ಲಕ್ಷ್ಮೇಶ್ವರ: ಸಮೀಪದ ಅಡರಕಟ್ಟಿ ಗ್ರಾಮದ ಬಹಳಷ್ಟು ರೈತರು ಈಗ ಸಾವಯವ ಕೃಷಿಯತ್ತ ಮನಸ್ಸು ಮಾಡಿದ್ದು ಗ್ರಾಮದಲ್ಲಿ ಈಗ ಎಲ್ಲಿ ನೋಡಿದರೂ ಎರೆಹುಳು ಗೊಬ್ಬರದ ತಯಾರಿಕಾ ಘಟಕಗಳು ಕಾಣುಸುತ್ತಿವೆ.
ಸಿಂಧನೂರಿನ ಕಿಸಾನ್ ಭಾರತಿ ಟ್ರಸ್ಟ್ ವತಿಯಿಂದ ಗ್ರಾಮದಲ್ಲಿ ಬಸವೇಶ್ವರ ಸಾವಯವ ಕೃಷಿಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು 52 ರೈತರು ಸಂಘದ ಸದಸ್ಯರಾಗಿದ್ದಾರೆ.
ಸೋಮವಾರ ಸಂಘದ ಕಚೇರಿಯಲ್ಲಿ ರೈತರಿಗಾಗಿ ಅಝೋಲ್ಲಾ ಉತ್ಪಾದನೆ ಕುರಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ಹುಲ ಕೋಟಿಯ ಕೆವಿಕೆಯ ಋಷಿ-ಕೃಷಿ ವಿಭಾಗದ ಆರ್ಟ್ ಆಫ್ ಲೀಗ್ನ ಸಂಯೋಜಕ ಸುರೇಶಗೌಡ ಪಾಟೀಲ ತರಬೇತುದಾರರಾಗಿ ಭಾಗವಹಿಸಿ ಅಝೋಲ್ಲಾ ಉತ್ಪಾದನೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಕೃಷಿ ಇಲಾಖೆ ಮತ್ತು ಬಸವೇಶ್ವರ ಸಾವಯವ ರೈತರ ಸಂಘದ ಸ್ಥಳಾಧಿಕಾರಿ ಟಿ.ಡಿ. ವೈಕುಂಠೆ ಸಾವಯವ ಕೃಷಿ ಮಹತ್ವ ಕುರಿತು ತಿಳಿಸಿದರು. ನಂತರ ರೈತರು ಕಟ್ಟಿಸಿಕೊಂಡ ಜೋಡಿ ಅಂಕಣದ ಎರೆಹುಳು ಗೊಬ್ಬರ ಮತ್ತು ಜಪಾನ್ ಮಾದರಿ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ, ಜೀವಾಮೃತ, ಗಂಜಲು ಸಂಗ್ರಹಿಸುವುದರ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.
ಬಸವೇಶ್ವರ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಕಲ್ಲಪ್ಪ ಗಂಗಣ್ಣವರ, ಕಿಸಾನ್ ಭಾರತಿ ಟ್ರಸ್ಟ್ನ ಕ್ಷೇತ್ರಾಧಿಕಾರಿ ದಾವಲಸಾಬ್ ಅಬ್ಬುನವರ, ಸಂಘದ ಸದಸ್ಯರಾದ ಬಸವರಾಜ ಗಡ್ಡೆಪ್ಪನವರ, ಚೆನ್ನಬಸಪ್ಪ ಹಳೇಮನಿ, ಬಸವಣ್ಣೆಪ್ಪ ರೊಳ್ಳಿ, ಯಲ್ಲಪ್ಪ ಹವಳದ, ಶಂಕ್ರಪ್ಪ ಮಳಗಿ ಹಾಜರಿದ್ದರು.