ಭಾಲ್ಕಿ: ಭಾಷೆಯೇ ಸಾಹಿತ್ಯದ ಜೀವಾಳ. ಸಾಹಿತ್ಯದಿಂದ ಸಂಸ್ಕೃತಿಯ ಅಭಿವೃದ್ಧಿಯಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ಪ್ರಾಚಾರ್ಯ ಪ್ರೊ. ಅನ್ನಪೂರ್ಣಾ ಸಜ್ಜನ್ ಅಭಿಪ್ರಾಯಪಟ್ಟರು. ಪಟ್ಟಣದ ಭಾಲ್ಕೇಶ್ವರ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾರಂಭ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಡಿ. ಹುನಗುಂದ ಮಾತನಾಡಿ, ಆರಂಭಿಕ ಅಕ್ಷರ ಜ್ಞಾನವು ಮಾತೃಭಾಷೆಯಲ್ಲೇ ಆದರೆ ಪರಿಣಾಮಕಾರಿ ಕಲಿಕೆ ಸಾಧ್ಯವಾಗುತ್ತದೆ ಎಂದರು. ನಾಡಿನ ಕಲೆ, ಸಂಸ್ಕೃತಿಯ ಅರಿವು ಮಕ್ಕಳಿಗೆ ಬಾಲ್ಯದಿಂದಲೇ ಆಗಬೇಕು ಎಂದು ಹೇಳಿದರು. ರಾಷ್ಟ್ರಕವಿ ಕುವೆಂಪು ಅವರ ಬದುಕು ಮತ್ತು ಬರಹದ ಬಗ್ಗೆ ಪ್ರೊ ಶರಣಯ್ಯ ಮಠಪತಿ ಉಪನ್ಯಾಸ ಮಂಡಿಸಿದರು. ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಕಸಾಪ ತಾಲೂಕು ಅಧ್ಯಕ್ಷ ಸುಭಾಷ ಹುಲಸೂರೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸಂಘದ ಅಧ್ಯಕ್ಷ ಷಡಕ್ಷರಿ ಹಿರೇಮಠ, ಶಿವಶರಣಯ್ಯ ಸ್ವಾಮಿ, ಧನರಾಜ ಪಾಟೀಲ, ದಿನೇಶ, ಶಿವಾನಂದ ಬಾಳೂರ, ಬಸವಕುಮಾರ, ಪಂಕಜ್ ಮುಂತಾದವರು ವೇದಿಕೆಯಲ್ಲಿದ್ದರು. ಕಿರಣ ಚಾಕೋತೆ ನಿರ್ವಹಿಸಿದರು. ಬಾಲಾಜಿ ಬಿರಾದಾರ ಸ್ವಾಗತಿಸಿದರು. ಸುನಿತಾ ಸಂಗೊಳಗೆ ವಂದಿಸಿದರು.