ಚಿಂತಾಮಣಿ: ತಾಲ್ಲೂಕಿನ ಕೈವಾರದ ಯೋಗಿ ನಾರೇಯಣ ಮಠದ ಸಾಂಸ್ಕೃತಿಕ ವೇದಿಕೆಯಾದ ನಾದಸುಧಾರಸ ಕಾರ್ಯಕ್ರಮ ಆರಂಭವಾಗಿ ಸೋಮವಾರಕ್ಕೆ ಒಂದು ಸಾವಿರ ದಿನವಾದ ಹಿನ್ನೆಲೆಯಲ್ಲಿ ಸಂಚಾಲಕ ಬಾಲಕೃಷ್ಣ ಭಾಗವತರ್ ನೇತೃತ್ವದಲ್ಲಿ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು.
ಸಂಗೀತ, ಕಲೆ, ಸಾಹಿತ್ಯ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಅಧ್ಯಾತ್ಮ ತತ್ವಗಳ ಜತೆಗೆ ಕಲೆಯ ಅವಸಾನವನ್ನು ತಡೆಗಟ್ಟಿ, ಬೆಳೆಯಲು ಪ್ರೋತ್ಸಾಹ ನೀಡುವ ಸಲುವಾಗಿ ನಾದಸುಧಾರಸ ವೇದಿಕೆಯನ್ನು ಹುಟ್ಟುಹಾಕಲಾಗಿದೆ. ರಾಷ್ಟ್ರೀಯ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರಿಗೂ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಬಾಲಕೃಷ್ಣ ಭಾಗವತರ್ ತಿಳಿಸಿದರು.
ನಾದೋಪಾಸನೆಯ ಮೂಲಕ ಅಧ್ಯಾತ್ಮ ವಿದ್ಯೆಯನ್ನು ಮನಸ್ಸಿಗೆ ನಾಟುವಂತೆ ಪ್ರಸರಿಸುವುದು ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಹಾಗೂ ಯೋಜನೆಯ ಗುರಿಯಾಗಿದೆ ಎಂದು ತಿಳಿಸಿದರು.
ವಿದ್ವಾನ್ ಮಾಧವದಾಸ್ ಮಾತನಾಡಿದರು. ಕಲಾವಿದರಾದ ನಾರಾಯಣಸ್ವಾಮಿ, ಶ್ರೀಹರಿಶರ್ಮ, ರಮೇಶಬಾಬು, ಟಿ.ಎಲ್.ಆನಂದ್, ಎಸ್.ಎನ್.ಜಗದೀಶ್ಕುಮಾರ್, ನಾರಾಯಣಪ್ಪ, ಹೇಮಕುಮಾರ್, ವೆಂಕಟರಮಣಯ್ಯ, ಸೂರ್ಯನಾರಾಯಣಾಚಾರಿ ಮತ್ತಿತರರು ಸಮೂಹ ಗಾಯನದಲ್ಲಿ ಭಾಗವಹಿಸಿದ್ದರು.