ಬೆಂಗಳೂರು: `ಸಾಹಿತಿಗಳು ಮತ್ತು ಪತ್ರಕರ್ತರಿಂದ ಮಾತ್ರ ಸಮಾಜವನ್ನು ರಕ್ಷಿಸಲು ಸಾಧ್ಯ~ ಎಂದು ಹಿರಿಯ ಸಾಹಿತಿ ಡಾ.ದೇ. ಜವರೇಗೌಡ ಹೇಳಿದರು.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನವನೀತ ಪ್ರಕಾಶನವು ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಗಮಕ ವಿದುಷಿ ಡಾ.ವಿಜಯಮಾಲಾ ರಂಗನಾಥ್ ಅವರ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
`ಸಾಹಿತಿ ಮತ್ತು ಪತ್ರಕರ್ತರು ನೈಜವಾಗಿ ಬರೆಯುವುದರಿಂದ ಇಂದಿನ ಸಮಾಜ ಉಳಿಯಲು ಸಾಧ್ಯವಾಗುತ್ತದೆ~ ಎಂದರು. ಏನನ್ನೇ ಆದರೂ ಅದನ್ನು ಆನಂದಿಸಿ ಅನುಭವಿಸಬೇಕು. ಯಾವುದೇ ಕೃತಿಗಳಾಗಲೀ ಅಥವಾ ಕವನ ಸಂಕಲನಗಳಾಗಳೀ ಕಲ್ಪನಾ ಶ್ರೀಮಂತತೆ ಮತ್ತು ವಾಸ್ತವಗಳಿಂದ ಕೂಡಿದಾಗಲೇ ಆ ಕೃತಿಗಳು ಮನ್ನಣೆ ಪಡೆಯುತ್ತವೆ~ ಎಂದು ನುಡಿದರು.
`ಉತ್ತಮ ಕೃತಿಗಳು ಕನ್ನಡ ಭಾಷೆಗೆ ಅವುಗಳದೇ ಆದ ಕೊಡುಗೆಯನ್ನು ನೀಡಿವೆ. ಸಮಾಜವನ್ನು ತಿದ್ದುವಲ್ಲೂ ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತಿವೆ~ ಎಂದು ಹೇಳಿದರು.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, `ನಾವು ಸಂಘಟನಾಕಾರರೇ ಹೊರತು ಭಾಷಣಕಾರರಲ್ಲ. ಮೇಲಾಗಿ ಸಾಹಿತಿಗಳು ಅಲ್ಲ. ಏಕೆಂದರೆ, ಸಾಹಿತ್ಯದಷ್ಟೇ ಸಂಘಟನೆಯೂ ಪ್ರಮುಖವಾಗಿದೆ~ ಎಂದರು.
`ಕನ್ನಡಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾದಾಗ ಕನ್ನಡ ಪರ ಸಂಘಟನೆಗಳ ಜತೆಗೆ ಸೇರಿ ಹೋರಾಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುಂಚೂಣಿಯಲ್ಲಿರುತ್ತದೆ~ ಎಂದು ಹೇಳಿದರು.
`ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಇನ್ನು ಮುಂದೆ ನಡೆಯುವ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಬಾಡಿಗೆಯಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡಲಾಗುವುದು~ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಎಲ್.ಎಸ್.ಶೇಷಗಿರಿರಾವ್, ಡಾ.ಸಿ.ಪಿ.ಕೃಷ್ಣಕುಮಾರ್, ಡಾ.ಮಳಲಿ ವಸಂತಕುಮಾರ್, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮತ್ತಿತರರು ಉಪಸ್ಥಿತರಿದ್ದರು.