೃಷಿ ಬಹಳ ಅನುಕೂಲವಾಗಿದೆ~ ಎಂದು ಸಮೀಪದ ಅಡರಕಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಗೌಡ ಪಾಟೀಲ ಹೇಳಿದರು.
ಗ್ರಾಮದ ಬಸವೇಶ್ವರ ಸಾವಯವ ಕೃಷಿಕರ ಸಂಘದ ವತಿಯಿಂದ ಈಚೆಗೆ ಸಾವಯವ ಕೃಷಿಕರಿಗೆ ಜೀವಾಮೃತ ತಯಾರಿಸಲು ಪ್ಲಾಸ್ಟಿಕ್ ಡ್ರಮ್ಗಳನ್ನು ವಿತರಿಸಿ ಅವರು ಮಾತನಾಡಿದರು. `ಮಳೆ ಕಡಿಮೆಯಾಗುತ್ತಿರುವ ಈಚಿನ ದಿನಗಳಲ್ಲಿ ಸಾವಯವ ಕೃಷಿ ರೈತರಿಗೆ ವರದಾನವಾಗಿದ್ದು ಎಲ್ಲ ರೈತರು ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು~ ಎಂದರು.
ಸಂಘದ ಅಧ್ಯಕ್ಷ ಕಲ್ಲಪ್ಪ ಗಂಗಣ್ಣವರ `ಸಾವಯವ ಕೃಷಿ ಕೈಗೊಳ್ಳುವ ರೈತರಿಗೆ ಅನೇಕ ಅನುಕೂಲಗಳನ್ನು ಸಂಘದ ವತಿಯಿಂದ ಮಾಡಿಕೊಡಲು ಉದ್ಧೇಶಿ ಲಾಗಿದ್ದು ಹಿಂಗಾರು ಬಿತ್ತನೆ ಬೀಜ ಗಳಾದ ಬಿಳಿಜೋಳ ಹಾಗೂ ಕುಸುಬಿ ಬೀಜಗಳನ್ನು ಸಂಘದ ಸದಸ್ಯರಿಗೆ ಉಚಿತವಾಗಿ ವಿತರಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಾವಯವ ಕೃಷಿ ಸಂಘದ ಸದಸ್ಯರಾಗಲು ಮುಂದೆ ಬರಬೇಕು~ ಎಂದು ಮನವಿ ಮಾಡಿದರು.
ಗಂಗನಗೌಡ ಪಾಟೀಲ, ಸೋಮಣ್ಣ ಭಂಗಿ, ಬಸವಂತಪ್ಪ ಡಂಬಳ, ಶೇಕಪ್ಪ ಮರಳಹಳ್ಳಿ,ದಾವಲಸಾಬ್ ಮತ್ತಿತರರು ಹಾಜರಿದ್ದರು.