ಮೈಸೂರಿನ ಕೆಲವು ಹಿರಿಯ ಸಾಹಿತಿ, ಚಿಂತಕರು ಬಿಜೆಪಿ ಅಧ್ಯಕ್ಷ ಕೆ. ಎಸ್. ಈಶ್ವರಪ್ಪ ಅವರು (ವಾ ವಾ ಮೇ 23) ಮಠಾಧೀಶರ ಬಗ್ಗೆ ಇತ್ತೀಚೆಗೆ ತಾಳಿದ ನಿಲುವಿಗೆ ಬೆಂಬಲ ಸೂಚಿಸಿದ್ದಾರೆ.
ಕೆಲವು ಮಠಾಧೀಶರು ಜಾತಿ ವ್ಯವಸ್ಥೆಯನ್ನು ಬೆಂಬಲಿಸುತ್ತಾರೆ ಅವರಿಗೆ ನನ್ನ ಧಿಕ್ಕಾರವಿದೆ ಎಂಬುದು ಈಶ್ವರಪ್ಪ ಅವರ ಹೇಳಿಕೆ. ಅವರು ಯಾವ ಸಂದರ್ಭದಲ್ಲಿ, ಯಾವ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಆಡಿದ್ದಾರೆ ಎನ್ನುವುದು ಇಲ್ಲಿ ಮುಖ್ಯ.
ಬಿಜೆಪಿ ಸರ್ಕಾರ ತನ್ನ ಬಜೆಟ್ನಲ್ಲಿ ಮಠ ಮಾನ್ಯಗಳಿಗೆ ಅನುದಾನ ನೀಡುವಾಗ ಈಶ್ವರಪ್ಪನವರಿಗೆ ಮಠಗಳ ಬಗ್ಗೆ ಅಪಾರ ವಿಶ್ವಾಸವಿತ್ತು. ಆಗ ಮಠಾಧೀಶರ ಜಾತಿ ನಿಲುವುಗಳ ಬಗ್ಗೆ ಅವರಿಗೆ ಗೊತ್ತಿರಲಿಲ್ಲವೇ?
ಯಡಿಯೂರಪ್ಪ ಅವರ ರಾಜಕೀಯದ ಇಳಿಗಾಲದ ಈ ಸಂದರ್ಭದಲ್ಲಿ ಪ್ರಜ್ಞಾ ಪೂರ್ವಕವಾಗಿ ಅವರು ರಾಜಕೀಯ ದುರುದ್ದೇಶದ ಈ ಹೇಳಿಕೆ ನೀಡಿದ್ದಾರೆ ಎಂಬುದು ಚಿಕ್ಕ ಮಕ್ಕಳಿಗೂ ಅರ್ಥವಾಗುತ್ತದೆ.
ಆರ್.ಎಸ್.ಎಸ್. ಹಿನ್ನೆಲೆಯ ಈಶ್ವರಪ್ಪ ಮಠಾಧಿಪತಿಗಳ ಕಾಲಿಗೆ ಬಿದ್ದವರೇ. ಅವರ ಬಾಯಲ್ಲಿ ಮಠಾಧಿಪತಿಗಳಿಗೆ ಧಿಕ್ಕಾರ ಹಾಕುವ ಮಾತು ಕೇಳಿ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಅವರ ಬೆಂಬಲಕ್ಕೆ ನಿಂತಿರುವ ಸಾಹಿತಿಗಳ ಹೇಳಿಕೆಯೂ ಹಾಸ್ಯಾಸ್ಪದ.
ನಾಳೆ ಮಾಧ್ಯಮದವರ ಮುಂದೆ ನಾನು ಹಾಗೇ ಹೇಳಿಯೇ ಇಲ್ಲ ಎಂದು ಈಶ್ವರಪ್ಪನವರು ಹೇಳಬಹುದು. ಇಂತಹ `ಧೀಮಂತ ನಾಯಕ~ನನ್ನು ಗುರುತಿಸಿದ ಮೈಸೂರಿನ ಈ ಸಾಹಿತಿಗಳನ್ನು ಏನೆಂದು ಕರೆಯೋಣ?