ಮಡಿಕೇರಿ: ವಿದ್ಯಾರ್ಥಿಗಳು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿಯೇ ಕಥೆ, ಕವನ, ಪ್ರಬಂಧ ಮತ್ತಿತರ ಸಾಹಿತ್ಯ ಬರವಣಿಗೆಯಲ್ಲಿ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಸಾಹಿತ್ಯ ಕಮ್ಮಟವನ್ನು ಅವರು ಮಾತನಾಡಿದರು.
ಸಾಹಿತ್ಯ ಬೆಳವಣಿಗೆಗೆ ಹಲವು ಮಹಾನ್ ಕವಿಗಳು, ಬರಹಗಾರರು, ಲೇಖಕರು ಕಾರಣಕರ್ತರಾಗಿದ್ದಾರೆ. ಅದೇ ರೀತಿ ವಿದ್ಯಾರ್ಥಿಗಳು ಸಹ ಚಿಕ್ಕಂದಿನಿಂದಲೇ ಓದಿನ ಜೊತೆಗೆ ಸಾಹಿತ್ಯದ ಆಸಕ್ತಿ ಕಡೆ ಗಮನ ಹರಿಸಿದರೆ ಹೆಚ್ಚಿನ ಜ್ಞಾನಾರ್ಜನೆ ಹೊಂದಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಪ್ರಕೃತಿ ದತ್ತವಾದ ಕೊಡಗಿನಲ್ಲಿ ಕತೆ, ಕವನ, ಪ್ರಬಂಧ ಮತ್ತಿತರ ಸಾಹಿತ್ಯ ರಚನೆಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು, ಮರ, ಗಿಡ, ಬೆಟ್ಟ-ಗುಡ್ಡ, ಪರಿಸರ, ಪ್ರಕೃತಿಯ ಸೌಂದರ್ಯ ಹೀಗೆ ನಾನಾ ವಿಷಯಗಳ ಬಗ್ಗೆ ಬರೆಯುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಎಚ್.ಆರ್.ಮುತ್ತಪ್ಪ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಿ, ಸಾಹಿತಿ ಮಂಡೇಪಂಡ ಗೀತಾಮಂದಣ್ಣ, ಲೇಖಕಿ ಬೈತಡ್ಕ ಜಾನಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಜಯರಾಂ, ಶಾರದ ರಾಮನ್, ಯಶೋಧ, ಕೆ. ಅಪ್ಪಯ್ಯ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ವಿಕಲಚೇತನರ ಅಭಿವೃದ್ಧಿ ಅಧಿಕಾರಿ ನೀರಬಿದರೆ ನಾರಾಯಣ ನಿರೂಪಿಸಿದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಅನಿತಾ ವಂದಿಸಿದರು.