ಮಡಿಕೇರಿ: ಮಂಜಿನ ನಡುವೆ ಮದುವಣಗಿತ್ತಿಯಂತೆ ಶೃಂಗಾರಗೊಂಡು ನಿಂತಿದ್ದ ನಿಸರ್ಗ ರಮಣೀಯ ನಗರಿಯಲ್ಲಿ ಮಂಗಳವಾರ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಮೂಲಕ ಚಾಲನೆ ದೊರೆಯಿತು.
ನಗರದ ಗಾಂಧಿ ಮೈದಾನದಿಂದ ಬೆಳಿಗ್ಗೆ ಆರಂಭವಾದ ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರ ಮೆರವಣಿಗೆಯಲ್ಲಿ ನಾಡಿನ ಮೂಲೆ ಮೂಲೆಯಿಂದ ಬಂದಿದ್ದ ಸುಮಾರು 80 ಕಲಾತಂಡಗಳು ಸೇರಿದಂತೆ ಸ್ತಬ್ಧ ಚಿತ್ರಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದವು.
32 ವರ್ಷಗಳ ನಂತರ ಮೂರನೇಯ ಬಾರಿಗೆ ನಡೆಯುತ್ತಿರುವ ಈ ಅಕ್ಷರ ಜಾತ್ರೆಗೆ ಸಮರೋಪಾದಿಯಲ್ಲಿ ಸಿದ್ಧಗೊಂಡಿರುವ ನಗರದಲ್ಲಿ ಎಲ್ಲೇಡೆ ಕನ್ನಡದ ಕಂಪು ಮನೆಮಾಡಿದೆ. ಡಿಸೋಜ ಅವರನ್ನು ಹೊತ್ತ ಸಾಹಿತ್ಯರಥವು ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಕಾಲೇಜಿನ ಮೈದಾನದಲ್ಲಿರುವ ಸಮ್ಮೇಳನದ ಪ್ರಧಾನ ವೇದಿಕೆ ತಲುಪಿತು.