ಮಡಿಕೇರಿ: ಜನವರಿ 7ರಿಂದ ಮೂರು ದಿನಗಳ ಕಾಲ ನಗರದಲ್ಲಿ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗೆ ಮತ್ತೊಂದು ವಿಘ್ನ ಎದುರಾಗಿದೆ. ಮಡಿಕೇರಿ ನಗರಸಭೆಗೆ ಡಿಸೆಂಬರ್ ತಿಂಗಳೊಳಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಮಾಡುತ್ತಿರುವುದು ಕಸಾಪ ಪದಾಧಿಕಾರಿಗಳಲ್ಲಿ, ಸಾಹಿತ್ಯಾಸಕ್ತರಲ್ಲಿ ಆತಂಕ ಮೂಡಿಸಿದೆ.
ಆರು ತಿಂಗಳ ಹಿಂದೆ ನಗರಸಭೆಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ವಾರ್ಡ್ ಮೀಸಲಾತಿಯನ್ನು ಪ್ರಕಟಿಸಿತ್ತು. ಈ ಮೀಸಲಾತಿಯನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಚುನಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ತನ್ನ ಆದೇಶವನ್ನು ಹಿಂದಕ್ಕೆ ಪಡೆದಿದ್ದು, ಚುನಾವಣೆ ನಡೆಸಲು ಹಸಿರು ನಿಶಾನೆ ತೋರಿದೆ ಎಂದು ಹೇಳಲಾಗುತ್ತಿದೆ.
‘ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ ಎಂದು ನಾವು ಕೂಡ ಕೇಳಿದ್ದೇವೆ. ಆದರೆ, ಆದೇಶ ಇನ್ನೂ ನಮ್ಮ ಕೈಸೇರಿಲ್ಲ. ಹಾಗೊಂದು ವೇಳೆ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದ್ದು ನಿಜವೇ ಆದರೆ, ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಇದಕ್ಕೆ ಪೂರಕ ಎನ್ನುವಂತೆ ರಾಜ್ಯ ಚುನಾವಣಾ ಆಯುಕ್ತ ಚಿಕ್ಕಮಠ ಅವರು ಮಡಿಕೇರಿಗೆ ಭೇಟಿ ಮಾಡಿ ಚುನಾವಣೆ ಸಿದ್ಧತೆ ಬಗ್ಗೆ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ತಿಂಗಳು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅಧಿಕಾರಿಗಳು ಚುನಾವಣಾ ಆಯುಕ್ತರ ಗಮನಕ್ಕೆ ತಂದಿದ್ದಾರೆ. ಸಾಹಿತ್ಯ ಸಮ್ಮೇಳನದ ಹಲವು ಸಮಿತಿಗಳಲ್ಲಿ ಅಧಿಕಾರಿಗಳು ಇದ್ದಾರೆ. ಚುನಾವಣೆ ಘೋಷಣೆಯಾದರೆ ಅವರಿಗೆ ಸಮ್ಮೇಳನ ಕೆಲಸ ಕಾರ್ಯಗಳನ್ನು ಮಾಡಲು ಕಷ್ಟವಾಗುತ್ತದೆ ಎನ್ನುವುದನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳ ಪಾತ್ರ: ‘ಸಾಹಿತ್ಯ ಸಮ್ಮೇಳನ ಆಯೋಜನೆಯಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದಾಗಿದೆ. ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡದಿದ್ದರೆ ಒಂದು ಲಕ್ಷದಷ್ಟು ಜನರು ಸೇರುವ ಬೃಹತ್ ಮಟ್ಟದ ಸಮ್ಮೇಳನವನ್ನು ನಡೆಸುವುದು ಕಷ್ಟವಾಗುತ್ತದೆ. ಈಗ ಚುನಾವಣೆ ದಿನಾಂಕ ಘೋಷಿಸಿದರೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತದೆ. ಆನಂತರ ಅಧಿಕಾರಿಗಳು ಸಮ್ಮೇಳನದ ಕೆಲಸದಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಾರೆ’ ಎಂದು ಕಸಾಪ ಪದಾಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ.
ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಹಾಗೂ ಸಂಚಾಲಕರಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮ್ಮೇಳನ ನಡೆಯುವ ಮಡಿಕೇರಿಯ ನೈರ್ಮಲ್ಯ ಕಾಪಾಡುವ ಜವಾಬ್ದಾರಿಯನ್ನು ನಗರಸಭೆಯ ಆಯುಕ್ತರು ಹೊತ್ತುಕೊಂಡಿದ್ದಾರೆ. ಸಂಚಾರ ಕಾನೂನು ಮತ್ತು ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷರಾಗಿ ಡಿವೈಎಸ್ಪಿ ನೇಮಕಗೊಂಡಿದ್ದಾರೆ.
ಮುಖ್ಯವಾಗಿ ಸಮ್ಮೇಳನದ ವಿವಿಧ ಕಾರ್ಯಗಳಿಗೆ ಟೆಂಡರ್ ಕರೆಯುವ ಟೆಂಡರ್ ಸಮಿತಿಯ ಜವಾಬ್ದಾರಿಯು ಜಿಲ್ಲಾ ಯೋಜನಾಧಿಕಾರಿ ಹಾಗೂ ಸಂಚಾಲಕರಾದ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಸೇರಿದೆ.ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಈ ಅಧಿಕಾರಿಗಳಿಗೆ ಸಮ್ಮೇಳನದ ಕೆಲಸದಲ್ಲಿ ಭಾಗಿಯಾಗಲು ಅಡ್ಡಿಯಾಗಬಹುದು.
ಟೆಂಡರ್ ಆಹ್ವಾನ ಕಷ್ಟ:ಸಮ್ಮೇಳನ ಆಯೋಜಿಸಲು ಹಣದ ಕೊರತೆಯಿಂದಾಗಿ ಪರದಾಡುತ್ತಿರುವ ಸಮಿತಿಗೆ ವಿವಿಧ ಕಾರ್ಯಗಳಿಗೆ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ (ಆಹಾರ ಪೂರೈಕೆಗೆ ಮಾತ್ರ ಟೆಂಡರ್ ಕರೆಯಲಾಗಿದೆ). ಸಮ್ಮೇಳನಕ್ಕೆ ಕೇವಲ 36 ದಿನಗಳು ಬಾಕಿ ಉಳಿದಿದ್ದು, ಇದುವರೆಗೆ ವೇದಿಕೆ ನಿರ್ಮಾಣ, ವಸತಿ ಸೌಕರ್ಯ, ಸಾರಿಗೆ ಸೌಕರ್ಯ, ಸ್ಮರಣ ಸಂಚಿಕೆ ಮುದ್ರಣ ಸೇರಿದಂತೆ ವಿವಿಧ ಕಾರ್ಯಗಳಿಗೆ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾದರೆ, ಟೆಂಡರ್ ಕರೆಯಲು ಸಾಧ್ಯವಾಗುವುದಿಲ್ಲ. ಎಲ್ಲ ಕೆಲಸಗಳು ಅರ್ಧಕ್ಕೆ ನಿಂತುಹೋಗಿ ಬಿಡುತ್ತದೆ ಎನ್ನುವ ಆತಂಕದಲ್ಲಿ ಕಸಾಪ ಪದಾಧಿಕಾರಿಗಳಿದ್ದಾರೆ.
‘ಸಿ.ಎಂ ಗಮನಕ್ಕೆ ತರುತ್ತೇನೆ’
ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಹಿತ್ಯ ಸಮ್ಮೇಳನ ಹೊಸ್ತಿಲಲ್ಲಿ ಬಂದು ನಿಂತಿದೆ. ಇಂತಹ ಸಮಯದಲ್ಲಿ ಚುನಾವಣೆ ಘೋಷಣೆಯಾದರೆ ಸಮ್ಮೇಳನ ನಡೆಸುವುದು ಬಹಳ ಕಷ್ಟವಾಗುತ್ತದೆ. ನಮ್ಮ ಈ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹದೇವಪ್ಪ ಅವರ ಗಮನಕ್ಕೆ ತರುತ್ತೇನೆ.
–ಟಿ.ಪಿ. ರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.